ಅಪಘಾತ ತಡೆ ಸಂಚಾರ ನಿಯಮ ಉಲ್ಲಂಘನೆಗೆ ಆಧುನಿಕ ಉಪಕರಣ ಬಳಕೆ

KannadaprabhaNewsNetwork | Published : Jun 26, 2024 12:34 AM

ಸಾರಾಂಶ

ಪ್ರಸ್ತಕ ವರ್ಷದಿಂದ ಇಲ್ಲಿವರೆಗೆ 300 ರಸ್ತೆ ಅಪಘಾತ ಸಂಭವಿಸಿವೆ. 118 ಜನ ಮೃತಪಟ್ಟಿದ್ದಾರೆ.

ಬಳ್ಳಾರಿ: ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ, ಅಪಘಾತ ನಿಯಂತ್ರಣ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿ ನಿಗಾ ವಹಿಸಲಾಗುತ್ತಿದೆ ಎಂದು ಎಸ್ಪಿ ರಂಜಿತಕುಮಾರ ಬಂಡಾರು ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಸ್ತಕ ವರ್ಷದಿಂದ ಇಲ್ಲಿವರೆಗೆ 300 ರಸ್ತೆ ಅಪಘಾತ ಸಂಭವಿಸಿವೆ. 118 ಜನ ಮೃತಪಟ್ಟಿದ್ದಾರೆ. 436 ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದರು.

ಸಂಚಾರ ನಿಯಮ ಉಲ್ಲಂಘನೆಗೆ ಸ್ಪೀಡ್ ಲೇಸರ್ ಗನ್, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬ್ರೀಥ್ ಅಲ್ಕೋಹಾಲ್ ಎನಲೈಜರ್ ಸಾಧನಗಳು ಸಿಟಿಆರ್‌ಎಸ್ ಕಚೇರಿಯಿಂದ ಸರಬರಾಜು ಆಗಿದ್ದು, ಇವುಗಳ ಬಗ್ಗೆ ಈಗಾಗಲೇ ಎಲ್ಲ ಪೊಲೀಸರಿಗೆ ತರಬೇತಿ ನೀಡಲಾಗಿದೆ ಎಂದರು.

ಸ್ಪೀಡ್ ಲೇಸರ್ ಗನ್:

ಸ್ಪೀಡ್ ಲೇಸರ್ ಗನ್ ಉಪಕರಣವು ಸಂಪೂರ್ಣ ಡಿಜಿಟಲ್ ಆಗಿದ್ದು, ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯಾದಲ್ಲಿ ಅಂದಿನ ದಿನಾಂಕ, ಪ್ರಿಂಟ್ ದಿನಾಂಕ, ಸೌಂಡ್ ಡೆಸಿಬಲ್ ಮಾಹಿತಿ, ಸ್ಥಳ ಹಾಗೂ ವಾಹನದ ನೋಂದಣಿ ಸಂಖ್ಯೆ ಸೇರಿ ಸ್ವಯಂಚಾಲಿತವಾಗಿ ಈ ಉಪಕರಣವು ರೆಕಾರ್ಡ್ ಮಾಡಿಕೊಳ್ಳುತ್ತದೆ ಎಂದು ಹೇಳಿದರು.

ಈ ಉಪಕರಣವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಬಹುದು. ಅಪಾಯಕಾರಿ ಚಾಲನೆ, ಅತಿ ವೇಗ, ಚಾಲನೆ ಮಾಡುವಾಗ ಮೊಬೈಲ್ ಬಳಕೆ, ವೀಲಿಂಗ್, ರೇಸಿಂಗ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ದ್ವಿ-ಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರ ಚಾಲನೆ, ಸಿಗ್ನಲ್ ಜಂಪ್‌, ಮಾದಕದ್ರವ್ಯ ಅಮಲಿನಲ್ಲಿ ವಾಹನ ಚಾಲನೆ ಸೇರಿದಂತೆ ಇನ್ನು ಮುಂತಾದ ಸಂಚಾರ ನಿಯಮ ಉಲ್ಲಂಘನೆ ಗುರುತಿಸಿ ಕೇಸು ಹಾಕಬಹುದು ಎಂದರು.

ವಾಹನ ಸವಾರರು ಅನಾವಶ್ಯಕವಾಗಿ ಪೊಲೀಸರೊಂದಿಗೆ ವಾಗ್ವಾದ ಮಾಡುವುದನ್ನು ತಪ್ಪಿಸಲು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಾಕ್ಷ್ಯಾಧಾರ ಸಂಗ್ರಹಿಸುತ್ತದೆ ಎಂದರು.

ಬ್ರೀಥ್ ಅಲ್ಕೋಹಾಲ್ ಎನಲೈಜರ್:

ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಬ್ರೀಥ್ ಅಲ್ಕೋಹಾಲ್ ಎನಲೈಜರ್ ಡಿಜಿಟಲ್ ಉಪಕರಣ ಬಳಸಲಾಗುತ್ತಿದೆ. ಇಂಥವರ ಭಾವಚಿತ್ರದ ಸಮೇತ ಮಾಹಿತಿ ದಾಖಲಾಗುತ್ತದೆ ಎಂದರು.

ತುರ್ತು ಸೇವೆಗಳಿಗೆ 112 ಗೆ ಕರೆಮಾಡಿ:

ಸಾರ್ವಜನಿಕರು ಯಾವುದೇ ದೌರ್ಜನ್ಯ, ಗಲಾಟೆ, ಹಲ್ಲೆ, ದೊಂಬಿ, ಕಳ್ಳತನ, ರಸ್ತೆ ಅಪಘಾತ, ಇತರೆ ತುರ್ತು ಸೇವೆಗಳಿಗೆ 112 ಸಂಖ್ಯೆಗೆ ಕರೆ ಮಾಡಿದರೆ ಪೊಲೀಸ್ ಸೇವೆ ಪಡೆಯಬಹುದಾಗಿದೆ. ಕರೆ ಮಾಡಿದ 15 ನಿಮಿಷದೊಳಗೆ ಘಟನಾ ಸ್ಥಳಕ್ಕೆ ಆಗಮಿಸಿ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಎಸ್ಪಿ ಹೇಳಿದರು.

ಸಂಚಾರ ಠಾಣೆ ಪಿಐ ಅಯ್ಯನಗೌಡ ಪಾಟೀಲ್ ಸ್ಪೀಡ್ ಲೇಸರ್ ಗನ್, ಬ್ರೀಥ್ ಅಲ್ಕೋಹಾಲ್ ಎನಲೈಜರ್ ಉಪಕರಣ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.

ಈ ವೇಳೆ ಎಎಸ್ಪಿ ನವೀನಕುಮಾರ್, ಡಿಎಆರ್ ಡಿಎಸ್‍ಪಿ ಬಿ.ತಿಪ್ಪೇಸ್ವಾಮಿ ಸಿಬ್ಬಂದಿ ಇದ್ದರು.

Share this article