ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಸವ ಜಯಂತಿ ಅಂಗವಾಗಿ ಪ್ರಜ್ಞಾವಂತರ ವೇದಿಕೆ ನೇತೃತ್ವದಲ್ಲಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ವೇದಿಕೆ ಸಂಚಾಲಕ ವಕೀಲ ವೆಂಕಟೇಶ್ ಮಾತನಾಡಿ, ಸಮಾಜದ ಬೇದ-ಬಾವ, ಮೇಲು-ಕೀಳು, ಮೂಢನಂಬಿಕೆ, ಕಂದಾಚಾರಗಳಿಂದ ಮಾನವರ ನಡುವೆ ದೌರ್ಜನ್ಯ ಪ್ರತಿರೋಧಿಸಿ ಜನರಲ್ಲಿ ಶಾಂತಿ, ಸೌಜನ್ಯ, ಸಾಮರಸ್ಯ, ಸಹಿಷ್ಣುತೆ ದುಡಿದು ಬದುಕುವ ಮಾರ್ಗವನ್ನು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಬಸವಣ್ಣ ಎಂದರು.
ಮಹಿಳೆಯರಿಗೆ ಸಮಾನತೆ ದೊರಕಿಸಿ ಕೊಟ್ಟ ಆದರ್ಶ ಪುರುಷರಾಗಿರುವ ಜಗತ್ ಜ್ಯೋತಿ ಬಸವಣ್ಣರವರನ್ನು ಪ್ರತಿನಿತ್ಯ ಪೂಜಿಸುತ್ತ ನೆನೆಯಲು ಪಟ್ಟಣದಲ್ಲಿ ಅವರ ಪ್ರತಿಮೆ ನಿರ್ಮಿಸಿ ವೃತ್ತಕ್ಕೆ ಅವರ ಹೆಸರು ಇಡುವುದು ಸೂಕ್ತವಾಗಿದೆ ಎಂದರು.ಬಸವಣ್ಣ ಅವರ ಭಾವಚಿತ್ರಕ್ಕೆ ವೇದಿಕೆ ಕಾರ್ಯಕರ್ತರು ಪುಷ್ಪಾರ್ಚನೆ ನೆರವೇರಿಸಿದರು. ನಂತರ ಪಟ್ಟಣ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಈ ವೇಳೆ ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷ್ಷೆ ಅಶಾ ಪುಟ್ಟೆಗೌಡ, ಡಿಎಸ್ಎಸ್ ಮುಖಂಡರಾದ ನಂಜುಂಡ ಮೌರ್ಯ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಕೆ.ಟಿ.ರಂಗಪ್ಪ, ಜಯಶಂಕರ್, ಉಗಮ ಟ್ರಸ್ಟ್ನ ಪ್ರಿಯಾ ರಮೇಶ್, ಚಿಕ್ಕತಮ್ಮೆಗೌಡ, ಅಬ್ದುಲ್ ಸುಕ್ಕೊರ್, ಬಾಬು ಸೇರಿದಂತೆ ಇತರರಿದ್ದರು.
ಶ್ರೀರಂಗಪಟ್ಟಣ:ತಾಲೂಕು ಆಡಳಿತದಿಂದ ಸಾಂಸ್ಕೃತಿಕ ರಾಯಬಾರಿ ಬಸವಣ್ಣನ ಜಯಂತಿಯನ್ನು ಆಚರಿಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಒಳಾಂಗಣ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ತಹಸೀಲ್ದಾರ್ ಹರ್ಷ, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಸವತ್ವ ಅವರ ಆದರ್ಶಗಳ ಕುರಿತು ಮಾತನಾಡಿದರು.ಈ ವೇಳೆ ವೀರಶೈವ ಸಮಾಜದ ಮುಖಂಡರು, ವಿವಿಧ ಕನ್ನಡ ಪರ ಹಾಗೂ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಬಸವಣ್ಣನಿಗೆ ನಮನ ಸಲ್ಲಿಸಿದರು. ಬಿಇಒ ಆರ್.ಪಿ.ಮಹೇಶ್, ವೀರಶೈವ ಮುಖಂಡರಾದ ಜಗದೀಶ್, ಪ್ರದೀಪ್, ಮರಿಬಸವಯ್ಯ, ಸಿ.ಎಸ್ ದೀಪಕ್, ಮಲ್ಲು ಸ್ವಾಮಿ, ಎಸ್.ಕುಮಾರ್, ಕರವೇ ಶಂಕರ್ ಚಂದಗಾಲು, ಪ್ರಿಯಾ ರಮೇಶ್, ಕೆ.ಟಿ. ರಂಗಯ್ಯ, ನಂಜುಂಡ ಮೌರ್ಯ, ಬೆನ್ನೂರ, ಅಪ್ಪಾಜಿ ಸೇರಿದಂತೆ ಇತರರಿದ್ದರು.