ಹಾವೇರಿ: ಸಮುದಾಯ ಮಟ್ಟದಲ್ಲಿ ಡೆಂಘೀ ಜ್ವರ ನಿಯಂತ್ರಣ ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಹೇಳಿದರು.ತಾಲೂಕಿನ ಗುತ್ತಲ ಪಟ್ಟಣದ ಆರ್.ಕೆ. ಕಾಲೇಜ್ನಲ್ಲಿ ರಾಷ್ಟ್ರೀಯ ಡೆಂಘೀ ದಿನ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸೊಳ್ಳೆಗಳ ಜೀವನ ಚಕ್ರ, ಸೊಳ್ಳೆಗಳ ಉತ್ಪತ್ತಿ ತಾಣಗಳು ಬಗ್ಗೆ ಹಾಗೂ ಸೊಳ್ಳೆಗಳ ನಿಯಂತ್ರಣ, ಸೊಳ್ಳೆಗಳಿಂದ ಹರಡುವ (ಕೀಟ ಜನ್ಯ ರೋಗಗಳು) ರೋಗಗಳಾದ ಮಲೇರಿಯಾ, ಡೆಂಘೀ, ಚಿಕ್ಯೂನ್ಗುನ್ಯ, ಆನೇಕಾಲು ರೋಗ, ಮೆದಳು ಜ್ವರದ ಬಗ್ಗೆ, ಸೊಳ್ಳೆಗಳ ಉತ್ಪತ್ತಿ, ಸೊಳ್ಳೆಯ ಜೀವನದ ಹಂತಗಳ ಬಗ್ಗೆ ತಿಳಿಸಿದ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡಿದರು.ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ನೀರಿನ ಸಂಗ್ರಹಣೆ ಮಾಡುವುದು ಸಾಮಾನ್ಯವಾಗಿದ್ದು, ನೀರಿನಲ್ಲಿ ಸ್ವಲ್ಪ ದಿನಗಳ ನಂತರ ಲಾರ್ವ ಹುಳುಗಳು ಜನಿಸಿ ಸೊಳ್ಳೆಗಳಾಗಿರುವುದರಿಂದ ಕೀಟ ಜನ್ಯ ರೋಗಗಳು ಹರಡುವ ಸಾಧ್ಯತೆಯಿರುತ್ತದೆ. ಕಾರಣ ಮುಂಜಾಗೃತವಾಗಿ ಗ್ರಾಮಗಳಲ್ಲಿ ನೀರಿನ ಸಂಗ್ರಹಣಾ ತೊಟ್ಟಿಗಳನ್ನು ಶುಚಿಗೊಳಿಸಿ ಒಣಗಿಸಿದ ನಂತರ ನೀರು ಸಂಗ್ರಹಿಸಬೇಕು ಹಾಗೂ ಮನೆಗಳಲ್ಲಿ ಸೊಳ್ಳೆ ಪರದೆ ಬಳಸಬೇಕು, ಮೈತುಂಬ ಬಟ್ಟೆ ಹಾಕಬೇಕು, ರೋಗದ ಲಕ್ಷಣ ಕಂಡುಬಂದಲ್ಲಿ ತತ್ಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಡೆಂಘೀ ಕುರಿತು ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಡೆಂಘೀ ದಿನ ಕಾರ್ಯಕ್ರಮದ ಘೊಷವಾಕ್ಯವು "ಡೆಂಘೀ ನಿಯಂತ್ರಣಕ್ಕಾಗಿ ಸಮುದಾಯದ ಸಹಭಾಗಿತ್ವ: ಪರಿಶೀಲಿಸಿ, ಸ್ವಚ್ಛಗೊಳಿಸಿ ಹಾಗೂ ಮುಚ್ಚಿಡಿ " ಎಂಬುದಾಗಿದೆ. ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಆರ್.ಕೆ. ಕಾಲೇಜು ವ್ಯವಸ್ಥಾಪಕ ಡಾ. ಕರಾರೆ ನಾಯ್ಕ, ಡಾ. ಉಷಾರಾಣಿ, ಪ್ರಾಂಶುಪಾಲ ಅನೀಲಕುಮಾರ ಹೊಸಮನಿ, ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಪ್ಪ ಕನ್ನಮ್ಮನವರ, ಶಕುಂತಲ ಸಿ, ಮಂಜುಳಾ ಇಟಗಿ, ರೇಖಾ ಚಿಂದಿ, ಅಖಿಲಾ, ಅಚಲಾ ಹೆಬ್ಬಳ್ಳಿ, ಸಂತೋಷ ಹುಬ್ಬಳ್ಳಿ ಇತರರು ಇದ್ದರು.ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಪುಟ್ಟನಗೌಡರ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಕಡೇಮನಿ ವಂದಿಸಿದರು.