ಶಿರಹಟ್ಟಿ: ಮಕ್ಕಳು ಬಾಲ್ಯದಲ್ಲಿ ಆಟವಾಡುವ ಕಲೆಯಲ್ಲಿ ಹೊಸತನ ಕಂಡು ಹಿಡಿಯಬಲ್ಲ ವಿಜ್ಞಾನಿಗಳಾಗಿರುತ್ತಾರೆ. ಆ ಕಲೆ ಬೆಳಕಿಗೆ ತರಲು ಶಿಕ್ಷಕರು ಶ್ರಮಿಸಬೇಕು. ವಿದ್ಯಾರ್ಥಿಗಳು ಪಠ್ಯೇತರ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರಡಿ ಹೇಳಿದರು.
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಗುರುತಿಸುವ ಸೂಕ್ತ ವೇದಿಕೆಯಾಗಿದೆ. ಸರ್ಕಾರ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಮಾಡುತ್ತಿದೆ. ಮಕ್ಕಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯ. ಮಕ್ಕಳು ಒಳ್ಳೆಯ ಶಿಕ್ಷಣದ ಜತೆಗೆ ಶ್ರಮಪಟ್ಟು ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಗಳ ಮಧ್ಯೆ ಶಿಕ್ಷಣ ನೀಡಿದರೆ ಸಾಲದು ಗಾಳಿ, ಬೆಳಕು, ನೀರು, ಪರಿಸರದಲ್ಲಿ ಮಕ್ಕಳು ಬೆಳೆದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಹೊಸ ಕಲೆಗಳು ಸೃಷ್ಟಿಯಾಗ ತೊಡಗುತ್ತವೆ. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಮೊದಲು ಶಿಕ್ಷಕರು, ಪಾಲಕರು ಜತೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದಿಂದ ಬದುಕನ್ನು ಕಟ್ಟುವ ಮಹತ್ವದ ಕಾರ್ಯದಲ್ಲಿ ಶಿಕ್ಷಕರು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರಹಾಕಲು ಇದೊಂದು ಉತ್ತಮ ವೇದಿಕೆ. ಈ ವೇದಿಕೆ ಮೂಲಕ ಮಕ್ಕಳಿಗೆ ಒಳ್ಳೆಯ ಅವಕಾಶ ನೀಡಿ ಅವರನ್ನು ಬೆಂಬಲಿಸಿ ನಮ್ಮ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಕ್ಕಳನ್ನು ತಯಾರಿಸಲು ಅವರಿಗೆ ಪ್ರೋತ್ಸಾಹ ನೀಡುವಂತೆ ಶಿಕ್ಷಕರಿಗೆ ಕರೆ ನೀಡಿದರು.
ಶಿರಹಟ್ಟಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಬಿ. ಕಳಸಾಪುರ, ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಹರ್ಲಾಪೂರ, ಶಿರಹಟ್ಟಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ವರ ಅರ್ಕಸಾಲಿ, ಶಿರಹಟ್ಟಿ ತಾಲೂಕು ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ಎಚ್.ಟಿ. ಬಿಜ್ಜೂರ್, ಚಂದ್ರು ನೇಕಾರ್, ಬಸವರಾಜ್ ಯತ್ನಳ್ಳಿ, ಡಿ.ಡಿ. ಲಮಾಣಿ, ಎಚ್.ಎಂ. ಗುತ್ತಲ್, ಶ್ರೀನಿವಾಸ ನಾಯಕ ಇದ್ದರು.