ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ: 12 ದಿನಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಡಿಸಿ ಆದೇಶ

KannadaprabhaNewsNetwork |  
Published : Jun 29, 2026, 02:30 AM IST
( ಈ ಸುದ್ದಿಗೆ ಜಿಲ್ಲಾಧಿಕಾರಿಯ ಫೋಟೋ ಬಳಸಿಕೊಳ್ಳುವುದು)  | Kannada Prabha

ಸಾರಾಂಶ

ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಬೇಕು

ಬಳ್ಳಾರಿ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಲು ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಸೂಚನೆ ನೀಡಿದ್ದಾರೆ.ಮಹಿಳೆಯರ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ-2013ರ ಕಲಂ 4ರ ಅನ್ವಯ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಪ್ರತಿಯೊಂದು ಸರ್ಕಾರಿ, ಅರೆ ಸರ್ಕಾರಿ ಕಚೇರಿ, ಇಲಾಖೆ, ಮಂಡಳಿ, ನಿಗಮ, ಸ್ಥಳೀಯ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಈ ಸಮಿತಿ ರಚನೆ ಕಡ್ಡಾಯವಾಗಿದೆ. ಆದಾಗ್ಯೂ ಜಿಲ್ಲೆಯ ಹಲವು ಕಚೇರಿಗಳು, ಶಾಲಾ-ಕಾಲೇಜುಗಳು, ಫ್ಯಾಕ್ಟರಿಗಳು, ವ್ಯಾಪಾರ ಮಳಿಗೆಗಳು, ಗಾರ್ಮೆಂಟ್ಸ್ ಹಾಗೂ ಬ್ಯಾಂಕುಗಳು ಇನ್ನು ಕಡ್ಡಾಯ ಸಮಿತಿ ರಚಿಸದಿರುವುದು ಅಥವಾ ವಿವರಗಳನ್ನು ‘She-Box'''''''''''''''''''''''''''''''' ಪೋರ್ಟಲ್‌ನಲ್ಲಿ ನೋಂದಾಯಿಸದಿರುವುದು ಗಮನಕ್ಕೆ ಬಂದಿದೆ. 12 ದಿನಗಳ ಒಳಗಾಗಿ ಎಲ್ಲ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಆಂತರಿಕ ದೂರು ಸಮಿತಿ ರಚಿಸಬೇಕು. ಸಮಿತಿ ರಚನೆಯ ಆದೇಶದ ಪ್ರತಿ, ಸದಸ್ಯರ ವಿವರ ಹಾಗೂ 2025ರ ವಾರ್ಷಿಕ ವರದಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಗಡುವು ನೀಡಿದ್ದು, ಒಂದು ವೇಳೆ ನಿಗದಿತ ಅವಧಿಯೊಳಗೆ ಸಮಿತಿ ರಚಿಸಿ ವರದಿ ಸಲ್ಲಿಸದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ನಿಯಮ ಪಾಲಿಸದ ಕಚೇರಿ ಮುಖ್ಯಸ್ಥರಿಗೆ ತಕ್ಷಣವೇ ‘ಶೋಕಾಸ್ ನೋಟಿಸ್'''''''''''''''''''''''''''''''' ಜಾರಿ ಮಾಡಲಾಗುವುದು. ನಿಯಮ ಉಲ್ಲಂಘನೆಯ ಕುರಿತು ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು. ಕಾಯ್ದೆಯ ಕಲಂ 26ರ ಅಡಿಯಲ್ಲಿ ಸಂಬಂಧಪಟ್ಟ ಸಂಸ್ಥೆ ಅಥವಾ ಮಾಲೀಕರ ವಿರುದ್ಧ ದಂಡಾತ್ಮಕ ಕಾನೂನು ಕ್ರಮ ಜರುಗಿಸಲಾಗುವುದು. ಮಹಿಳಾ ಸಿಬ್ಬಂದಿಗೆ ದೂರು ಸಲ್ಲಿಸಲು ಸೂಕ್ತ ವೇದಿಕೆ ಇಲ್ಲದ ಕಾರಣ ಏನಾದರೂ ಸಮಸ್ಯೆಯಾದರೆ, ಅದರಿಂದ ಉಂಟಾಗುವ ಆಡಳಿತಾತ್ಮಕ ಮತ್ತು ಕಾನೂನು ಹೊಣೆಗಾರಿಕೆಯನ್ನು ಆಯಾ ಕಚೇರಿ ಮುಖ್ಯಸ್ಥರೇ ವೈಯಕ್ತಿಕವಾಗಿ ಹೊರಬೇಕಾಗುತ್ತದೆ. ಈ ಆದೇಶವನ್ನು ಅತ್ಯಂತ ತುರ್ತು ಎಂದು ಪರಿಗಣಿಸಿ, ನಿಗದಿತ ಅವಧಿಯೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಾರಂಗ 100ನೇ ಮನೆ ಶತಸ್ಕೃತಿ ಹಸ್ತಾಂತರ
ಆರೋಗ್ಯವಂತ ಮಕ್ಕಳು ಭವಿಷ್ಯದ ನಾಯಕರು: ಯಶ್ ಪಾಲ್