ಹಳಿಯೂರು ಗ್ರಾಮದಲ್ಲಿ ನಡೆದ ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮ
ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ದೇವಾಲಯಗಳು ಕೇವಲ ಪೂಜಾ ಕೇಂದ್ರ ಗಳಾಗದೇ ಜನಜಾಗೃತಿ, ಸಮಾಜ ಜಾಗೃತಿ ಕೇಂದ್ರಗಳಾಗಬೇಕು. ಧರ್ಮದಿಂದ ಸಂಸ್ಕೃತಿ ಉಳಿದರೆ ಸಂಸ್ಕೃತಿಯಿಂದ ಸಮಾಜಕ್ಕೆ ಹೆಚ್ಚಿನ ಬಲ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಬುಧವಾರ ತಾಲೂಕಿನ ಹಳಿಯೂರು ಗ್ರಾಮದ ಶ್ರೀ ಬಯಲು ಬಸವೇಶ್ವರಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರಸ್ವಾಮಿ ಉತ್ಸವ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಅಂಗವಾಗಿ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಇಂದಿನ ಯುವ ಜನಾಂಗ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯ ಮರೆಯಬಾರದು, ವಿಜ್ಞಾನ ಸ್ವೀಕರಿಸಿ ಆದರೆ ಸಂಸ್ಕಾರ ಕಳೆದುಕೊಳ್ಳಬಾರದು. ಆಧುನಿಕತೆ ಅಪ್ಪಿಕೊಳ್ಳೋಣ ಆದರೆ ಧಾರ್ಮಿಕ ಪರಂಪರೆ ನಿರ್ಲಕ್ಷಿಸಬಾರದು. ದೇವರ ಮುಂದೆ ಎಲ್ಲರೂ ಸಮಾನರು. ಜಾತಿ ವರ್ಗ ಆರ್ಥಿಕ ಸ್ಥಿತಿ ಎಂಬ ಭೇದ ಮೀರಿ ಪರಸ್ಪರ ಪ್ರೀತಿ ಸಹೋದರತ್ವ ಮತ್ತು ಸೌಹಾರ್ದದಿಂದ ಬದುಕುವುದು ನಿಜವಾದ ಧರ್ಮಾಚರಣೆ. ಮಕ್ಕಳಿಗೆ ಸಂಸ್ಕಾರ ನೀಡೋಣ. ಯುವಕರಲ್ಲಿ ಧರ್ಮ ಪ್ರಜ್ಞೆ ಬೆಳೆಸೋಣ. ಗುರು ಹಿರಿಯರನ್ನು ಗೌರವಿಸೋಣ ಎಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ ದೇವಾಲಯಗಳು ಪೂಜೆ ಆಚರಣೆಗೆ ಸೀಮಿತವಾಗದೆ ನುಡಿ ಸಂಸ್ಕಾರ ಮತ್ತು ಬದುಕಿನ ಮಾರ್ಗವಾಗಿಸಿ ಸಮಾಜದ ಏಕತೆ ಕೇಂದ್ರ ಗಳಾಗಬೇಕೆಂದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ದೇವರ ಪ್ರತಿಷ್ಠಾಪನೆ ಜೊತೆಗೆ ಧರ್ಮವನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳೋಣ. ದೇವಾಲಯಗಳನ್ನು ಕಟ್ಟುವ ಜೊತೆಗೆ ಸದ್ಗುಣಗಳ ಸಮಾಜ ಕಟ್ಟೋಣ ಎಂದರು.
ಹಳಿಯೂರು ಗ್ರಾಮದಲ್ಲಿ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ವಹಿಸಿ ಆಶೀರ್ವಚನ ನೀಡಿದರು. ಶಾಸಕ ಜಿ.ಎಚ್. ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್.ಸುರೇಶ್ ಮತ್ತಿತರರು ಭಾಗವಹಿಸಿದ್ದರು.