ಹಾವೇರಿ: 2025- 26ನೇ ಶೈಕ್ಷಣಿಕ ಸಾಲಿಗೆ ಮೇ 29ರಿಂದ ಶಾಲೆಗಳು ಪುನರಾರಂಭವಾಗಲಿದ್ದು, ಶಾಲಾ ಕಟ್ಟಡ ಹಾಗೂ ಪೀಠೋಪಕರಣ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಲಾ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಸೂಚನೆ ನೀಡಿದರು.ನಗರದ ಜಿಲ್ಲಾ ಗುರುಭವನದಲ್ಲಿ ಶಾಲಾ ಪುನರಾರಂಭದ ಕುರಿತು ತಾಲೂಕಿನ ಎಲ್ಲ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಸಿದ್ಧತೆ ಸಭೆ ನಡೆಸಿ ಮಾತನಾಡಿ, ಶಾಲಾ ಪ್ರಾರಂಭೋತ್ಸವದಂದು ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು. ಶಾಲಾ ಪ್ರಾರಂಭೋತ್ಸವದಂದು ವಿದ್ಯಾರ್ಥಿಗಳಿಗೆ ಹೂವು ನೀಡುವ ಮೂಲಕ ಅಥವಾ ಸಸಿ ನೆಡಿಸುವ ಮೂಲಕ ಸ್ವಾಗತಿಸಿ. ಶಾಲಾ ಕೈತೋಟದಲ್ಲಿ ಬೆಳೆದ ಹೂವುಗಳಿಂದ ಅಥವಾ ಗ್ರೀಟಿಂಗ್ ಕಾರ್ಡ್ ಕೊಡುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ಸಲಹೆ ನೀಡಿದರು.ಶಾಲಾ ಕಟ್ಟಡದ ಚಾವಣಿ, ಶಾಲಾ ಆವರಣ, ಪೀಠೋಪಕರಣ, ಅಡುಗೆ ಕೋಣೆ, ಅಡುಗೆ ಪರಿಕರ ಹಾಗೂ ನೀರು ಸಂಗ್ರಹಣೆ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಬೇಕು. ಬಿಸಿಯೂಟಕ್ಕೆ ಬಳಸುವ ಎಲ್ಲ ದಾಸ್ತಾನುಗಳು ಶುಚಿಯಾಗಿವೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.ಒಂದನೇ ತರಗತಿಗೆ ಪ್ರವೇಶಗಳನ್ನು ಮೇ 28ರಿಂದ 30ರ ವರೆಗೆ ವಿಶೇಷ ದಾಖಲಾತಿ ಆಂದೋಲನ ನಡೆಸಬೇಕು. ಯಾವುದೇ ದಾಖಲೆಗಳಿಲ್ಲ ಅಥವಾ ಅಂಗವಿಕಲರು ಎನ್ನುವ ಕಾರಣಕ್ಕೆ ದಾಖಲಾತಿ ನಿರಾಕರಿಸುವಂತಿಲ್ಲ ಎಂದರು. ಗ್ರಂಥಾಲಯದ ಪುಸ್ತಕಗಳಲ್ಲಿ ಧೂಳು ಇರದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮಕ್ಕಳಿಗೆ ಪುಸ್ತಕ ಓದಲು ಅವಕಾಶ ಮಾಡಿಕೊಡಬೇಕು. ಜತೆಗೆ ಹಳೆಯ ಪುಸ್ತಕಗಳನ್ನು ಕ್ರೋಢಿಕರಿಸಿ ಬುಕ್ ಬ್ಯಾಂಕ್ ಸ್ಥಾಪನೆ ಮಾಡಿ ಎಂದು ಸಲಹೆ ನೀಡಿದರು.ಪ್ರಸಕ್ತ ಶೈಕ್ಷಣಿಕ ಸಾಲಿಗೆ ಹಂಚಿಕೆಯಾದ ಪುಸ್ತಕ ಮತ್ತು ಸಮವಸ್ತ್ರಗಳನ್ನು ಉತ್ತಮ ಕಟ್ಟಡದಲ್ಲಿ ಸಂಗ್ರಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಪುಸ್ತಕ ಹಾಗೂ ಸಮವಸ್ತ್ರಗಳು ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ತಾಲೂಕಿನ ಎಲ್ಲ 294 ಶಾಲೆಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಮುದಾಯ ಸಹಭಾಗಿತ್ವದೊಂದಿಗೆ ವಿಜೃಂಭಣೆಯಿಂದ ಮಾಡಲು ಸಕಲ ಸಿದ್ಧತೆಯೊಂದಿಗೆ ಮಾಡಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ಶಾಲಾ ಮುಖ್ಯ ಶಿಕ್ಷಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಸಹಾಯಕ ನಿರ್ದೇಶಕ ಜಗದೀಶ ಹಂಡೇಕಾರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಮಹದೇವಪ್ಪ ಮಾದರ, ಬಿಆರ್ಪಿ ಶ್ರೀನಿವಾಸ ಟಿ.ಎಂ. ಹಾಗೂ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.
