ಲೋಕಸಭಾ ಚುನಾವಣೆಯ ಅಂಚೆ ಮತ ಪತ್ರ ಎಣಿಕೆ: ಅಧಿಕಾರಿಗಳಿಗೆ ತರಬೇತಿ

KannadaprabhaNewsNetwork |  
Published : Jun 02, 2024, 01:45 AM IST
3 | Kannada Prabha

ಸಾರಾಂಶ

ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಜರುಗಲಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8000 ಹೆಚ್ಚಿನ ಅಂಚೆ ಮತ ಮತಪತ್ರಗಳು ಸ್ವೀಕೃತಗೊಂಡಿವೆ. ಘೋಷಣೆ ಪತ್ರದಲ್ಲಿನ ಮಾಹಿತಿ ಆಧಾರದ ಮೇಲೆ ಸಿಂಧು ಅಥವಾ ಅಸಿಂಧು ಎಂದು ಪರಿಗಣಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಲೋಕಸಭಾ ಚುನಾವಣೆಯ ಮತಪತ್ರ ಎಣಿಕೆಯ ಕಾರ್ಯವನ್ನು ಜೂ.4 ರಂದು ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತದ ವತಿಯಿಂದ ಶನಿವಾರ ಕಲಾಮಂದಿರದಲ್ಲಿ ಎಆರ್‌ಓಗಳು, ವಿವಿಧ ಚುನಾವಣಾಧಿಕಾರಿಗಳು ಹಾಗೂ ಮತ ಎಣಿಕೆ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಗಳಿಂದ ಮತಪತ್ರ ಎಣಿಕೆಯ ವಿಧಾನದ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಜರುಗಲಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8000 ಹೆಚ್ಚಿನ ಅಂಚೆ ಮತ ಮತಪತ್ರಗಳು ಸ್ವೀಕೃತಗೊಂಡಿವೆ. ಘೋಷಣೆ ಪತ್ರದಲ್ಲಿನ ಮಾಹಿತಿ ಆಧಾರದ ಮೇಲೆ ಸಿಂಧು ಅಥವಾ ಅಸಿಂಧು ಎಂದು ಪರಿಗಣಿಸಲಾಗುತ್ತದೆ.

ಈ ಸಂದರ್ಭದಲ್ಲಿ ಜಿಲ್ಲಾ ಮಾಸ್ಟರ್ ಟ್ರೈನರ್ ಆದಂತಹ ಸತೀಶ್ ಮಾತನಾಡಿ, ಮತದಾನ ಎನ್ನುವುದು ಎಷ್ಟು ಮುಖ್ಯವೋ ಹಾಗೆ ಮತ ಎಣಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿಯು ಮತ ಎಣಿಕೆ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾರ್ಯವನ್ನು ನಿರ್ವಹಿಸುವುದು ಬಹಳ ಮುಖ್ಯ ಎಂದರು.

ಪ್ರತಿಯೊಂದು ಕ್ಷೇತ್ರದಲ್ಲೂ 14 ಟೇಬಲ್ ಗಳು ಇದ್ದು, 500 ಅಂಚೆ ಮತಪತ್ರಗಳನ್ನು ಹಂಚಲಾಗುತ್ತದೆ. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸ್ವೀಕೃತವಾದಂತಹ ಹಾಗೂ ತಿರಸ್ಕೃತಗೊಂಡಂತಹ ಮತ ಪತ್ರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು. ನಂತರದಲ್ಲಿ ತಿರಸ್ಕೃತಗೊಂಡಂತಹ ಮತಪತ್ರಗಳನ್ನು ಚುನಾವಣಾ ಅಧಿಕಾರಿಗಳಿಗೆ ನೀಡಿ ಅವರಿಂದ ಅಂತಿಮ ಪರಿಶೀಲನೆಯನ್ನು ನಡೆಸಬೇಕು. ಅವರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದರು.

ಅಂಚೆ ಮತ ಪತ್ರ ಎಂಬುದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಎಲ್ಲರೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಮತಪತ್ರ ಎಣಿಕೆಯನ್ನು ಮಾಡಬೇಕಾಗಿದ್ದು, ಇದರಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾದರೂ ಎಆರ್ ಓಗಳ ಗಮನಕ್ಕೆ ತರುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ರಘು ಮಾತನಾಡಿ, ಮತದಾನದ ಗೌಪ್ಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪ್ರಮಾಣ ಪ್ರತಿಜ್ಞಾನಿಧಿಯನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಪ್ರತಿಯೊoದು ಮತಪತ್ರ ಎಣಿಕೆಯ ಕೇಂದ್ರಕ್ಕೂ ಒಬ್ಬರು ಚುನಾವಣಾ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದ್ದು, ಅವರು ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ. ಬದಲಾಗಿ ಮತ ಎಣಿಕೆಯ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ಅವರು ತಿಳಿಸಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ, ವಿರಾಜಪೇಟೆ, ಚಾಮುಂಡೇಶ್ವರಿ ಕ್ಷೇತ್ರ, ಕೃಷ್ಣರಾಜ ಕ್ಷೇತ್ರ ಹಾಗೂ ನರಸಿಂಹರಾಜ ಕ್ಷೇತ್ರದ ಎಆರ್ ಓಗಳು, ಕೃಪಾ ಗಣೇಶ್, ಚುನಾವಣಾ ಮತ ಎಣಿಕೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