ರಿಸ್ಕ್ ತೆಗೆದುಕೊಂಡರೆ ವೃತ್ತಿಯಲ್ಲಿ ಯಶಸ್ಸು ಖಚಿತ

KannadaprabhaNewsNetwork |  
Published : Jul 28, 2024, 02:01 AM IST
7 | Kannada Prabha

ಸಾರಾಂಶ

ಎಲ್.ಎಲ್.ಬಿ. ನಂತರ ಮುಂದೇನು? ಅನ್ನುವ ಪ್ರಶ್ನೆ ನಮ್ಮೆಲ್ಲರಲ್ಲೂ ಹುಟ್ಟಿಕೊಂಡಿರುವುದು ಅಷ್ಟು ಅಸಹಜವೇನಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಈ ಕಾನೂನು ವೃತ್ತಿ ವಿದ್ಯಾರ್ಥಿ ಬದುಕಿನಷ್ಟು ಸುಲಭದ್ದಲ್ಲ. ನಿರಂತರ ಕಲಿಕೆ, ಎಂಥಾ ಬಿಕ್ಕಟ್ಟಿನ ಸಂದರ್ಭಗಳಲ್ಲೂ ರಿಸ್ಕ್ ತೆಗೆದುಕೊಳ್ಳುವ ಮನೋಧರ್ಮವಿದ್ದರೆ ಈ ವೃತ್ತಿಯಲ್ಲಿ ಯಶಸ್ಸು ಖಚಿತ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗಡೆ ತಿಳಿಸಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಬೆಂಗಳೂರು ವಲಯ ಒಂದರ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಒಂದು ಕಾಲವಿತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆ ಹೆತ್ತವರನ್ನು ಮತ್ತು ಮಕ್ಕಳನ್ನು ಕಾಡುತ್ತಿತ್ತು. ಈಗ ಕಾಲ ಬದಲಾದಂತೆ ಯಾವುದೇ ಪದವಿ ಪಡೆದ ನಂತರವೂ ಈ ಪ್ರಶ್ನೆ ಎಲ್ಲರಲ್ಲೂ ಹಾಗೇ ಮುಂದುವರೆಯುತ್ತಿದೆ. ಎಲ್.ಎಲ್.ಬಿ. ನಂತರ ಮುಂದೇನು? ಅನ್ನುವ ಪ್ರಶ್ನೆ ನಮ್ಮೆಲ್ಲರಲ್ಲೂ ಹುಟ್ಟಿಕೊಂಡಿರುವುದು ಅಷ್ಟು ಅಸಹಜವೇನಲ್ಲ. ಆದರೆ, ಈ ಪ್ರಶ್ನೆಗೆ ಸರಿಯಾದ ಉತ್ತರದೊಂದಿಗೆ ಎದುರುಗೊಳ್ಳುವುದು ಹೇಗೆ ಅನ್ನುವುದು ಅಷ್ಟೇ ಮುಖ್ಯ. ಬೆಳಗ್ಗೆ ಎದ್ದಕೂಡಲೇ ಒಬ್ಬ ವ್ಯಕ್ತಿಗೆ ಇವತ್ತಿನ ಬದುಕಿನ ಪಾಡೇನೂ ಎನ್ನುವ ಪ್ರಶ್ನೆಯ ರೀತಿಯಲ್ಲಿಯೇ ಅಂತಿಮ ವರ್ಷದ ಕಾನೂನು ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲೂ ಮೂಡಲೇಬೇಕು ಎಂದು ಅವರು ಹೇಳಿದರು.

