ನದಿಗೆ ಹಾಕಿದ್ದ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಕಡಿತಕ್ಕೆ ಮುಂದಾದ ಮೆಸ್ಕಾಂ: ಕೃಷಿಕರಿಂದ ಘೇರಾವ್

KannadaprabhaNewsNetwork |  
Published : Mar 31, 2024, 02:04 AM IST
11 | Kannada Prabha

ಸಾರಾಂಶ

ಎ.ಎಂ.ಆರ್. ಡ್ಯಾಂನ ಬಳಿಯಲ್ಲಿರುವ ಕೃಷಿಕರ ಪಂಪ್‌ಸೆಟ್‌ಗಳ ಮೇಲೆ ಕಣ್ಣು ಹಾಕಿರುವ ಅಧಿಕಾರಿಗಳ ವಿರುದ್ಧ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ನೇತ್ರಾವತಿ ‌ನದಿ ಬದಿಯಲ್ಲಿ ಕೃಷಿ ಉಪಯೋಗಕ್ಕೆ ಕೃಷಿಕರು ಅಳವಡಿಸಿಲಾಗಿದ್ದ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಘೇರಾವ್ ಹಾಕಿದ ಘಟನೆ ಸರಪಾಡಿ ಎಂಬಲ್ಲಿ ಶನಿವಾರ ನಡೆದಿದೆ.

ಕೃಷಿಕರಿಗೆ ಯಾವುದೇ ‌ಸೂಚನೆ ನೀಡದೆ, ಏಕಾಏಕಿ ವಿದ್ಯುತ್ ಸಂಪರ್ಕ ಕಡಿತ ಮಾಡಲು ಮುಂದಾಗಿದ್ದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ಅಧಿಕಾರಿಗಳನ್ನು ವಾಪಸ್‌ ಕಳಿಸಿದರು.

ಸರಪಾಡಿ ಗ್ರಾಮದ ಪೆರ್ಲ ಬೀಯಪಾದೆ ಎಂಬಲ್ಲಿನ ಕೃಷಿಕರ ಪಂಪ್‌ಸೆಟ್‌ಗಳ ಸಂಪರ್ಕ ಕಡಿತಕ್ಕೆ ಮೆಸ್ಕಾಂ ಇಲಾಖೆ ಮುಂದಾಗಿತ್ತು. ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾಜನತೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂಬ‌ ಕಾರಣಕ್ಕಾಗಿ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಅಧಿಕಾರಿಗಳು ಕೃಷಿ ಪಂಪ್‌ಸೆಟ್‌ಗಳ ಸಂಪರ್ಕ ಕಡಿತಕ್ಕೆ ಮುಂದಾಗಿದ್ದರು. ಈ‌ವೇಳೆ ಹಠಾತ್ ಸ್ಥಳಕ್ಕೆ ಜಮಾಯಿಸಿದ ಕೃಷಿಕರು ಅಧಿಕಾರಿಗಳ ಮುಂದೆ ಅನೇಕ ಪ್ರಶ್ನೆಗಳನ್ನಿಟ್ಟು ಇಕ್ಕಟ್ಟಿನಲ್ಲಿ ಸಿಲುಕಿಸಿ, ಮಾತಿನ ಮೂಲಕವೇ ಅಧಿಕಾರಿಗಳು ಸ್ಥಳದಿಂದ ತೆರಳುವಂತೆ ಮಾಡಿದ್ದಾರೆ.

ಎ.ಎಂ.ಆರ್. ಡ್ಯಾಂನ ಬಳಿಯಲ್ಲಿರುವ ಕೃಷಿಕರ ಪಂಪ್‌ಸೆಟ್‌ಗಳ ಮೇಲೆ ಕಣ್ಣು ಹಾಕಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೃಷಿಕರು, ಅವರು ಬಿಳಿಯೂರು ಬ್ರಿಡ್ಜ್‌ನಲ್ಲಿ ಸಾಕಷ್ಟು ನೀರು ಇದ್ದು, ಅದರ ಬಳಕೆಯನ್ನು ಅಧಿಕಾರಿಗಳು ಮಾಡಲಿ, ಜೊತೆಗೆ ಉಪ್ಪಿನಂಗಡಿಯಲ್ಲಿ ಬೋಟಿಂಗ್ ಸಹಿತ ಅನೇಕ ವಿಚಾರಗಳಿಗೆ ನದಿಯ ‌ನೀರನ್ನು ಬಳಕೆ ಮಾಡುತ್ತಿದ್ದು ಅಲ್ಲಿಂದ ನೀರನ್ನು‌ಮಂಗಳೂರಿಗೆ ಪಡೆಯಲಿ ಎಂದು ತಿಳಿಸಿದ್ದಾರೆ.

ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಏಳು ಮೀಟರ್ ಎತ್ತರದ ಡ್ಯಾಂ ನಿರ್ಮಾಣ ಮಾಡಿದ್ದು ಯಾಕೆ? ಅಲ್ಲಿನ ಕೃಷಿಕರಿಗೆ ಸೂಕ್ತವಾದ ಪರಿಹಾರ ನೀಡಿ ಅಣೆಕಟ್ಟಿನ ಉಪಯೋಗ ಪಡೆದುಕೊಳ್ಳುವುದು ಬಿಟ್ಟು ಬಡ ರೈತರ ಜೀವನದ ಮೇಲೆ ಯಾಕೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೃಷಿಯನ್ನೇ ನಂಬಿ‌ಬದುಕುವ ಕೃಷಿಕರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಲ್ಲದೆ, ಈ ಕುರಿತಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನು ‌ನೀಡಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!