ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮೋದಿಯ ಪಾಪದ ಕೊಡ ತುಂಬಿದೆ: ಉಗ್ರಪ್ಪ ಆರೋಪ

KannadaprabhaNewsNetwork | Published : Jul 29, 2024 12:52 AM

ಪ್ರಧಾನಿ ನರೇಂದ್ರ ಮೋದಿಯವರ ಪಾಪದ ಕೊಡ ತುಂಬಿದೆ, ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ, ಭ್ರಷ್ಟಾಚಾರಕ್ಕೆ ಪ್ರತ್ಯೇಕ್ಷವಾಗಿ ಇಲ್ಲದೆ ಹೋದರೂ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ಅಭಿಪ್ರಾಯ ಸಂಗ್ರಹ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಧಾನಿ ನರೇಂದ್ರ ಮೋದಿಯವರ ಪಾಪದ ಕೊಡ ತುಂಬಿದೆ, ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ, ಭ್ರಷ್ಟಾಚಾರಕ್ಕೆ ಪ್ರತ್ಯೇಕ್ಷವಾಗಿ ಇಲ್ಲದೆ ಹೋದರೂ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಆರೋಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಗೆ ಕಾರಣ ತಿಳಿದುಕೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಒಂದೆಡೆ ರೈತರ ಮೇಲೆ ದೌರ್ಜನ್ಯ, ಇನ್ನೊಂದೆಡೆ ಈ ದೇಶದಲ್ಲಿ ನಿರುದ್ಯೋಗ, ಬಡತನ ಸಮಸ್ಯೆ, ಸಾಲದ ಪ್ರಮಾಣದಲ್ಲೂ ಹಾಗೂ ಬೆಲೆ ಏರಿಕೆಯಾಗಿದೆ. ದೇಶ ಭೂ ಪ್ರದೇಶ ಉಳಿಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ವಿರೋಧ ಪಕ್ಷದವರನ್ನು ಶತೃುಗಳಂತೆ ನೋಡುತ್ತಿದ್ದಾರೆ. 3ನೇ ಬಾರಿ ಪ್ರಧಾನಿಯಾಗಿದ್ದಾಗ ಬದಲಾವಣೆ ಆಗುತ್ತದೆ ಎಂದು ಕೊಂಡಿದ್ದೆ ಆದರೂ ಆಗಲಿಲ್ಲ. ನಿನ್ನೆ ನಡೆದ ನೀತಿ ಆಯೋಗದ ಸಭೆಯಲ್ಲೂ ದ್ವೇಷದ ಪ್ರವೃತ್ತಿ ಮುಂದುವರಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರಿಗೆ 20 ನಿಮಿಷ ಭಾಷಣ ಮಾಡಲು ಅವಕಾಶ ನೀಡಿದರು. ಮಮತಾ ಬ್ಯಾನರ್ಜಿಯವರಿಗೆ 5 ನಿಮಿಷ ಕಾಲಾವಕಾಶ ಕೊಟ್ಟಿದ್ದಾರೆ ಎಂದರು.

ನೀತಿ ಆಯೋಗದ ಸಭೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಬರಬೇಕು ಎನ್ನುವ ಜವಾಬ್ದಾರಿ ಪ್ರಧಾನಿಯವರ ಮೇಲಿರುತ್ತದೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಆದರೆ, ನಂತರದಲ್ಲಿ ಅವರು ಈ ದೇಶದ ಪ್ರಧಾನಿ. ದೇಶ ಕಟ್ಟು ವವರು ಬರೀ ಆಡಳಿತ ಪಕ್ಷದಲ್ಲಿದ್ದವರು ಅಲ್ಲ, ದೇಶದಲ್ಲಿ ಸಾಮರಸ್ಯ ಉಳಿಯಬೇಕಾದರೆ ಎಲ್ಲಾ ಪ್ರಗತಿಯಾಗಬೇಕಾದರೆ ಆಡಳಿತ ಮತ್ತು ಪ್ರತಿಪಕ್ಷಗಳ ಪಾತ್ರ ಸಮನಾಗಿರುತ್ತದೆ. ಇದರಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ಬಜೆಟ್‌ ಕೊಡುವಲ್ಲೂ ತಾರತಮ್ಯ ಮಾಡಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣಕ್ಕೋಸ್ಕರ ತಮಗೆ ಯಾರು ಬೆಂಬಲ ನೀಡಿದ್ದಾರೋ ಅವರಿಗೆ ಬೆಂಬಲವಾಗಿ ನಿಲ್ಲುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.

