6 ಸಾವಿರ ಸರ್ಕಾರಿ ಕನ್ನಡ ಶಾಲೆ ಮುಚ್ಚಲು ತಯಾರಿ: ಎಫ್.ಸಿ.ಚೇಗರಡ್ಡಿ

KannadaprabhaNewsNetwork | Published : Mar 11, 2025 12:45 AM

ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 6 ಸಾವಿರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ತಯಾರಿ ನಡೆದಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 6 ಸಾವಿರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ತಯಾರಿ ನಡೆದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಂಚಾಯಿತಿಗೆ ಒಂದೇ ಶಾಲೆ ಉಳಿದು ಗ್ರಾಮೀಣ, ತಳಸಮುದಾಯಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ದಿನಗಳು ದೂರವಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ.ಚೇಗರಡ್ಡಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ವಿದ್ಯಾಚೇತನ ಆವರಣದ ಬಿಆರ್‌ಸಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಾಮದುರ್ಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 48 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳವ ಮೂಲಕ ಕನ್ನಡ ಶಾಲೆ ಉಳಿಸುವ ಕಾರ್ಯ ಸರ್ಕಾರ ಮಾಡಲಿ ಎಂದು ಒತ್ತಾಯಿಸಿದರು.ಸಾಹಿತಿ ವೀರಣ್ಣ ಮಡಿವಾಳರ ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕರು ಎಂಬ ವಿಷಯದ ಕುರಿತು ಮಾತನಾಡಿ, ಶಿಕ್ಷಕರಿಗೆ ಅನ್ಯಕಾರ್ಯಗಳ ಹೊರೆ ಹೆಚ್ಚಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಗಗನ ಕುಸುಮವಾಗಿದೆ. ಶಾಲೆಯ ಕೆಲಸ ಬಿಟ್ಟು ಬೇರೆ ಕೆಲಸ ಮಾಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ಭುವನೇಶ್ವರಿ ಅಂಗಡಿ, ಶಾಲೆಗಳಲ್ಲಿ ಕಚೇರಿ ಕಾರ್ಯಕ್ಕೆ ಸಹಾಯಕರ ಹುದ್ದೆಗಳನ್ನು ನೀಡಬೇಕೆಂದು ಹೇಳಿದರು.

ಮಕ್ಕಳು ಮತ್ತು ಕಲಿಕೆ ವಿಷಯದ ಬಗ್ಗೆ ಧಾರವಾಡದ ಸಕ್ಕೂ ರಾಯಣ್ಣವರ ವಿಷಯ ಮಂಡನೆ ಮಾಡಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಅವರಿಗೆ ಕಲಿಸುವ ಅವಧಿಗಳು ಕಡಿಮೆಯಾಗಿ ಮಕ್ಕಳ ಕಲಿಕೆ ಕುಂಠಿತವಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗದುಗಿನ ಶಿಲ್ಪಾ ಹಳ್ಳಿಕೇರಿ ಮತ್ತು ಶಿಕ್ಷಣ ಸಂಯೋಜಕ ಶ್ರೀಕಾಂತ ಕರಲಿಂಗಪ್ಪನವರ, ಮಕ್ಕಳಿಗೆ ಕಲಿಸುವುದು ಎಷ್ಟು ಮುಖ್ಯವೋ ಹಾಗೆಯೇ ಏನು ಕಲಿಸಬೇಕು, ಎಷ್ಟು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಎಂಬ ಸ್ಪಷ್ಟತೆ ಶಿಕ್ಷಕರಿಗೆ ಇದ್ದರೆ ಕಲಿಕೆ ಚೆನ್ನಾಗಿ ನಡೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ರಾಜ್ಯ ಸಮಿತಿ ಸದಸ್ಯ ಪಾಂಡುರಂಗ ಜಟಗನ್ನವರ ವಹಿಸಿದ್ದರು. ಕೆ.ಎನ್.ಯಡ್ರಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ.ಪಾಟೀಲ, ಬಿಜಿವಿಎಸ್ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ಎನ್.ಬಿ.ಪೆಂಟೇದ, ರತ್ನಾ ಶೇತ್ಸನದಿ ವೇದಿಕೆ ಮೇಲಿದ್ದರು. ರಮೇಶ ಮೂಲಿಮನಿ ನಿರೂಪಿಸಿ, ಈರಣ್ಣ ಮುರನಾಳ ಸ್ವಾಗತಿಸಿ, ಚಂದ್ರು ಕಲ್ಲೂರ ವಂದಿಸಿದರು.

ಪದಾಧಿಕಾರಿಗಳನ್ನು ಆಯ್ಕೆ

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಮದುರ್ಗ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎನ್.ಯಡ್ರಾವಿ (ಗೌರವಾಧ್ಯಕ್ಷ), ತಿಮ್ಮಣ್ಣ ಬಂಡಿವಡ್ಡರ (ಅಧ್ಯಕ್ಷ), ಎಸ್.ಐ.ಪಾಟೀಲ, ಟಿ.ಜಿ.ಕರದೀನ (ಉಪಾಧ್ಯಕ್ಷರು), ಶ್ರೀನಿವಾಸ ಬಾಣಕಾರ(ಕಾರ್ಯದರ್ಶಿ), ಆರ್.ಎಲ್.ಮೇತ್ರಿ (ಖಜಾಂಚಿ), ಟಿ.ಸಿ.ಹುಗ್ಗಿ, ಎನ್.ಟಿ.ಹಳ್ಳಿಕೇರಿ (ಸಹಕಾರ್ಯದರ್ಶಿ) ಐ.ಎಸ್.ಮುರನಾಳ, ಸಿ.ಎನ್.ಕಲ್ಲೂರ, ಬಿ.ಎಚ್.ಕಾನನ್ನವರ, ಭುವನಾ ಅಂಗಡಿ, ಎಸ್.ಎಸ್.ಚೌಡಕಿ, ಆರ್.ಎಂ.ಮೂಲಿಮನಿ ಸಮತಾ (ಆಡಳಿತ ಮಂಡಳಿ ಸದಸ್ಯರು) ಸಂಚಾಲಕಿಯಾಗಿ ಜನಾಬಾಯಿ ಚವಲಾರ ಅವರು ಆಯ್ಕೆಯಾದರು.