-ಅಡಕೆ ರಾಜಕಾರಣ ಬಿಡಬೇಕು-ತೀರ್ಥಹಳ್ಳಿಯಲ್ಲಿ ಕೆಪಿಸಿಸಿ ವಕ್ತಾರ ರಮೇಶ್ ಹೆಗ್ಡೆ ಆಗ್ರಹ । ಗುಟ್ಕಾ ನಿಷೇಧ: ಅಟಲ್ ಸರ್ಕಾರದ ವರದಿ ಗಮನಿಸಿಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಪೂಜ್ಯ ಭಾವನೆ ಹೊಂದಿರುವ ಲಕ್ಷಾಂತರ ರೈತರ ಬದುಕಿನ ಬೆಳೆಯಾಗಿರುವ ಅಡಕೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ಆತಂಕ ಇದೆ. 2001 ರಲ್ಲಿ ವಾಜಪೇಯಿ ಸರ್ಕಾರ ರಚಿಸಿದ್ದ ಸಹಕಾರ ಭಾರತಿ ಮುಖಂಡರನ್ನು ಒಳಗೊಂಡಿದ್ದ ಸಮಿತಿ ನೀಡಿದ ವರದಿಯಲ್ಲಿ ಅಡಕೆ ಕ್ಯಾನ್ಸರ್ಕಾರಕ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಔಷಧೀಯ ಗುಣವನ್ನೂ ಹೊಂದಿರುವ ಅಡಕೆಗೆ ಕ್ಯಾನ್ಸರ್ಕಾರಕ ಹಣೆ ಪಟ್ಟಿ ಕಟ್ಟುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಮುಖ್ಯ ಕಾರಣ. ಬಿಜೆಪಿ ಮುಖಂಡರು ಅಡಕೆ ರಾಜಕಾರಣ ಬಿಡಬೇಕು. ಅಡಕೆ ಮೌಲ್ಯವರ್ಧನೆಗೆ ಒತ್ತು ನೀಡುವಲ್ಲಿ ನಾವೆಲ್ಲರೂ ಸೇರಿ ಚಿಂತನೆ ನಡೆಸಬೇಕಿದೆ ಎಂದರು.ಸಹಕಾರ ಭಾರತಿ ಮುಖಂಡರಿದ್ದ ಸಮಿತಿ ನೀಡಿದ ವರದಿಯಲ್ಲಿ ಗುಟ್ಕಾ ಪಾನ್ ಮಸಾಲಾ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಡಕೆ ತೋಟದ ವಿಸ್ತರಣೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಸಹಕಾರ ಸಂಸ್ಥೆಗಳು ಮತ್ತು ನಬಾರ್ಡ್ ಅರ್ಥಿಕ ನೆರವು ನೀಡಬಾರದು ಎಂದೂ ಹೇಳಲಾಗಿದೆ. ಅಡಕೆ ನಿಷೇಧಿಸುವಂತೆ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರದಾನಿಗೆ ಪತ್ರವನ್ನೂ ಬರೆದಿದ್ದರು. ಅಡಕೆ ಮಾನ ಹರಾಜು ಮಾಡಿ ಈಗ ತಾವೇ ಅಡಕೆ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಟೀಕಿಸಿದರು.
ಸುಪ್ರೀಂಕೋರ್ಟಿಗೆ ಈ ವರೆಗೂ ಅಫಿಡವಿಟ್ ನೀಡದೆ ಅಡಕೆ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಅಡಕೆ ಬೆಳೆವ ರೈತರ ಬಗ್ಗೆ ಆಸಕ್ತಿ ಇಲ್ಲ. ಕೋರ್ಟ್ ತೀರ್ಪು ವಿರುದ್ಧವಾಗಿ ಬಂದರೆ ಅಡಕೆ ಬೆಳೆಯ ಸ್ಥಿತಿ ಶೋಚನೀಯವಾಗಲಿದೆ. ಕಾಂಗ್ರೆಸ್ ಮಾತ್ರ ಅಡಕೆ ಪರ ಕಾಳಜಿ ವಹಿಸಿದೆ. ತಾನು ಅಡಕೆ ರಕ್ಷಕನೆಂದು ಹೇಳಿಕೊಳ್ಳುವ ಶಾಸಕ ಆರಗ ಜ್ಞಾನೇಂದ್ರ ಕೇಂದ್ರ ಗೃಹಸಚಿವ ಅಮಿತ್ ಶಾ ಅಡಕೆ ಬೆಳೆಗಾರರಿಗೆ ನೀಡಿದ ಭರವಸೆಯನ್ನು ನೆನಪಿಸಿ 500 ಕೋಟಿ ಅನುದಾನವನ್ನು ತರುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಫೊಟೋ
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿ.ಎ.ರಮೇಶ್ ಹೆಗ್ಡೆ ಮಾತನಾಡಿದರು. ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಯುವ ಕಾಂಗ್ರೆಸ್ ಮುಖಂಡ ಅಮರನಾಥ ಶೆಟ್ಟಿ ಇದ್ದರು.