ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಜಯಂತಿ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮಿರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಿ ಭಾರತ ಅಖಂಡತೆಯ ಕನಸು ಕಂಡಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸ್ಸನ್ನು ಸಾಕಾರಗೊಳಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಜಯಂತಿ ಹಿನ್ನೆಲೆ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು,ದೇಶದ ಅಖಂಡತೆಗೆ ಹೋರಾಟ ಮಾಡಿದ ಧೀಮಂತ ನಾಯಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಆಗಿದ್ದಾರೆ. ನೆಹರು ಸರ್ಕಾರ ಜಮ್ಮು ಕಾಶ್ಮಿರಕ್ಕೆ 370 ವಿಶೇಷ ಸ್ಥಾನಮಾನ ನೀಡಿರುವುದನ್ನು ಅವರು ವಿರೋಧಿಸಿದರು. ನೆಹರು ಮಧ್ಯಂತರ ಸರ್ಕಾರದಲ್ಲಿ ಸಚಿವರಾಗಿದ್ದ ಮುಖರ್ಜಿ, ಸಂಸತ್ತಿನ ಒಳಗೆ ಮತ್ತು ಹೊರಗೆ ರಾಷ್ಟ್ರೀಯ ವಿಭಜನೆ ವಿರುದ್ಧ ಹೋರಾಡಿದರು. ಒಂದೇ ರಾಷ್ಟ್ರದಲ್ಲಿ ಎರಡು ಕಾನೂನು ಬೇಡ ಎಂದು ಹೋರಾಟ ಮಾಡುತ್ತಾ ಬಲಿದಾನ ಆದರು. ದೇಶದ ಅಖಂಡತೆಗೋಸ್ಕರ ಮತ್ತು 370 ರದ್ದುಗೊಳಿಸುವ ಗುರಿಯೊಂದಿಗೆ ಜನಸಂಘ ಸ್ಥಾಪಿಸಿದರು. ಅವರು ಹಾಕಿಕೊಟ್ಟ ತತ್ವ, ಸಿದ್ಧಾಂತದ ಅಡಿಯಲ್ಲಿ ಬಿಜೆಪಿ ಇವತ್ತು ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ದೇಶ ಮೊದಲು ನಂತರ ಪಕ್ಷ, ನಂತರ ವ್ಯಕ್ತಿ ಅನ್ನುವ ತತ್ವದಡಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತನಿಗೂ ಶ್ಯಾಮ ಪ್ರಸಾದ್ ಮುಖರ್ಜಿ ಪ್ರೇರಣೆಯಾಗಿದ್ದಾರೆ ಎಂದರು.
ಲೋಕಸಭಾ ಪರಾಜಿತ ಅಭ್ಯರ್ಥಿ ಡಾ. ಕೆ ಬಸವರಾಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಹೆಸರೂರ, ಪ್ರಮುಖರಾದ ರಮೇಶ ಕವಲೂರ, ಮಂಜುನಾಥ ನಾಡಗೌಡ್ರು, ಪುಟ್ಟರಾಜ ಚಕ್ಕಿ, ಮಹಾಲಕ್ಷ್ಮಿ ಕಂದಾರಿ, ರತ್ನಕುಮಾರಿ, ಗೀತಾ ಮುತ್ತಾಳ ಇತರರಿದ್ದರು.