ಮಾಗಡಿ: ತಾಲೂಕಿನ ನೇತೇನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಅಗತ್ಯ ಸದಸ್ಯರು ಗೈರು ಹಾಜರಾಗಿದ್ದ ಕಾರಣ ಮಂಗಳವಾರದ ಸಭೆಯನ್ನು ಮುಂದೂಡಲಾಗಿದೆ ಎಂದು ಪಿಡಿಒ ರಾಕೇಶ್ ತಿಳಿಸಿದ್ದಾರೆ.
ಪ್ರತಿ ಬಾರಿಯೂ ಕೋರಂ ಇಲ್ಲದೆ ಸಭೆಯನ್ನು ಮುಂದೂಡುತ್ತಾ ಬಂದಿದ್ದು ಸಾರ್ವಜನಿಕರ ಕೆಲಸ ಮಾತ್ರ ಆಗುತ್ತಿಲ್ಲ. ಸದಸ್ಯರ ಕಿತ್ತಾಟದಿಂದ ಪಂಚಾಯಿತಿ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ನರೇಗಾ ಯೋಜನೆಯಡಿ ಕಾಮಗಾರಿ ಮಾಡಲು ಹೊರಟರೆ ಸದಸ್ಯರೇ ಅಡ್ಡಿಪಡಿಸುತ್ತಿದ್ದು, ಇದರಿಂದ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಕಳೆದ ಎಂಟು ತಿಂಗಳಿಂದ ಇ- ಖಾತೆ ನೀಡದೆ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಸರಿಯಾಗಿ ಕಂದಾಯ ಕಟ್ಟಿದರು ಕೂಡ ಸದಸ್ಯರುಗಳ ಕಿತ್ತಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಪಿಡಿಒ ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಹಣ ಬಿಡುಗಡೆಗೆ ಒತ್ತಾಯ:ಕಳೆದ ಮೂರು ವರ್ಷದ ಹಿಂದೆ ಕಾಲುವೆ ದುರಸ್ತಿ ಕೆಲಸವನ್ನು ರಾಕೇಶ್ ಎಂಬ ಗುತ್ತಿಗೆದಾರರು ಹಿಂದಿನ ಪಿಡಿಒ ರಮೇಶ್ ಅವಧಿಯಲ್ಲಿ ಕೆಲಸ ಮಾಡಲಾಗಿದೆ. ಆದರೆ ಕಾಮಗಾರಿಗೆ ಆ್ಯಕ್ಷನ್ ಪ್ಲಾನ್ ಪಡೆದಿಲ್ಲ ಎಂದು ಕಳೆದ ಮೂರು ವರ್ಷದಿಂದಲೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪಿಡಿಒ ರಾಕೇಶ್ ವಿರುದ್ಧ ಗಲಾಟೆ ಮಾಡಲಾಯಿತು. ನಾನು ಮಾಡಿರುವ ಕಾಮಗಾರಿಗೆ ಬಿಲ್ ಮಾಡದೆ ನನಗೆ ಮೋಸ ಮಾಡುತ್ತಿದ್ದು ಪಂಚಾಯಿತಿಯಲ್ಲಿ ಇನ್ನು ಮುಂದೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ. ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪಿಡಿಒ ರಮೇಶ್ ಮಾತನಾಡಿ, ಆಕ್ಷನ್ ಪ್ಲಾನ್ ಇಲ್ಲದೆ ನಾನು ಹಣ ಬಿಡುಗಡೆ ಮಾಡಲ್ಲ ಸರ್ಕಾರದ ನಿಯಮ ಪ್ರಕಾರವೇ ನಾನು ಇಲ್ಲಿ ಕೆಲಸ ಮಾಡುತ್ತಿದ್ದು ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡುತ್ತಿಲ್ಲ ಎಂದು ಉತ್ತರಿಸಿದರು. ಸಭೆಯಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.16 ಜನ ಸದಸ್ಯರ ಪೈಕಿ ಕೇವಲ ಏಳು ಜನ ಸದಸ್ಯರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.
ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷ ವರಲಕ್ಷ್ಮಮ್ಮ, ಸದಸ್ಯರಾದ ಪ್ರಕಾಶ್, ಕಲಾ, ಶ್ರೀನಿವಾಸ್, ನಾಗರತ್ನ ಸ್ವಾಮಿ, ಲಕ್ಷ್ಮಮ್ಮ ರಾಮಯ್ಯ, ಸಾಕಮ್ಮ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.(ಫೋಟೋ ಕ್ಯಾಫ್ಷನ್)