ಮಾಗಡಿ: ದಾಯಾದಿ ಕಲಹಕ್ಕೆ ಗೆಣಸು ಬೆಳೆ ನಾಶ ಮಾಡಿರುವ ಘಟನೆ ತಾಲೂಕಿನ ಕರೇನಹಳ್ಳಿಯಲ್ಲಿ ನಡೆದಿದೆ.
ನಮಗೆ 58 ವರ್ಷಗಳ ಹಿಂದೆ ಜಮೀನು ಭೋಗ್ಯ ನೋಂದಣಿಯಾಗಿದೆ. ಅಂದಿನಿಂದಲೂ ಈ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಅನುಭವಿಸುತ್ತಿದ್ದೇವೆ. ಈ ಜಮೀನು ನಮಗೆ ಸೇರಬೇಕೆಂದು ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು ತಡೆಯಾಜ್ಞೆ ತೆರವಾಗಿದ್ದರಿಂದ ಪಹಣಿ ತಿಮ್ಮಕ್ಕ ಕಾಳಯ್ಯ ಅವರ ಹೆಸರಿಗೆ ಇದೆ. ಇವರು ಯಾರೂ ಜೀವಂತವಾಗಿಲ್ಲ. ಆದರೂ ದಾಯಾದಿಗಳು ಏಕಾಏಕಿ ಟ್ರ್ಯಾಕ್ಟರ್ ತಂದು ಕಷ್ಟಪಟ್ಟು ಬೆಳೆದಿದ್ದ ಗೆಣಸಿನ ಬೆಳೆಯನ್ನು ಉಳಿಮೆ ಮಾಡಿ ನಾಶ ಮಾಡಿದ್ದಾರೆ. ಈ ಬಗ್ಗೆ ನಾವು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ನ್ಯಾಯ ಕೇಳುವುದಾಗಿ ಕೃಷ್ಣಪ್ಪ ತಿಳಿಸಿದ್ದಾರೆ. ಕಷ್ಟಪಟ್ಟು ಬೆಳೆದ ಗೆಣಸಿನ ಬೆಳೆಯನ್ನು ನಾಶ ಮಾಡಿರುವುದರಿಂದ ಅಂದಾಜು 15 ಲಕ್ಷ ಗಳವರೆಗೂ ನಷ್ಟ ಉಂಟಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ನೊಂದ ರೈತ ಕೃಷ್ಣಪ್ಪ, ಕಾಂತರಾಜು, ಹನುಮಂತರಾಜು ಇತರರು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.