ಗುಂಡ್ಲುಪೇಟೆ ತಾಲೂಕಿನ ಕಡಬೂರಲ್ಲಿ ಆಲೂಗೆಡ್ಡೆ ಕ್ಷೇತ್ರೋತ್ಸವದಲ್ಲಿ ನಿವೃತ್ತ ಕೃಷಿ ವಿಜ್ಞಾನಿ ರಾಜಣ್ಣ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಯಾವುದೇ ಬೆಳೆಗೆ ಗೊಬ್ಬರ ಊಟದಂತೆ, ಔಷಧಿ ಗ್ಲೂಕೋಸ್ ರೀತಿ ಕೊಡಬೇಕು ಎಂದು ಜೆಎಸ್ಎಸ್ ಕೃಷಿ ವಿಶ್ವ ವಿದ್ಯಾನಿಲಯದ ನಿವೃತ್ತಿ ಕೃಷಿ ವಿಜ್ಞಾನಿ ರಾಜಣ್ಣ ಹೇಳಿದರು.ತಾಲೂಕಿನ ಕಡಬೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ೨೦೨೪-೨೫ ನೇ ಸಾಲಿನ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ಅಲೂಗೆಡ್ಡೆ ಬೆಳೆಯಲ್ಲಿ ಸಮಗ್ರ ಕೀಟ ಮತ್ತುರೋಗ ನಿರ್ವಹಣೆ ಬಗ್ಗೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಹಾಸನ ಭಾಗದಲ್ಲಿ ಅಲೂಗೆಡ್ಡೆ ಹೆಚ್ಚಾಗಿ ಬೆಳೆಯುತ್ತಿದ್ದರೂ ಇದೀಗ ಗುಂಡ್ಲುಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಅಲೂಗೆಡ್ಡೆ ಬೆಳೆಯುತ್ತಿದ್ದಾರೆ. ಆಲೂಗೆಡ್ಡೆ ಎಲ್ಲ ಜಮೀನುಗಳಲ್ಲಿ ಬರುವುದಿಲ್ಲ ಎಂದರು. ಆಲೂಗೆಡ್ಡೆಗೆ ಭೂಮಿಯ ರಸ ಸಾರ ೫ ರಿಂದ ೭ರೊಳಗೆ ಇದ್ದಾಗ ಉತ್ಕೃಷ್ಟ ಬೆಳೆ ಬರುತ್ತದೆ. ಹಾಗಾಗಿ ರೈತರು ಆಲೂಗೆಡ್ಡೆ ಹಾಕುವುದಕ್ಕೂ ಮುಂಚೆ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಬೆಳೆಯಿರಿ ಎಂದರು.
ಔಷಧಿ ಅಂಗಡಿಗಳಲ್ಲಿ ಯಾವುದೇ ಬೆಳೆಗಳಿಗೆ ಔಷಧ ಇಷ್ಟೇ ಹಾಕಬೇಕು ಎಂದು ಹೇಳುತ್ತಾರೆ. ಆದರೆ ಗೊಬ್ಬರ ಇಂತಿಷ್ಟೆ ಬೆಳೆಗೆ ಹಾಕಬೇಕು ಎಂದು ಹೇಳುತ್ತಿಲ್ಲ ಇದು ಆಗಬೇಕು ಎಂದು ಸಲಹೆ ನೀಡಿದರು. ಅನಿರ್ಧಿಷ್ಟ ಗೊಬ್ಬರ, ಔಷಧಿ ಹಾಕುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಅವೈಜ್ಞಾನಿಕವಾಗಿ ಗೊಬ್ಬರ ಹಾಗೂ ಔಷಧಿ ಹಾಕಿದರೆ ಫಲವತ್ತತೆ ಕಡಿಮೆಯಾದರೆ ಮುಂದಿನ ಪೀಳಿಗೆಗೆ ತೊಂದರೆಯಾಗಲಿದೆ ಎಂದರು. ರೈತರು ಯಾವುದೇ ಬೆಳೆ ಬೆಳೆಯಲು ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಮಾಹಿತಿ ಪಡೆಯಬೇಕು. ಜೊತೆಗೆ ಮಣ್ಣಿನ ಪರೀಕ್ಷೆ ಮಾಡಿಸಬೇಕು ಆಗ ಮಾತ್ರ ಉತ್ತಮ ಬೆಳೆ ನಿಮ್ಮ ಕೈ ಸೇರಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಆಲೂಗೆಡ್ಡೆ ಬೆಳೆಯಲು ಅನುಸರಿಸಬೇಕಾದ ಹಲವು ಮಾಹಿತಿ, ಸಲಹೆಗಳನ್ನು ನೀಡಿದರು. ವೈಜ್ಞಾನಿಕ ಪದ್ದತಿ ಅಳವಡಿಸಿಕೊಂಡು ಬೆಳೆ ಬೆಳೆದರೆ ಉತ್ತಮ ಇಳುವರಿ ಸಿಗುತ್ತದೆ ಎಂದರು. ಕ್ಷೇತ್ರೋತ್ಸವದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಾಸ್ಕರ್, ಎಎಚ್ಒ ಕುಮಾರ್, ಆಲೂಗೆಡ್ಡೆ ಬೆಳೆಗಾರರಾದ ಕಡಬೂರು ಮಂಜು, ರೈತಸಂಘದ ಮುಖಂಡ ಕುಂದಕೆರೆ ಸಂಪತ್ತು, ತೋಟಗಾರಿಕೆ ಇಲಾಖೆಯ ನಿವೃತ್ತ ಸಹಾಯಕ ಚಿಕ್ಕಬಸಪ್ಪ ಹಾಗೂ ಚಿರಕನಹಳ್ಳಿ, ಬೊಮ್ಮನಹಳ್ಳಿ, ಕಡಬೂರು ಗ್ರಾಮದ ಆಲೂಗೆಡ್ಡೆ ಬೆಳೆಗಾರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.