60 ಎಕರೆ ಪ್ರದೇಶದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ

KannadaprabhaNewsNetwork | Updated : Nov 30 2024, 12:41 PM IST

ಸಾರಾಂಶ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 60 ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ನಡೆಸಲು ಸಜ್ಜುಗೊಳಿಸಲಾಗುತ್ತಿದೆ ಎಂದು ಶಾಸಕ ಹಾಗೂ ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನಡೆಸಿದರು.

 ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 60 ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ನಡೆಸಲು ಸಜ್ಜುಗೊಳಿಸಲಾಗುತ್ತಿದೆ ಎಂದು ಶಾಸಕ ಹಾಗೂ ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನಡೆಸಿದರು.

ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಜಾಗವನ್ನು ಪರಿಶೀಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಅಮರಾವತಿ ಹೋಟೆಲ್ ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಪ್ರವೇಶ ದ್ವಾರದಿಂದ ವೇದಿಕೆಯವರೆಗೂ ಪೆಂಡಾಲ್ ನಿರ್ಮಾಣ ಸಿದ್ಧತೆ ನಡೆದಿದೆ. ಮುಖ್ಯದ್ವಾರದ ಬಳಿ ನೋಂದಣಿ ಕೌಂಟರ್ ಅನ್ನು ತೆರೆಯಲಾಗುವುದು ಎಂದರು.

ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲೆಯಲ್ಲಿ ಎಲ್ಲಾ ಜನರೊಡಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದ ಮೆರಗನ್ನು ಹೆಚ್ಚಿಸಲು ಯಾವುದೇ ಉದಾಸೀನ ತೋರದೆ ಜವಾಬ್ದಾರಿಯಿಂದ ಎಲ್ಲರೂ ಒಗ್ಗೂಡಿ ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಸಮ್ಮೇಳನದಲ್ಲಿ 600 ಅಡಿ ಉದ್ದ ಹಾಗೂ 300 ಅಡಿ ಅಗಲದಲ್ಲಿ ಮುಖ್ಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಸುಮಾರು 35,000 ರಿಂದ 40,000 ಜನ ಸಭಿಕರು ಕೂರಲು ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ 2 ಸಮಾನಾಂತರ ವೇದಿಕೆಗಳನ್ನು 11,000 ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾಗುವುದು ಎಂದರು.

ಮುಖ್ಯ ವೇದಿಕೆಯ ಬಲಭಾಗ ಕನ್ನಡ ಆಸಕ್ತರಿಗಾಗಿ ಪುಸ್ತಕ ಮಳಿಗೆಯನ್ನು ತೆರೆಯಲಾಗುವುದು. ಎಡಭಾಗಕ್ಕೆ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಗಳನ್ನು ಇಡಲಾಗುವುದು. ಒಟ್ಟು 1000ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. 450 ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಸಿದ್ಧತೆ:  ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಕಲ್ಪಿಸಲು ವೇದಿಕೆ ಬಲಭಾಗದಲ್ಲಿ ತಯಾರಿ ಮಾಡಲಾಗುವುದು. ಡೈನಿಂಗ್ ಮತ್ತು ಅಡುಗೆಗೆ ಸುಮಾರು 2,64,000 ಅದರ ಅಡಿ ವ್ಯಾಪ್ತಿಯ ಪ್ರದೇಶವನ್ನು ಮೀಸಲಿಡಲಾಗಿದೆ. ಕುಡಿಯುವ ನೀರಿಗೆ ಈಗಾಗಲೇ ಪೈಪ್ ಲೈನ್ ವ್ಯವಸ್ಥೆ ಅಳವಡಿಸಲು ಸಿದ್ಧತೆ ನಡೆಯುತ್ತಿದೆ. ಡಿಸೆಂಬರ್ 2 ರಂದು ಸಮ್ಮೇಳನದ ಸಂಪೂರ್ಣ ಚಿತ್ರಣವನ್ನು ಅಧಿಕೃತವಾಗಿ ಪ್ರಕಟ ಮಾಡಲಾಗುವುದು ಎಂದರು.

ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕ ವಾಹನ ನಿಲುಗಡೆಗೆ ಪ್ರತ್ಯೇಕವಾಗಿ ಸುಮಾರು 20 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಗಣ್ಯರಿಗೆ ವೇದಿಕೆಯ ಬಲಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 9 ಕಡೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು. ಮಾಹಿತಿ ಒದಗಿಸಲು ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲ ಉಪಸ್ಥಿತರಿದ್ದರು.

Share this article