ಯಲ್ಲಾಪುರ: ನಮ್ಮ ಭಾರತೀಯ ಸಂಸ್ಕೃತಿಯಲ್ಲೇ ಎಲ್ಲರಿಗೂ ಒಳಿತು ಮಾಡುವ ಚಿಂತನೆ ಅಡಗಿದೆ. ಆ ನೆಲೆಯಲ್ಲಿ ಜಗತ್ತಿಗೆ ಒಳಿತಾಗಬೇಕೆಂಬ ಹಿನ್ನಲೆಯಲ್ಲಿ ನಮ್ಮ ಋಷಿಮುನಿಗಳು ನೀಡಿದ ಯೋಗವನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವಮಾನ್ಯ ಮಾಡಿದರು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ಶನಿವಾರ ಹಮ್ಮಿಕೊಂಡ ೧೧ನೇ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸೂರ್ಯ ಉಪಾಸನೆಯಿಂದಲೇ ಪ್ರತಿಯೊಂದು ಪ್ರಾರಂಭಗೊಳ್ಳುತ್ತದೆ. ನಮ್ಮ ದೀರ್ಘ ವಿಶ್ರಾಂತಿಯ ನಂತರ ಮನುಷ್ಯ ಯೋಗದ ಮೂಲಕ ಸೂರ್ಯನನ್ನು ಪ್ರಾರ್ಥಿಸಿದಂತೆಯೇ ಪ್ರಾಣಿ, ಪಕ್ಷಿಗಳು ಕೂಡ ಸೂರ್ಯನನ್ನು ಸ್ಮರಿಸುವುದನ್ನು ಕಾಣುತ್ತೇವೆ. ಯೋಗದಿಂದ ಶರೀರ, ಮನಸ್ಸು, ಬುದ್ಧಿ ಇದರ ಸಮತೋಲನದ ಸ್ಥಿತಿ ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ಸಮಾಜಮುಖಿಯಾಗಿ ಯೋಗಾಧ್ಯಯನ ಪ್ರತಿಯೊಬ್ಬರಿಗೂ ತಲುಪಿ ಸಮಾಜದ ಒಳಿತಿಗೆ ಕಾರಣವಾಗುವ ಕಾರ್ಯ ಮಾಡುವಂತಾಗಬೇಕು ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇಂದು ೧೭೭ ರಾಷ್ಟ್ರಗಳಲ್ಲಿ ಯೋಗದ ಆಚರಣೆ ಮಾಡಲಾಗುತ್ತಿದೆ. ೧೧ ವರ್ಷಗಳ ಹಿಂದೆ ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವ ಮಂಡಿಸಿ, ಯೋಗ ದಿನಾಚರಣೆ ಆಚರಿಸುವಂತೆ ಮಾಡಿದ್ದಾರೆ. ಪತಂಜಲಿ ಮಹರ್ಷಿಗಳು ನೀಡಿದ ಯೋಗವಿಂದು ವಿಶ್ವಮಾನ್ಯವಾಗಿದೆ. ಅಂದು ಕಂಪ್ಯೂಟರ್ ಯಾವುದೂ ಇಲ್ಲದಿರುವಾಗಲೂ ವೇದ, ಯೋಗ, ಉಪನಿಷತ್ತುಗಳನ್ನು ನಮಗೆ ನೀಡಿ, ತಲುಪಿಸುವಲ್ಲಿ ನಮ್ಮ ಪ್ರಾಚೀನ ಮುನಿಗಳ ಕೊಡುಗೆ ಮಹತ್ವದ್ದಾಗಿದೆ. ಅಂತಹ ಮಹಾಜ್ಞಾನವನ್ನು ನಮ್ಮ ಭಾರತ ವಿಶ್ವಕ್ಕೆ ತಲುಪಿಸಿದೆ. ವಿಶ್ವ ಶ್ರದ್ಧೆಯಿಂದ ಸ್ವೀಕರಿಸುತ್ತಿದೆ. ಹಾಗಂತ ಅನೇಕ ವಿತಂಡವಾದಿಗಳು ಕೂಡ ಹಲವು ಪ್ರಶ್ನೆ ಕೇಳುವವರು, ಬರೆಯುವವರು ಇದ್ದಾರೆ. ಅವುಗಳ ಬಗ್ಗೆ ನಾವು ಮಹತ್ವ ಕೊಡಬೇಕಾಗಿಲ್ಲ. ದೇಹ, ಮನಸ್ಸು, ಪ್ರಾಣ ಇವುಗಳ ಕ್ರಿಯೆ ಸತ್ಪಥದಲ್ಲಿ ಸಾಗಲು ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಾವು ಮಾಡುವ ಆಸನ ಯೋಗವಲ್ಲ. ಅದು ಪ್ರಾರಂಭಿಕ ಘಟ್ಟ. ಸಾಧನೆಯತ್ತ ಸಾಗಿದಾಗ ಯೋಗದ ಪರಿಪೂರ್ಣತೆ ಪಡೆಯಲು ಸಾಧ್ಯ ಎಂದರು.ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ.ಭಟ್ಟ ಶೀಗೆಪಾಲ ಅಧ್ಯಕ್ಷತೆ ವಹಿಸಿದ್ದರು.
ಯೋಗ ಫೆಡರೇಶನ್ ಆಫ್ ಇಂಡಿಯಾ ರಾಜ್ಯಮಟ್ಟದ ಸ್ಪರ್ಧೆಯನ್ನು ಸಾಗರದಲ್ಲಿ ಹಮ್ಮಿಕೊಂಡಾಗ ನಮ್ಮ ತಾಲೂಕಿನ ಯೋಗತ್ರಯರಾದ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೇಜಡ್ಡಿ, ಯೋಗಪಟು ನೇತ್ರಾವತಿ ಭಟ್ಟ ಮತ್ತು ಪವನಕುಮಾರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಗೌರವ ತಂದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ ಶುಭಹಾರೈಸಿದರು. ಪ್ರಾರಂಭದಲ್ಲಿ ಸುಬ್ರಾಯ ಭಟ್ಟ, ನಾಗೇಶ ವೆರ್ಣೇಕರ, ಕನಕಪ್ಪ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಶಿಕ್ಷಕ ರಾಮನಾಥ ಭಟ್ಟ ಸ್ವಾಗತಿಸಿದರು. ನ್ಯಾಯವಾದಿ ಜಿ.ಎಸ್.ಭಟ್ಟ ಹಳವಳ್ಳಿ ನಿರ್ವಹಿಸಿದರು. ಕಾರ್ಯದರ್ಶಿ ಸತೀಶ ಹೆಗಡೆ ವಂದಿಸಿದರು.