- ತಂಡಗಳಿಗೆ ಕದಂಬ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಹೆಸರು ನಾಮಕರಣ
ನಾಡಿನ ನಾಲ್ಕು ಪ್ರಸಿದ್ಧ, ಶ್ರೇಷ್ಠ ರಾಜವಂಶಗಳ ಹೆಸರಿನಲ್ಲಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪಿಪಿಎಲ್-2024 ಪಂದ್ಯಾವಳಿ ಡಿ.21 ಮತ್ತು 22ರಂದು ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆಯಲಿದೆ.
ಇದು ವರದಿಗಾರರ ಕೂಟದಿಂದ 3ನೇ ಬಾರಿಗೆ ನಡೆಯುತ್ತಿರುವ ಪ್ರೆಸ್ ಪ್ರೀಮಿಯರ್ ಲೀಗ್-2024 (ಪಿಪಿಎಲ್) ಪಂದ್ಯಾವಳಿಯಾಗಿದೆ. ಕೂಟದಲ್ಲಿ ಶುಕ್ರವಾರ ಕ್ರೀಡಾಪಟು ಸದಸ್ಯರು, ಮಹಿಳಾ ಸದಸ್ಯರು, ಹಿರಿಯ- ಕಿರಿಯ ಪತ್ರಕರ್ತರ ಸಮ್ಮುಖ ಮೊದಲು ನಾಲ್ಕೂ ತಂಡಗಳಿಗೆ ಪ್ರಾಂಚೈಸಿಗಳು ಚೀಟಿ ಎತ್ತುವ ಮೂಲಕ ತಂಡದ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಕ್ರೀಡೆಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ.ಪ್ರತಿ ತಂಡಕ್ಕೆ 15 ಜನರಂತೆ ಆಯ್ಕೆ ಮಾಡಿದ ನಂತರ ನಾಲ್ಕೂ ತಂಡಗಳಿಗೆ ಕದಂಬ, ಹೊಯ್ಸಳ, ಚಾಲುಕ್ಯ ಹಾಗೂ ರಾಷ್ಟ್ರಕೂಟ ಹೆಸರುಗಳನ್ನು ಚೀಟಿ ಎತ್ತುವ ಮೂಲಕ ನಾಮಕರಣ ಮಾಡಲಾಯಿತು. ತಂಡಗಳ ಸದಸ್ಯರ ಆಯ್ಕೆಯಲ್ಲಿ ಬ್ಯಾಟ್ಸ್ ಮನ್, ಬೌಲರ್, ಆಲ್ರೌಂಡರ್, ಸಾಮಾನ್ಯ ಆಟಗಾರರು ಹೀಗೆ ನಾಲ್ಕು ಶ್ರೇಣಿಯಲ್ಲಿ ಪ್ರತಿ ಸುತ್ತಿನಲ್ಲಿ 4 ಸದಸ್ಯರ ಹೆಸರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.