ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವುದು ಶತಸಿದ್ಧವಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ ೪೦೦ಕ್ಕೂ ಅಧಿಕ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಗಜೇಂದ್ರಗಡ: ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವುದು ಶತಃಸಿದ್ಧವಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ ೪೦೦ಕ್ಕೂ ಅಧಿಕ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.ಫೆ.೯ರಿಂದ ೧೧ರ ವರೆಗೆ ನಡೆಯಲಿರುವ ಗ್ರಾಮ ಚಲೋ ಅಭಿಯಾನ ಹಿನ್ನೆಲೆಯಲ್ಲಿ ಶನಿವಾರ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ ೧೦ ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ವಿಶ್ವದ ಗಮನ ಸೆಳೆಯುವುದರ ಜತೆಗೆ ಪಾರದರ್ಶಕ ಆಡಳಿತದ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹೀಗಾಗಿ ವಿಪಕ್ಷಗಳಿಗೆ ಇದರ ಅರಿವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂಬ ಸತ್ಯ ಅವರಿಗೆ ತಿಳಿದಿದೆ. ಪರಿಣಾಮ ಕಾಂಗ್ರೆಸ್ನ ಅಧ್ಯಕ್ಷ ಖರ್ಗೆ ತಮ್ಮ ಮನಸ್ಸಿನಲ್ಲಿ ಭಯವನ್ನು ವ್ಯಕ್ತಪಡಿಸಿದ್ದು ಬಿಜೆಪಿಯ ೪೦೦ಕ್ಕೂ ಗೆಲ್ಲಲಿದ್ದಾರೆ ಎಂದಿದ್ದಾರೆ ಎಂದ ಅವರು, ಬಿಜೆಪಿ ಸರ್ಕಾರವು ನಗರ, ಪಟ್ಟಣಗಳ ಅಭಿವೃದ್ಧಿಗೆ ಸೀಮಿತವಾಗದೆ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ ಭಾರತ, ರೈತರ ಸಂಕಷ್ಟ ನಿವಾರಣೆಗಾಗಿ ಕಿಸಾನ್ ಸಮ್ಮಾನ್, ಹೊಗೆ ರಹಿತ ಮನೆಗಳಿಗಾಗಿ ಉಜ್ವಲಾ ಹಾಗೂ ಕೈಗೆಟುಕು ದರದಲ್ಲಿ ಔಷಧಿಗಾಗಿ ಜನೌಷಧಿ ಕೇಂದ್ರಗಳು ಮತ್ತು ಮನೆ, ಮನೆಗಳಿಗೆ ಜಲಜೀವನ ಮೀಷನ್ ಮೂಲಕ ಗಂಗೆಯನ್ನು ಹರಿಸಿದ್ದಾರೆ. ಇಂತಹ ನೂರಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಮೋದಿ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಐತಿಹಾಸಿಕ ಗೆಲುವಿನ ಮೂಲಕ ಅಧಿಕಾರವನ್ನು ಹಿಡಿಯಲಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಎಂದು ಅಭಿವೃದ್ಧಿ ಮರೆತಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತ ಜನತೆಗೆ ತಿಳಿಸಿ ಎಂದರು.
ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿ, ಕೋವಿಡ್ ಯಶಸ್ವಿ ನಿರ್ವಹಣೆ, ಕಾಶ್ಮೀರದಲ್ಲಿ ಆರ್ಟಿಕಲ್ ೩೭೦, ಕಾಶಿ, ಕೇದಾರನಾಥ ಕ್ಷೇತ್ರಗಳ ಜೀರ್ಣೋದ್ಧಾರ, ವಂದೇ ಭಾರತ ಮಿಷನ್ ಮೂಲಕ ರಷ್ಯಾ, ಉಕ್ರೇನ್ನಲ್ಲಿ ಸಿಲುಕಿದ್ದ ೨೫ ಸಾವಿರಕ್ಕೂ ಆಧಿಕ ವಿದ್ಯಾರ್ಥಿಗಳನ್ನು ಮತ್ತು ಆಪರೇಶನ್ ಗಂಗಾ ಹಾಗೂ ಆಪರೇಶನ್ ವಿಜಯ ಮೂಲಕ ಹೊರದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಪ್ರಧಾನಿ ಮೋದಿ ಅವರು ಕರೆ ತಂದಿದ್ದಾರೆ. ಅಲ್ಲದೆ ದೇಶದಲ್ಲಿ ರಾಮಮಂದಿರ ನಿರ್ಮಾಣದ ಮೂಲಕ ಅಸಂಖ್ಯಾತ ರಾಮ ಭಕ್ತರ ಕನಸನ್ನು ಸಾಕಾರಗೊಳಿಸಿದ್ದಾರೆ. ಹೀಗಾಗಿ ಅಭಿವೃದ್ಧಿಗೆ
ಬೆನ್ನೆಲುಬಾಗಿ ನಿಲ್ಲುವ ದೇಶದ ಜನತೆ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ತರಲಿದ್ದಾರೆ ಎಂದರು.
ಪುರಸಭೆ ಸ್ಥಾತಿ ಸಮಿತಿ ಚೇರಮನ್ ಕನಕಪ್ಪ ಅರಳಿಗಿಡದ, ಉಮೇಶ ಮಲ್ಲಾಪೂರ, ಬಿ.ಎಂ. ಸಜ್ಜನ, ಬಸವರಾಜ ಬಂಕದ, ಎಸ್.ಎಸ್. ಕಡಬಲಕಟ್ಟಿ, ರೇಣುಕಯ್ಯ ಅಂಗಡಿ ಸೇರಿ ತಾಲೂಕಿನ ೧೫ಕ್ಕೂ ಗ್ರಾಮಗಳ ಮುಖಂಡರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.