ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯಲು ರೈತರು ಸಸಿ ಮಡಿ ಬೆಳೆಸಲು ಆರಂಭಿಸಿದ್ದಾರೆ.ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಅತ್ತ ಹರಾಜು ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದ್ದರೆ ಇತ್ತ ರೈತರು ಸಕಾಲದಲ್ಲಿ ನಾಟಿ ಮಾಡುವ ಸಲುವಾಗಿ ಸಸಿ ಮಡಿ ಬೆಳೆಸಲು ಉತ್ಸುಕರಾಗಿದ್ದಾರೆ. ಮುಖ್ಯವಾಗಿ ವೈಜ್ಞಾನಿಕವಾಗಿ ಬೆಳೆ ಬೆಳೆದು ಉತ್ತಮ ಇಳುವರಿ ಜತೆಗೆ ಗುಣಮಟ್ಟದ ಉತ್ಪಾದನೆಗೆ ಕೈಗೊಳ್ಳುವ ನಿಟ್ಟಿನಲ್ಲಿ ರೈತರು ಟ್ರೇ ಸಸಿ ಮಡಿ ಬಿತ್ತನೆಗೆ ಒಲವು ತೋರುತ್ತಿರುವುದು ಕಂಡುಬಂದಿದೆ.
ತಾಲೂಕಿನ ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ ಹಾಗೂ ಹಳ್ಳಿಮೈಸೂರು ಹೋಬಳಿ ಭಾಗದಲ್ಲಿ ಸಾವಿರಾರು ರೈತರು ಹೊಗೆಸೊಪ್ಪು ಬೆಳೆಯನ್ನೇ ನೆಚ್ಚಿಕೊಂಡಿದ್ದು ಬಹುತೇಕ ಭಾಗದಲ್ಲಿ ರೈತರ ಸಸಿಮಡಿ ಬೆಳೆಸಲು ಸಿದ್ಧತೆ ಕೈಗೊಂಡಿದ್ದಾರೆ. ತಂಬಾಕು ಬೆಳೆ ಈ ಭಾಗಕ್ಕೆ ಕಾಲಿಟ್ಟ ಆರಂಭದಲ್ಲಿ ಹೆಚ್ಚಿನ ರೈತರು ನೀರಾವರಿ ಸೌಲಭ್ಯ ಇರುವ ಕಡೆ ಜಮೀನಿಗೆ ಬೀಜ ಬಿತ್ತಿ ನೀರು ಸಿಂಪಡಣೆ ಮಾಡಿ ಕಳೆ ತೆಗೆದು ಸಸಿ ಮಡಿ ಬೆಳೆಸುವ ಪದ್ಧತಿ ಅನುಸರಿಸಿದ್ದರು. ಹಳೆಯ ಪದ್ಧತಿಯಲ್ಲಿ ಸಸಿಮಡಿಗೆ ಹೆಚ್ಚಿನ ಶ್ರಮ ಹಾಕಬೇಕಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ರೈತರು ಟ್ರೇ ಸಸಿ ಮಡಿ ಬೆಳೆಸಲು ಆಸಕ್ತಿ ವಹಿಸಿದ್ದಾರೆ. ಬಿಸಿಲಿನ ತಾಪಮಾನದಿಂದ ಸಸಿ ಮಡಿಗಳನ್ನು ರಕ್ಷಿಸಿಕೊಳ್ಳಲು ರೈತರು ಟ್ರೇ ಸಸಿ ಬಿತ್ತನೆ ಮೊರೆ ಹೋಗಿದ್ದಾರೆ. ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಸಿದರೆ ಮಳೆ ಬಿದ್ದ ತಕ್ಷಣ ನಾಟಿ ಮಾಡಿದರೆ ಗಿಡಗಳು ತೇವಾಂಶದ ಕೊರತೆ ನೀಗಿ ಬೇಗನೆ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೆಚ್ಚಿನ ರೈತರು ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಸಲು ಮುಂದಾಗಿದ್ದಾರೆ.