ವಿದ್ಯಾಕಾಂತರಾಜ್
ಕನ್ನಡಪ್ರಭ ವಾರ್ತೆ ಸಕಲೇಶಪುರಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದ ಸಂಭ್ರಮಕ್ಕೆ ನಾಯಕರ ನಡುವಿನ ಪ್ರತಿಷ್ಠೆ ಕರಿನೆರಳಾಗಿ ಕಾಡುತ್ತಿದೆ. ಪಟ್ಟಣ ಹೊರವಲಯದ ಬೈಪಾಸ್ ಜಂಕ್ಷನ್ನಲ್ಲಿ ನಾಡಪ್ರಭು ಕೆಂಪೇಗೌಡರ ೧೩ ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆಯನ್ನು ತಾಲೂಕು ಒಕ್ಕಲಿಗ ಸಮಾಜ ನಿರ್ಮಾಣ ಮಾಡುತ್ತಿದ್ದು ಸುಮಾರು ೨೫ ಲಕ್ಷ ರು. ವೆಚ್ಚದ ಪ್ರತಿಮೆಯನ್ನು ಸಮಾಜ ಸೇವಕ ಬಾಚಹಳ್ಳಿ ಪ್ರತಾಪಗೌಡ ಕೊಡುಗೆಯಾಗಿ ನೀಡಿದ್ದಾರೆ. ಆದರೆ, ಪ್ರತಿಮೆ ಕೂಡುಗೆ ನೀಡಿದವರನ್ನು ತಾಲೂಕು ಒಕ್ಕಲಿಗರ ಸಂಘ ಕಡೆಗಣಿಸುತ್ತಿದೆ. ಇವರ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಸುವ ಮೂಲಕ ಘನತೆಗೆ ಕುಂದು ತರುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಒಕ್ಕಲಿಗ ಸಮಾಜ ಪಟ್ಟಣದಲ್ಲಿ ಆಳವಡಿಸಿರುವ ಪ್ಲೇಕ್ಸ್, ಬ್ಯಾನರ್ಗಳಲ್ಲಿ ಪ್ರತಾಪ್ ಅವರ ಭಾವಚಿತ್ರ ಕೈಬಿಡಲಾಗಿದೆ. ಅಲ್ಲದೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಸಹ ಇವರ ಹೆಸರನ್ನು ಹಾಕದೆ ನಿರ್ಲಕ್ಷಿಸಲಾಗಿದೆ ಎಂದು ದೂರುತ್ತಿರುವ ಇವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾರೆ.ಪ್ರತಿಮೆಯನ್ನು ಹೆತ್ತೂರಿಗೆ ಕೊಂಡೊಯ್ಯುವ ಚಿಂತನೆ: ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಸೋಮವಾರ ಬಾಚಹಳ್ಳಿ ಪ್ರತಾಪ್ಗೌಡರ ಅಭಿಮಾನಿಗಳು ಸಭೆ ಸೇರಿ ತಾಲೂಕು ಒಕ್ಕಲಿಗರ ಸಂಘದ ನಡೆಯನ್ನು ಖಂಡಿಸಿರುವುದಲ್ಲದೆ ಉದ್ಘಾಟನೆಗೆ ಸಿದ್ದಗೊಂಡಿರುವ ಕೆಂಪೇಗೌಡರ ಪ್ರತಿಮೆಯನ್ನು ರಾತ್ರೋರಾತ್ರಿ ತಂದು ಹೆತ್ತೂರಿನಲ್ಲಿ ಪ್ರತಿಷ್ಠಾಪಿಸುವ ಬಗ್ಗೆಯು ಚರ್ಚೆ ನಡೆಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಅಧಿಚುಂಚುನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮಿಜಿ ಮುಂದಿನ ದಿನಗಳಲ್ಲಿ ಎಲ್ಲ ಒಳ್ಳೆಯದಾಗಲಿದೆ. ಶಾಂತವಾಗಿರುವಂತೆ ಆದೇಶಿಸಿದ್ದಾರೆ.
