ಚಳ್ಳಕೆರೆ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕೃಷಿ ಇಲಾಖೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಪ್ರಸ್ತುತ 2025-26ನೇ ಸಾಲಿನ ಬೆಳೆವಿಮೆ ಸಮೀಕ್ಷೆಯನ್ನು ನಡೆಸಲು ತೀರ್ಮಾನಿಸಿದ್ದು, ಸಮೀಕ್ಷೆಗೆ ನಿಯೋಜನೆಗೊಂಡ ವಿವಿಧ ಇಲಾಖೆ ಅಧಿಕಾರಿಗಳು, ಖಾಸಗಿ ಸಂಸ್ಥೆಯ ಏಜೆನ್ಸಿಗಳು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉಪ ಕೃಷಿ ನಿರ್ದೇಶಕ ಉಮೇಶ್ ಸೂಚಿಸಿದರು.
ಮಂಗಳವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ವಿವಿಧ ಅಧಿಕಾರಿಗಳು, ಸಮೀಕ್ಷೆಗೆ ನಿಯೋಜನೆಗೊಂಡ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಮತ್ತು ಸರ್ವೆ ನಿವಾಸಿಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಸಮೀಕ್ಷಾ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ, ಕರಾರು ಒಕ್ಕು ಸಮೀಕ್ಷೆಯನ್ನು ದಾಖಲಿಸಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರ ಜೆ.ಅಶೋಕ್, ಬೆಳೆ ಸಮೀಕ್ಷೆ ಸಂದರ್ಭದಲ್ಲಿ ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಸ್ವಷ್ಟ ಮಾಹಿತಿ ಪಡೆದು, ಸ್ಥಳದಲ್ಲೇ ಆನ್ಲೈನ್ ಮೂಲಕ ದಾಖಲಾತಿ ಆಪ್ಲೋಡ್ ಮಾಡಬೇಕು. 15 ದಿನಗಳ ನಂತರ ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಈ ಸಂದರ್ಭದಲ್ಲಿ ರೈತರು ಯಾವುದೇ ರೀತಿಯ ತಪ್ಪು ಮಾಹಿತಿ ಇದ್ದರೆ ಸ್ಥಳದಲ್ಲೇ ನಿಖರ ಮಾಹಿತಿ ನೀಡಿ ಸರಿಪಡಿಸಿಕೊಳ್ಳುವ ಅವಕಾಶವಿದೆ. ರೈತರು ಸಮೀಕ್ಷೆ ಸಮಯದಲ್ಲಿ ಖುದ್ದಾಗಿ ಹಾಜರಿದ್ದು ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕೆಲವೊಂದು ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಆನ್ಲೈನ್ಗೆ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಉಂಟಾದ ಸಮಯದಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡದೆ ಸರ್ವೆರ್ ಸರಿಯಾದ ನಂತರವೇ ಆಪ್ಲೋಡ್ ಮಾಡಬೇಕು. ಯಾವುದೇ ಸಂದೇಹ ಉಂಟಾದಲ್ಲಿ ಕೂಡಲೇ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದು ಬೆಳೆ ಸಮೀಕ್ಷೆ ಲೋಪವಾಗದಂತೆ ಎಲ್ಲರೂ ಜಾಗ್ರತೆವಹಿಸಬೇಕು ಎಂದರು.ತೋಟಗಾರಿಕೆ ಇಲಾಖೆ ಅಧಿಕಾರಿ ಕುಮಾರ್ನಾಯ್ಕ್ ಮಾತನಾಡಿ, ಈಗಾಗಲೇ ಹಲವು ಬಾರಿ ಬೆಳೆ ಸಮೀಕ್ಷೆ ನಡೆಸಿದ್ದು, ಸಾಕಷ್ಟು ಮಾಹಿತಿ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಕೆಲವೊಮ್ಮೆ ರೈತರು ಮಾಹಿತಿ ನೀಡುವ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದರೆ ಬೆಳೆ ಸಮೀಕ್ಷೆಯಲ್ಲಿ ನಿರೀಕ್ಷಿತ ಗುರಿಸಾಧನೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ರೈತರಲ್ಲೂ ಜಾಗೃತಿ ಮೂಡಿಸಬೇಕೆಂದರು.
ರೇಷ್ಮೆ ಇಲಾಖೆ ಅಧಿಕಾರಿಗಳಾದ ರಾಧ, ಸ್ವಪ್ನ, ಕೃಷಿ ಅಧಿಕಾರಿ ಮಂಜುನಾಥ, ಜೀವನ್, ಗುರುನಂದನ್, ಮೇಘನ ಮುಂತಾದವರು ಉಪಸ್ಥಿತರಿದ್ದರು.