ಪ್ರಧಾನಿ ಮೋದಿ, ಎಚ್ಡಿಕೆ ಜನಪರ ಆಡಳಿತ ಜನತೆಗೆ ತಿಳಿಸಿ: ಆರ್.ಎಚ್. ಮೆಣಸಗಿ

ಹತ್ತು ವರ್ಷದ ಕೇಂದ್ರದಲ್ಲಿನ ಮೋದಿ ಸರ್ಕಾರದ ಸಾಧನೆ, ರಾಜ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ ಹಾಗೂ ಬಿಜೆಪಿಯ ಜನಪರ ಯೋಜನೆಗಳನ್ನು ಮನೆ ಮನೆಗೆ ತೆರಳಿ ವಿವರಿಸಿ ಮತದಾರರ ಮನವೊಲಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಆರ್.ಎಚ್. ಮೆಣಸಗಿ ಹೇಳಿದರು.

KannadaprabhaNewsNetwork | Published : Apr 26, 2024 7:52 PM IST / Updated: Apr 27 2024, 09:38 AM IST

 ಕೆರೂರ :  ಹತ್ತು ವರ್ಷದ ಕೇಂದ್ರದಲ್ಲಿನ ಮೋದಿ ಸರ್ಕಾರದ ಸಾಧನೆ, ರಾಜ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ ಹಾಗೂ ಬಿಜೆಪಿಯ ಜನಪರ ಯೋಜನೆಗಳನ್ನು ಮನೆ ಮನೆಗೆ ತೆರಳಿ ವಿವರಿಸಿ ಮತದಾರರ ಮನವೊಲಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಆರ್.ಎಚ್. ಮೆಣಸಗಿ ಹೇಳಿದರು.

ಹೊಸಪೇಟೆ ಬಡಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಉಭಯ ಕಾರ್ಯಕರ್ತರು ಒಗ್ಗಟ್ಟು, ಶಿಸ್ತು, ಸಂಯಮದಿಂದ ವರ್ತಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಮೋದಿ ಸರ್ಕಾರದ ದಕ್ಷ ಆಡಳಿತ, ಸೇವಾ ಮನೋಭಾವವನ್ನು ದೇಶ-ವಿದೇಶಗಳ ನಾಯಕರೇ ಹೊಗಳುತ್ತಿದ್ದಾರೆ. ಅದನ್ನು ಸಹಿಸಲಾಗದ ಕಾಂಗ್ರೆಸ್‌ ನಾಯಕರು ಇಲ್ಲದ ಸಲ್ಲದ ಗುಲ್ಲು ಎಬ್ಬಿಸಿ ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕೇಂದ್ರದ ಕಿಸಾನ್ ಸಮ್ಮಾನ್‌ ಹಣದ ಜೊತೆಗೆ ರಾಜ್ಯದ ಬಿಜೆಪಿ ಸರ್ಕಾರ ರೈತರಿಗೆ ಪ್ರತಿವರ್ಷ ₹4 ಸಾವಿರ ಕೊಡುತ್ತಿತ್ತು. ಇದನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದ್‌ ಮಾಡಿದೆ ಎಂದು ದೂರಿದರು.

ಪಕ್ಷದ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಕೆಲಸವನ್ನೇ ಮಾಡಿಲ್ಲ ಎಂದಾದರೆ ಮತದಾರರು ಅವರನ್ನು ನಾಲ್ಕು ಬಾರಿ ಆಯ್ಕೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದ ಅವರು, ಗದ್ದಿಗೌಡರ ಕಾರ್ಯವೈಖರಿ, ಮೋದಿಯವರ ಸಾಧನೆಗಳು ಪುನಃ ಅವರನ್ನು ಗೆಲ್ಲಿಸುತ್ತವೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹಾಗೂ ಧುರೀಣ ಎನ್.ಬಿ. ಬನ್ನೂರ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಪ್ರತಿ ನಾಗರಿಕ ಮಾತನಾಡಿಕೊಳ್ಳುತ್ತಿದ್ದಾನೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಸಾಧನೆಗಳು ಪಿ.ಸಿ. ಗದ್ದಿಗೌಡರ ಗೆಲುವಿಗೆ ಕಾರಣವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪರಶುರಾಮ ಮಲ್ಲಾಡದ, ಸದಾನಂದ ಮದಿ, ಟೋಪೇಶ ಬದಾಮಿ, ಜಯಶ್ರೀ ದಾಸಮನಿ, ನಾಗರಾಜ ಕಾಚಟ್ಟಿ, ಬಿ.ಬಿ. ಜಲಗೇರಿ, ಗೋಪಾಲಪ್ಪ ಮದಿ, ಹಾಸಿಮಸಾಬ ಮುಲ್ಲಾ, ಪಿತಾಂಬ್ರಪ್ಪ ಹವೇಲಿ ಇದ್ದರು.

Share this article