ತಾಲೂಕು ಒಕ್ಕಲಿಗರ ಸಮಾಜದಲ್ಲಿ ಮಂಗಳವಾರ ಸಭೆ ಸೇರಿದ ಸಮಾಜದ ಮುಖಂಡರು ಈ ಬಗ್ಗೆ ಚರ್ಚೆ ನಡೆಸಿದ್ದು ಬಾಚಹಳ್ಳಿ ಪ್ರತಾಪ್ಗೌಡರಿಗೆ ಸಮಾಜದಿಂದ ನೀಡಬೇಕಾಗಿರುವ ಎಲ್ಲ ಗೌರವ ನೀಡಲಾಗುವುದು ಎಂದು ಸ್ವಷ್ಟಪಡಿಸಿದ್ದಾರೆ. ಆದರೆ, ತಾಲೂಕು ಒಕ್ಕಲಿಗರ ಸಮಾಜದ ಕೆಲವು ಮುಖಂಡರ ವಾದವೇ ಬೇರೆಯಾಗಿದ್ದು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ನೆಪಮಾತ್ರ.ಮಠದಿಂದ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಾಲೂಕು ಒಕ್ಕಲಿಗ ಸಮಾಜದಲ್ಲಿ ಯಾವುದೇ ಪದವಿ ಇಲ್ಲದ ವ್ಯಕ್ತಿಗೆ ಮಠದಿಂದ ನಡೆಯುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಬೇಕು ಎಂಬ ಹಪಾಹಪಿ ಅವರ ಸಣ್ಣತನಕ್ಕೆ ಸಾಕ್ಷಿಯಾಗಲಿದೆ. ಅಲ್ಲದೆ, ಇಡೀ ಸಮಾಜವನ್ನು ನಗಣ್ಯ ಮಾಡಿ ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ಬಿಡದಿಯಿಂದ ಪಟ್ಟಣಕ್ಕೆ ತರುವ ಮೂಲಕ ಎಲ್ಲ ಪ್ರಚಾರವನ್ನು ಅವರೇ ಪಡೆದಿದ್ದಾರೆ ಎಂಬ ವಾದ ಮುಂದಿಡುತ್ತಿದ್ದಾರೆ.
ಈ ಮಧ್ಯೆ ಪ್ರತಿಮೆ ಫೆ.೧೩ ರಂದು ಉದ್ಘಾಟನೆಯಾಗಲಿದ್ದು ಅಂದು ಬಾಚಹಳ್ಳಿ ಪ್ರತಾಪ್ಗೌಡರ ಸೇರಿದಂತೆ ಅವರ ತಂಡ ಕಾರ್ಯಕ್ರಮದಿಂದ ದೂರ ಉಳಿಯಲು ಮುಂದಾಗಿದೆ. ಇದರಿಂದಾಗಿ ಒಂದಾಗಿ ಸಂಭ್ರಮಿಸಬೇಕಿದ್ದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಿನ್ನಮತದ ಕಾರ್ಮೋಡ ಅವರಿಸಿದೆ. ಗೌರವ ದೊರೆಯದ ಸ್ಥಳದಲ್ಲಿ ನಾನು ಇರುವುದಿಲ್ಲ. ಇದೇ ಕಾರಣಕ್ಕೆ ಕಾರ್ಯಕ್ರಮದಿಂದ ನಾನು ದೂರ ಇರಲು ಇಷ್ಟಪಟ್ಟಿದ್ದೇನೆ.ಬಾಚಹಳ್ಳಿ ಪ್ರತಾಪ್ಗೌಡ ಸಮಾಜ ಸೇವಕಸಮಾಜದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ತಲೆದೂರುವುದು ಸಹಜ. ಇದನ್ನು ಬೃಹತ್ ಆಕಾರದಲ್ಲಿ ಮಾಡುವುದು ತಪ್ಪು. ಮುಂದಿನ ದಿನಗಳಲ್ಲಿ ಎಲ್ಲ ಸರಿ ಹೋಗಲಿದೆ.
ಕಡಗರವಳ್ಳಿ ಅಶೋಕ ನಿರ್ದೇಶಕ ತಾಲೂಕು ಒಕ್ಕಲಿಗ ಸಮಾಜ