ಭಾರತ ದಂಡ ಸಂಹಿತೆ 1860, ದಂಡ ಪ್ರಕ್ರಿಯಾ ಸಂಹಿತೆ 1973, ಭಾರತೀಯ ಸಾಕ್ಷ್ಯ ಅಧಿನಿಯಮ 1872 ದೇಶದ ಈ ಮೂರು ಕ್ರಿಮಿನಲ್ ಕಾನೂನುಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಾದ ನೀವು ವಕೀಲಿ ವೃತ್ತಿಗೆ ಕಾಲಿಡುತ್ತಿದ್ದೀರಿ. ಹೊಸ ಕಾನೂನು ಹೇಗೋ ಏನೋ ಎನ್ನುವ ಆತಂಕ ನಿಮ್ಮಲ್ಲಿರಬಹುದು. ಇದು ಸಹಜ ಕೂಡ. ಭಾರತದ ಕಾನೂನುಗಳು ನಿಂತ ನೀರಲ್ಲ ಎಂಬುದನ್ನು ಈ ಸಂದರ್ಭ ನಮಗೆ ಮನದಟ್ಟು ಮಾಡುತ್ತದೆ ಎಂದು ಅವರು ತಿಳಿಸಿದರು.

ಪದವಿ ಮುಗಿಸಿ ಬಂದವರು ಮೂರು ವರ್ಷ ಹಾಗೂ ಪಿಯುಸಿ ಓದಿದ ವಿದ್ಯಾರ್ಥಿಗಳು ಐದು ವರ್ಷಗಳ ಕಾನೂನು ವ್ಯಾಸಂಗ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಅಂತಿಮ ವರ್ಷಕ್ಕೆ ಬಂದ ಕೂಡಲೇ ಮುಂದೇನೂ ಎಂಬ ಪ್ರಶ್ನೆ ನಮಗೆ ಆತಂಕದ ಬದಲು ಕುತೂಹಲ ಉಂಟು ಮಾಡಬೇಕಿದೆ. ಕರ್ನಾಟಕದಲ್ಲಂತೂ ಕನ್ನಡದಲ್ಲೂ ಕಾನೂನು ಪುಸ್ತಕಗಳು ಹೇರಳವಾಗಿ ಸಿಗುವುದರಿಂದ ಎಪಿಪಿ, ಕಿರಿಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಕಾನೂನು ಓದಿದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದರು.

ಕ್ರಿಮಿನಲ್ ಸ್ವರೂಪದ ಪ್ರಕರಣಗಳಲ್ಲಿ ಹೆಚ್ಚಿನ ಆಸಕ್ತಿ ನಿಮ್ಮಲ್ಲಿದ್ದರೆ ಹಿರಿಯ ವಕೀಲರು ಪಾಟೀ ಸವಾಲಿನ ಪ್ರಶ್ನೆಗಳನ್ನು ಸಾಕ್ಷಿದಾರರಿಗೆ ಹೇಗೆ ಕೇಳುತ್ತಾರೆ ಎಂಬುದನ್ನು ನ್ಯಾಯಾಲಯದಲ್ಲಿ ಕಲಿಯಬಹುದು. ಪಾಟೀ ಸವಾಲಿನಂತಹ ಹಂತಗಳಲ್ಲಿ ನ್ಯಾಯವಾದಿಗಳು ಪೂರ್ವ ನಿರ್ಧಾರಿತ ಪ್ರಶ್ನೆಗಳಿಗಿಂತ ಸ್ಥಳದಲ್ಲಿಯೇ ಹಠಾತ್ ಸಾಕ್ಷಿದಾರ ಕೊಟ್ಟ ಉತ್ತರದಿಂದಲೇ ಪ್ರಶ್ನೆಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಹಿರಿಯ ನುರಿತ ವಕೀಲರ ತಮ್ಮ ಅನುಭವದ ಆಧಾರದ ಮೇಲೆ ಕೇಳುವ ಪ್ರಶ್ನೆಗಳು ಯುವ ವಕೀಲರಿಗೆ ನೆರವಾಗಬಲ್ಲದು ಎಂದು ಅವರು ಹೇಳಿದರು.

