ಹಿಮ್ಸ್ ಆಸ್ಪತ್ರೆಗೆ ಪ್ರತಿಷ್ಠಿತ ‘ಕಾಯಕಲ್ಪ’ ಗೌರವ

KannadaprabhaNewsNetwork |  
Published : Feb 09, 2024, 01:46 AM IST
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ರಿಂದ ಸಂಸ್ಥೆಯ ನಿರ್ದೇಶಕ  ಡಾ. ಸಂತೋಷ್.ಎಸ್.ವಿ. ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ವಿ.ಆರ್. ಕಾಯಕಲ್ಪ ಪ್ರಶಸ್ತಿ ಸ್ವೀಕರಿಸಿದರು. | Kannada Prabha

ಸಾರಾಂಶ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಎರಡನೇ ಬಾರಿ ‘ಕಾಯಕಲ್ಪ’ ಪ್ರಶಸ್ತಿ ದೊರಕಿದ್ದು, ರಾಜ್ಯದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವ ಏಕೈಕ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಹಿಮ್ಸ್ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪ್ಲಾಟಿನಂ ಜ್ಯುಬಿಲಿ ಅಡಿಟೋರಿಯಂನಲ್ಲಿ ಫೆ.೦೬ ರಂದು ನಡೆದ ‘೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಸಂತೋಷ್.ಎಸ್.ವಿ. ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ವಿ.ಆರ್. ಇವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ೨೦೧೫ ರಲ್ಲಿ ಪ್ರಾರಂಭಿಸಿದ ‘ಕಾಯಕಲ್ಪ ಯೋಜನೆ’ಯಡಿ ೨೦೨೧-೨೨ನೇ ಸಾಲಿನಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಎರಡನೇ ಬಾರಿ ‘ಕಾಯಕಲ್ಪ’ ಪ್ರಶಸ್ತಿ ದೊರಕಿದ್ದು, ರಾಜ್ಯದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವ ಏಕೈಕ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಹಿಮ್ಸ್ ಪಾತ್ರವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ವರ್ಗದ ಜನರಿಗೂ ಗುಣಮಟ್ಟದ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸ್ವಚ್ಛ ಆಸ್ಪತ್ರೆಗಳಿಗೆ ಹಲವು ವಿಭಾಗಗಳಲ್ಲಿ ಕಾಯಕಲ್ಪ ಪ್ರಶಸ್ತಿ ನೀಡುತ್ತಿದೆ. ಸ್ವಚ್ಛತೆಯೊಂದಿಗೆ ಗುಣಮಟ್ಟದ ಹಾಗೂ ಸೋಂಕುರಹಿತ ಆರೋಗ್ಯ ಸೇವೆ ನೀಡಲು ಪೋತ್ಸಾಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಹಿಮ್ಸ್ ಆಸ್ಪತ್ರೆಗೆ ಪ್ರಥಮ ಸ್ಥಾನದ ಗೌರವ, ಪ್ರಶಸ್ತಿಯೊಂದಿಗೆ ರು.೫೦ ಲಕ್ಷ ಮೊತ್ತದ ನಗದು ಬಹುಮಾನವನ್ನು ನೀಡಲಾಗುತ್ತದೆ. ಬಹುಮಾನದ ಹಣದಲ್ಲಿ ಪ್ರತಿಶತ ಶೇ.೭೫%ರಷ್ಟನ್ನು ಆಸ್ಪತ್ರೆಯ ಅಭಿವೃದ್ಧಿ ಕಾರಣಗಳಿಗೆ ಬಳಸಿಕೊಳ್ಳಲು ಅವಕಾಶವಿದ್ದು, ಉಳಿದ ಪ್ರತಿಶತ ಶೇ.೨೫% ರಷ್ಟು ಹಣವನ್ನು ಶ್ರಮವಹಿಸಿದ ಎಲ್ಲಾ ಸಿಬ್ಬಂದಿಗಳಿಗೂ ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು. ಹಿಮ್ಸ್ ಸಂಸ್ಥೆಯು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸಾಧನೆಗಳಲ್ಲಿ ಇಡೀ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸ್ವಚ್ಛತೆ, ಸೌಲಭ್ಯಗಳು ಹಾಗೂ ಗುಣಮಟ್ಟದ ವಿಚಾರದಲ್ಲಿ ರಾಜ್ಯದ ಮುಂಚೂಣಿ ಸಂಸ್ಥೆಯಾಗಿರುತ್ತದೆ. ಈಗ ಮತ್ತೊಮ್ಮೆ ಕಾಯಕಲ್ಪ ಪ್ರಶಸ್ತಿ ಪಡೆಯುವ ಮೂಲಕ ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಆಸ್ಪತ್ರೆ ಎಂಬ ಮನ್ನಣೆಗೆ ಭಾಜನವಾಗಿದೆ.

ಪ್ರಶಸ್ತಿ ಸಿಗಲು ಕಾರಣೀಭೂತ ಸಂಸ್ಥೆಯ ಕಾಯಕಲ್ಪ ನೋಡಲ್ ಅಧಿಕಾರಿ ಡಾ.ಸಿದ್ಧರಾಮು ಎಸ್.ಮೇತ್ರಿ ಹಾಗೂ ಎಲ್ಲಾ ಆಡಳಿತ ವರ್ಗದವರು, ಬೋಧಕ-ಬೋಧಕೇತರ ಸಿಬ್ಬಂದಿ, ವಿಶೇಷವಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು ಕಾರಣರಾಗಿದ್ದಾರೆ. ಸಾರ್ವಜನಿಕರಿಗೆ ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಗಳನ್ನು ಇನ್ನೂ ಉತ್ತಮಗೊಳಿಸಲು ನಿರಂತರವಾಗಿ ಪ್ರಯತ್ನಿಸಲಾಗುವುದು. ಜೊತೆಗೆ ಸಂಸ್ಥೆಯ ಪ್ರಯತ್ನಕ್ಕೆ ಸಹಕರಿಸಿದ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಸಂಸ್ಥೆಯ ನಿರ್ದೇಶಕ ಡಾ. ಸಂತೋಷ್ ಎಸ್.ವಿ, ಮುಖ್ಯ ಆಡಳಿತಾಧಿಕಾರಿ ರೇಖಾ, ಆರ್ಥಿಕ ಸಲಹೆಗಾರರಾದ ಡಾ. ಅಶೋಕ.ಎಚ್.ಇ, ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ವಿ.ಆರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್. ಎಚ್.ಸಿ, ಡಾ. ಪ್ರವೀಣ್.ಜಿ., ನಿವಾಸಿ ವೈದ್ಯಾಧಿಕಾರಿ ಡಾ. ಶ್ರೀಧರ್, ಡಾ. ಲಕ್ಷ್ಮೀಶ್. ಶುಶ್ರೂಷ ಅಧೀಕ್ಷಕಿ ನಿರ್ಮಲ ಕುಮಾರಿ ಕೃತಜ್ಞತೆಗಳನ್ನು ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

21 ರಿಂದ 24ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ: ಚೇತನಾ ಯಾದವ್
ವೀರಾಂಜನೇಯ ಸ್ವಾಮಿಯ 13ನೇ ವರ್ಷದ ಜಯಂತ್ಯುತ್ಸವ