ಹೋಳಿಗೆ ಶಿಖರಣಿ, ಮೊಟ್ಟೆ ನೀಡಿ..ಮೊದಲ ದಿನ ಮಧ್ಯಾಹ್ನ ಉಪಹಾರ ಯೋಜನೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರಾರಂಭಗೊಳ್ಳಬೇಕು. ಪ್ರತಿ ಮಗುವಿಗೂ ಹೋಳಿಗೆ ಶಿಖರಣಿ ಹಾಗೂ ಮೊಟ್ಟೆ ಸೇರಿದಂತೆ ರುಚಿ ಹಾಗೂ ಶುಚಿಯಾದ ಊಟ ನೀಡಬೇಕು ಎಂದು ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಬಿಇಒ ಎಂ.ಎಚ್. ಪಾಟೀಲ ಸಲಹೆ ನೀಡಿದರು.ಶಿಥಿಲಗೊಂಡ ಕೊಠಡಿಗೆ ಬೀಗ ಹಾಕಿಶಿಥಿಲಗೊಂಡ ತರಗತಿ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಕೂರಿಸಬಾರದು. ಶಿಥಿಲಗೊಂಡ ತರಗತಿಗಳಿಗೆ ಬೀಗ ಹಾಕಬೇಕು. ಶಿಥಿಲಗೊಂಡ ಕಟ್ಟಡ ಎಂದು ದಪ್ಪ ಅಕ್ಷದಲ್ಲಿ ಬರೆಯಬೇಕು ಹಾಗೂ ವಿದ್ಯಾರ್ಥಿಗಳು ಆ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಇಒ ಸೂಚನೆ ನೀಡಿದರು.
ದಾಖಲಾತಿ ಹೆಚ್ಚಿಸಿನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಶಾಲಾ ಪ್ರಾರಂಭೋತ್ಸವಕ್ಕೆ ಅನುಕೂಲವಾಗಿದ್ದು, ಈ ಕಾರ್ಯಕ್ರಮದ ಕುರಿತು ಪಾಲಕರಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ಮೂಲಕ ಶಾಲಾ ದಾಖಲಾತಿ ಹೆಚ್ಚಿಸಲು ಪ್ರಕ್ರಿಯೆ ಆರಂಭಿಸಬೇಕು. ಶಾಲೆಯ ವೈಶಿಷ್ಟ್ಯತೆ ಕುರಿತು ಪೋಸ್ಟರ್ ಹಾಗೂ ಕರಪತ್ರಗಳನ್ನು ತಯಾರಿಸಿ ಪ್ರಚಾರ ಕೈಗೊಳ್ಳಬೇಕು ಎಂದು ಬಿಇಒ ಸೂಚಿಸಿದರು.ಇ- ಸ್ವತ್ತು ಮಾಡಿಸಿಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಆಸ್ತಿಯ ಇ- ಸ್ವತ್ತು ಮಾಡಿಸಿದ ಒಂದು ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈವರೆಗೂ ಇ- ಸ್ವತ್ತು ಮಾಡದೇ ಇರುವ ಶಾಲೆಯವರು 15 ದಿನದೊಳಗಾಗಿ ಇ-ಸ್ವತ್ತು ಮಾಡಿಸಿ, ಅದರ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಬಿಇಒ ಸೂಚಿಸಿದರು.