ಸೈಬರ್ ಅಪರಾಧಗಳು, ಕಮರ್ಷಿಯಲ್ ಲಿಟಿಗೇಶನ್ ಗಳು, ಬೌದ್ಧಿಕ ಸ್ವತ್ತಿನ ತಗಾದೆಗಳು, ವರಮಾನ ತೆರಿಗೆ ಪಾವತಿ ಕುರಿತ ಪ್ರಕರಣಗಳು, ಕಾರ್ಮಿಕರ ವಿವಾದಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ಗಳಿಗೆ ಬರುತ್ತಿವೆ. ನ್ಯಾಯವಾದಿಗಳು ಈಗ ಈ ಬಗೆಯ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆಗಾರರಾಗಿ, ಸಂಧಾನಕಾರರಾಗಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾಗಿ ಪ್ರಕರಣಗಳನ್ನು ಇತ್ಯರ್ಥ ಮಾಡಬಹುದಾದ ಹೊಸ ಸಾಧ್ಯತೆಗಳನ್ನು ನ್ಯಾಯಾಲಯಗಳೇ ಸೃಷ್ಟಿಸಿವೆ ಎಂದರು.

ನಿರಂತರ ಓದು, ಕಲಿಕೆ, ವಿನಯ, ವಿವೇಕಗಳು ವಕೀಲಿ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರತಿಯೊಬ್ಬ ಯುವ ನ್ಯಾಯವಾದಿಗಳಲ್ಲಿ ಅನಿವಾರ್ಯವೆಂಬಂತೆ ಇರಲೇಬೇಕು. ಈ ವೃತ್ತಿಯ ಆರಂಭದ ದಿನಗಳಲ್ಲಿ ನಿಮಗೆ ನೀವು ನಿರೀಕ್ಷಿಸಿದಷ್ಟು ದುಡ್ಡು ಯಶಸ್ಸು ಸಿಗದೇ ಇರಬಹುದು. ಆದರೆ ನಿರಂತರ ಶ್ರಮ, ಕಲಿಯುವ ಮತ್ತು ಕಲಿತದ್ದನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ವಿವೇಚನೆ ಮಾತ್ರ ನಿಮ್ಮನ್ನು ಗೆಲುವಿನ ದಡ ಮುಟ್ಟಿಸಬಲ್ಲದು ಎಂದು ಅವರು ಸಲಹೆ ನೀಡಿದರು.

ಈ ಕಾರ್ಯಾಗಾರದಲ್ಲಿ ಬೆಂಗಳೂರು ವಲಯ ಒಂದರ ವಿವಿಧ ಕಾನೂನು ಕಾಲೇಜುಗಳಿಂದ 50 ಹೆಚ್ಚಿನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್, ಕರ್ನಾಟಕ ರಾಜ್ಯ ಕಾನೂನು ವಿವಿ ಕಾರ್ಯಕ್ರಮ ಸಂಯೋಜಕ ಆರ್. ಮೋಹನ್, ವಿದ್ಯಾವರ್ಧಕ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮದ ಸಂಯೋಜಕ ಡಾ. ಶ್ರೀದೇವಿ ಕೃಷ್ಣ ಇದ್ದರು.

----

ಕೋಟ್...

ಈ ಹಿಂದೆ ಕಾನೂನು ವೃತ್ತಿಗೆ ಬರುವವರಲ್ಲಿ ವಾದ ಮಾಡುವ ಕೌಶಲ್ಯದ ಜೊತೆಗೆ ಡ್ರಾಫ್ಟಿಂಗ್ ನೈಪುಣ್ಯವೂ ಇರಲೇಬೇಕಾಗಿತ್ತು. ಈಗ ಇವೆರಡರ ಜೊತೆಗೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಕಂಪ್ಯೂಟರ್ ಜ್ಞಾನ ಇರಲೇಬೇಕಾದುದು ಅನಿವಾರ್ಯವಾಗಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನ್ಯಾಯಾಲಯಗಳಿಗೂ ಕಾಲಿಟ್ಟಿರುವುದರಿಂದ ಆರ್ಟಿಫಿಶಿಯಲ್ ತಂತ್ರಜ್ಞಾನದ ಕಲಿಕೆಯತ್ತಲೂ ಯುವ ವಕೀಲರು ಗಮನ ಕೊಡಬೇಕಿದೆ.

- ರವೀಂದ್ರ ಹೆಗಡೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