ಹಾನಗಲ್ಲ: ನೀರಿಲ್ಲದ ಬದುಕನ್ನು ಊಹಿಸುವುದೂ ಸಹ ಅಸಾಧ್ಯ. ಹಾಗಾಗಿ ಜೀವಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ. ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಕಾಲ ಬದಲಾದಂತೆ ಕೆರೆ-ಕಟ್ಟೆಗಳನ್ನು ಮುಚ್ಚಲಾಗುತ್ತಿದೆ. ಕಾಲುವೆಗಳನ್ನು ಅತಿಕ್ರಮಿಸಿ ನೀರು ಸರಾಗವಾಗಿ ಹರಿದು ಜಲಮೂಲ ಸೇರುವುದನ್ನು ತಡೆಯಲಾಗಿದೆ. ನೀರಿನ ಅಪವ್ಯಯವೂ ಹೆಚ್ಚುತ್ತಿದೆ. ಇವೆಲ್ಲ ಕಾರಣಗಳಿಂದ ಸಂಕಷ್ಟ ತಲೆದೋರಿದೆ. ಸಮಸ್ಯೆ ಸೃಷ್ಟಿಯಾದ ಸಂದರ್ಭದಲ್ಲಿ ವ್ಯಥೆ ಪಡೆಯುವ ಬದಲಿಗೆ ನೀರಿನ ವಿಷಯದಲ್ಲಿ ಸಮಸ್ಯೆ ಸೃಷ್ಟಿಯಾಗದಂತೆ ಜಾಗರೂಕತೆ ವಹಿಸಬೇಕಿದೆ ಎಂದು ಹೇಳಿದರು.
ಸಮಾಜದ ಎಲ್ಲ ವರ್ಗದ ಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಮಹತ್ವದ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೊಡಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕಾಳಜಿ ವಹಿಸಿದ್ದು, ಹತ್ತು, ಹಲವು ಸಮಾಜೋಪಯೋಗಿ ಸೇವಾ ಕಾರ್ಯಗಳ ಮೂಲಕ ಮಾದರಿಯಾಗಿದೆ ಎಂದರು.ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಕಳೆದ ೧೫, ೧೬ ವರ್ಷಗಳ ಹಿಂದೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಜಾರಿಗೆ ಬಂದಿದ್ದು, ರಾಜ್ಯವ್ಯಾಪಿ ಇದುವರೆಗೆ ೯೯೭ ಕೆರೆಗಳನ್ನು ಹೂಳೆತ್ತಿ ಜೀರ್ಣೋದ್ಧಾರಗೊಳಿಸಲಾಗಿದೆ. ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಒಟ್ಟು ೪೮ ಕೆರೆಗಳನ್ನು ಸಂರಕ್ಷಿಸಲಾಗಿದೆ. ಸಣ್ಣ ಉಳಿತಾಯದಿಂದ ದೊಡ್ಡ ಬದಲಾವಣೆ ಸಾಧ್ಯ ಎನ್ನುವುದನ್ನು ನಿರೂಪಿಸಿರುವ ಯೋಜನೆ ಸಂಕಷ್ಟದ ಸಮಯದಲ್ಲಿ ಬಡ ಮತ್ತು ದುರ್ಬಲ ಕುಟುಂಬಗಳಿಗೆ ನೆರವಾಗುವ ಮಾನವೀಯ ಕಾರ್ಯದಲ್ಲಿ ತೊಡಗಿದೆ. ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆಗಲಿದೆ ಎನ್ನುವ ಸಂದೇಶ ಸಾರಿದೆ ಎಂದರು.