ಟ್ರೇ ಸಸಿ ಮಡಿ ಬೆಳೆಸಿದರೆ ನಾಟಿ ಮಾಡಿದ ನಂತರ ಗಿಡಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ. ತಂಬಾಕು ಗಿಡಗಳಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗವನ್ನು ಪರಿಸರ ಸ್ನೇಹಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಿಸಲು ಟ್ರೈಕೋಡರ್ಮಾ ಬಳಕೆ ಅತ್ಯವಶ್ಯಕ. ಟ್ರೇ ಮಾಡುವಾಗ ಕೋಕೋಪಿತ್ ಜತೆ ಬೆಳೆಸಿದ ಟ್ರೈಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಬೆಳೆಸಿದರೆ ಸೊರಗು ರೋಗವನ್ನು ಟ್ರೇ ಮತ್ತು ಜಮಿನಿನಲ್ಲಿ ಹತೋಟಿಗೆ ತರಬಹುದು. ಒಂದು ಸಿಂಗಲ್ ಬ್ಯಾರನ್ಗೆ ನೆರಳಿನಲ್ಲಿ 3 ಕೆಜಿಯಷ್ಟು ಟ್ರೈಕೋಡರ್ಮಾ, 1 ಕೆಜಿಯಷ್ಟು ಬೇವಿನ ಹಿಂಡಿ ಮತ್ತು 50ರಿಂದ 60 ಕೆಜಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ನೀರನ್ನು ಹಾಕಬೇಕು.ಆದರೆ ನೀರು ಹೊರಕ್ಕೆ ಹರಿಯಬಾರದು, ಹಾಗೆಯೇ ತೇವಾಂಶವನ್ನು ನಿಯಂತ್ರಣ ಮಾಡಬೇಕು. ನಂತರ ಗೋಣಿ ಚೀಲ ಮುಚ್ಚಿ ಪ್ರತಿ ದಿನ ನೀರನ್ನು ಹಾಕಿ ತೇವಾಂಶ ಸರಿಯಾಗಿರುವಂತೆ ನೋಡಿಕೊಳ್ಳಬೇಕು. 8ರಿಂದ 10 ದಿನಗಳ ನಂತರ ಬಿಳಿಯ ಬಣ್ಣದ ಪರದೆಯ ಶಿಲಿಂದ್ರದ ಬೆಳವಣಿಗೆ ಕಾಣುತ್ತದೆ. ಹೀಗೆ ಬೆಳವಣಿಗೆಯಾದ ಟ್ರೈಕೋಡರ್ಮಾವನ್ನು ಒಂದು ಚೀಲ ಕೋಕೋಪಿತ್ಗೆ ಒಂದು ಬಾಣಲಿಯಷ್ಟು ಬೆರೆಸಿ ಟ್ರೇ ತಯಾರು ಮಾಡಿಕೊಳ್ಳಬೇಕು. ಇದರಿಂದ ಸೊರಗು ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವ ಅವಶ್ಯಕತೆ ಇರುವುದಿಲ್ಲ. ಇದರಿಂದ ರೋಗದ ನಿಯಂತ್ರಣ ಮತ್ತು ಹಣದ ಉಳಿತಾಯಕ್ಕೆ ನೆರವಾಗಲಿದೆ. ಮುಖ್ಯವಾಗಿ ಟ್ರೇ ಮಾಡುವ 10ರಿಂದ 12 ದಿನಗಳ ಮುಂಚೆಯೇ ಟ್ರೈಕೋಡರ್ಮಾದ ಬೆಳವಣಿಗೆಯ ಕಾರ್ಯವನ್ನು ಪ್ರಾರಂಭಿಸಬೇಕು. ಟ್ರೈಕೋಡರ್ಮಾ 6 ತಿಂಗಳಿಗಿಂತ ಹಳೆಯದಾಗಿರಬಾರದು. ಆದ್ದರಿಂದ ತೆಗೆದುಕೊಳ್ಳುವಾಗ ಉತ್ಪಾದನಾ ದಿನಾಂಕವನ್ನು ಸಹ ಪರಿಶೀಲಿಸಿಕೊಳ್ಳಬೇಕು. ಟ್ರೈಕೋಡರ್ಮಾ ಬೆಳವಣಿಗೆಯಾದ ನಂತರ ಗೊಬ್ಬರದ ರಾಶಿಯನ್ನು ಗುದ್ದಲಿಯಿಂದ ಮಿಶ್ರಣ ಮಾಡಿಕೊಳ್ಳಬೇಕು ಎನ್ನುತ್ತಾರೆ ತಂಬಾಕು ಮಾರುಕಟ್ಟೆ ಅಧಿಕಾರಿಗಳು.