ದೇಶದಲ್ಲಿ ಬದ್ಧತೆಯ ಮೌಲ್ಯಯುತ ರಾಜಕಾರಣ ಹೆಚ್ಚಾಗಬೇಕು, ಅಧಿಕಾರ ದಾಹದ ರಾಜಕಾರಣ ದೂರವಾಗಬೇಕು. ದ್ವೇಷ ರಾಜಕಾರಣ ದೂರವಾಗಬೇಕು. ಸ್ಥಾನಮಾನ ಸಿಕ್ಕಿದ ಮೇಲೆ ಮುತ್ಸದ್ಧಿ ರಾಜಕಾರಣ ಮಾಡಬೇಕು ಎಂದ ಉಗ್ರಪ್ಪ, ತಾತ್ವಿಕ ಸಿದ್ಧಾಂತದ ಮೇಲೆ ರಾಜಕಾರಣ ನಡೆಯಬೇಕು. ಈ ಹಿಂದೆ ಎ.ಬಿ. ವಾಜಪೇಯಿ ಸೇರಿದಂತೆ ಯಾವ ಪ್ರಧಾನಿಯೂ ಬೇರೆಯವರನ್ನು ಶತ್ರುಗಳಂತೆ ನೋಡುತ್ತಿರಲಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದಿನ ಕೇಂದ್ರ ಬಜೆಟ್‌ನಲ್ಲಿ ₹ 5500 ಕೋಟಿ ಇಟ್ಟಿತ್ತು. ಆದರೆ, ಈವರೆಗೆ ಒಂದು ರುಪಾಯಿ ಬರಲಿಲ್ಲ, ಈ ಬಾರಿ ಬಜೆಟ್‌ನಲ್ಲಿ ಯಾಕೇ ರಿಪೀಟ್‌ ಮಾಡಿಲ್ಲ, ಈ ದೇಶದ ನಾಯಕತ್ವ ವಹಿಸಿರುವ ಪ್ರಧಾನಿ ಯವರು ಗ್ರಾಪಂ ಮಟ್ಟದ ರಾಜಕಾರಣದಂತೆ ನಡೆದುಕೊಳ್ಳುತ್ತಿರುವುದು ಈ ದೇಶದ ದೌರ್ಭಾಗ್ಯ ಎಂದು ಆರೋಪಿಸಿದರು.

ಕೇಂದ್ರಕ್ಕೆ ಆದಾಯ ಕೊಡುವುದರಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಿಂದ ಹೋಗಿರುವ ಎಲ್ಲಾ ಲೋಕಸಭಾ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮಲ್ಲಿ ತಾಕತ್ತು ಬೆಳೆಸಿಕೊಂಡು ಪ್ರಧಾನಿ ಎದುರು ಟೇಬಲ್‌ ಗುದ್ದಿ ನಮ್ಮ ರಾಜ್ಯದ ಪಾಲನ್ನು ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಸರ್ಕಾರ ಮತ್ತು ಜನತೆ ಮಧ್ಯೆ ಪಕ್ಷ ಸೇತುವೆಯಾಗಿ ಕೆಲಸ ಮಾಡಲು ಸತ್ಯ ಶೋಧನಾ ಸಮಿತಿ ಪ್ರವಾಸ ಕೈಗೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣ ಏನು, ಪಕ್ಷ ಹೇಗೆ ಶಕ್ತಿಯುತಗೊಳಿಸಬೇಕು ಮತ್ತು ಜನತೆ ಸಮಸ್ಯೆಯನ್ನು ಪರಿಹಾರ ಮಾಡಲು ಜನತೆ ಮತ್ತು ಸರ್ಕಾರದ ನಡುವೆ ಪಕ್ಷ ಕೆಲಸ ಮಾಡಲು ಜಿಲ್ಲಾಮಟ್ಟದಲ್ಲಿ ಯಾವ ಸಲಹೆ ಸಿಗುತ್ತವೆ ಎಂಬುವ ಅನ್ವೇಷಣೆಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಸಮಿತಿಯನ್ನು ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್‌.ಡಿ. ತಮ್ಮಯ್ಯ, ಜಿ.ಎಚ್‌. ಶ್ರೀನಿವಾಸ್‌, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್‌, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಕೆಪಿಸಿಸಿ ವಕ್ತಾರ ರವೀಶ್‌ ಕ್ಯಾತನಬೀಡು, ಜಿಲ್ಲಾ ವಕ್ತಾರ ರೂಬಿನ್‌ ಮೋಸಸ್‌, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಜಿಪಂ ಮಾಜಿ ಸದಸ್ಯರಾದ ಸವಿತಾ ರಮೇಶ್‌, ಸುಬ್ರಹ್ಮಣ್ಯ ಇದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ವಿ.ಎಸ್‌. ಉಗ್ರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕರಾದ ಎಚ್‌.ಡಿ. ತಮ್ಮಯ್ಯ, ಜಿ.ಎಚ್‌. ಶ್ರೀನಿವಾಸ್‌, ಡಾ.ಅಂಶುಮಂತ್‌, ಶಿವಾನಂದಸ್ವಾಮಿ ಇದ್ದರು.