ಜಮೀನಿನಲ್ಲಿ ಸೊರಗು ರೋಗ, ಕಪ್ಪು ಕಾಂಡ ರೋಗ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸಸಿ ಮಡಿಗಳಿಗೆ ಜಮೀನಿಗೆ ನಾಟಿ ಮಾಡುವ ಮೂರ್ನಾಲ್ಕು ದಿನ ಮುಂಚಿತವಾಗಿ 20 ಗ್ರಾಂ ರಿಡೋಮಿಲ್ ಗೋಲ್ಡ್, 10 ಗ್ರಾಂ ಗ್ಲೋಇಟ್ ಮತ್ತು 100 ಗ್ರಾಂ ಪೊಟಾಶಿಯಂ ನೈಟ್ರೇಟ್ 15 ಲೀಟರ್ ಸ್ಪ್ರೇ ಕ್ಯಾನಿಗೆ ಹಾಕಿ ಟ್ರೇ ಸಸಿಗಳಿಗೆ ಸಿಂಪಡಿಸಿದ ನಂತರ ಜಮೀನಿಗೆ ನಾಟಿ ಮಾಡುವುದು ಸೂಕ್ತ. ಈಗಾಗಲೇ ಜಮೀನಿಗೆ ನಾಟಿ ಮಾಡಿದ್ದರೆ, ನಾಟಿ ಮಾಡಿದ 10ರಿಂದ 12 ದಿನಗಳ ನಂತರ ಸೊರಗಕ್ಕೆ ವೆಲ್ಟ್ ಮತ್ತು ಕಪ್ಪು ಕಾಂಡದ ರೋಗ ನಿಯಂತ್ರಣಕ್ಕೆ ರಿಡಾಮಿಲ್ 200 ಗ್ರಾಂ ಮತ್ತು ಗ್ಲೋಇಟ್ 100 ಎಂಎಲ್ ಜತೆಗೆ 1 ಕೆಜಿ ಪೋಟ್ಯಾಷಿಯಂ ನೈಟ್ರೇಟ್ ಅನ್ನು 200 ಲೀಟರ್ ನೀರಿನ ಡ್ರಮ್ಗೆ ಸೇರಿಸಿ ಒಂದು ಟೀ ಲೋಟದಷ್ಟನ್ನು 80ರಿಂದ 100 ಎಂಎಲ್ ಔಷಧಿಯನ್ನು ಗಿಡದ ಬುಡಕ್ಕೆ ಸ್ಪ್ರೇ ಕ್ಯಾನ್ನ ಹೂವು ಬಿಚ್ಚಿ ಬೇರುಗಳು ತೋಯುವಂತೆ ಔಷಧಿಯನ್ನು ನೀಡಬೇಕು. ಇದರಿಂದ ತಂಬಾಕು ಗಿಡಗಳು ರೋಗದಿಂದ ಮುಕ್ತಿ ಕಾಣಲಿವೆ. ಬೆಳೆಗಾರರು ಈ ವಿಧಾನಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು.-----------------------------------------------*ಹೇಳಿಕೆ1
ಸಕಾಲದಲ್ಲಿ ನಾಟಿ ನಡೆಸುವ ಉದ್ದೇಶದಿಂದ ಸಸಿ ಮಡಿ ಬೆಳೆಸಲು ಸಿದ್ದತೆ ಕೈಗೊಂಡಿದ್ದು, ಈಗಾಗಲೇ ಗಿಡಗಳನ್ನು ರಕ್ಷಣೆ ಮಾಡಿಕೊಳ್ಳಲು ಟ್ರೇ ಸಸಿ ಮಡಿಗೆ ಒತ್ತು ನೀಡಲಾಗಿದೆ.ರೈತ ಕುಮಾರ, ರಾಮನಕೊಪ್ಪಲು (4ಎಚ್ಎಸ್ಎನ್5ಎ )*ಹೇಳಿಕೆ2
ತಂಬಾಕು ಬೆಳೆಗಾರರಿಗೆ ಸಸಿ ಮಡಿ ಬೆಳೆಸಲು ವಿವಿಧ ತಳಿಯ ಬೀಜಗಳನ್ನು ವಿತರಿಸಲಾಗಿದೆ. ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಟ್ರೇನಲ್ಲಿ ಸಸಿಮಡಿ ಬೆಳೆಸಬೇಕು. ಇದರಿಂದ ಮಳೆ ಬಿದ್ದ ಕೂಡಲೇ ನಾಟಿ ಕಾರ್ಯ ಮಾಡಲು ಅನುಕೂಲವಾಗುತ್ತದೆ. ಇದೀಗ ತಂಬಾಕು ಪರವಾನಗಿ ನವೀಕರಣ ಕಾರ್ಯ ಸಾಗಿದ್ದು, ರಸಗೊಬ್ಬರ ಸರಬರಾಜದ ಕೂಡಲೇ ರೈತರಿಗೆ ವಿತರಿಸಲಾಗುವುದು. ಸವಿತ, ತಂಬಾಕು ಮಾರುಕಟ್ಟೆ ಹರಾಜು ಅಧೀಕ್ಷಕಿ, ರಾಮನಾಥಪುರ (4ಎಚ್ಎಸ್ಎನ್5ಬಿ)