ಕನ್ನಡಪ್ರಭ ವಾರ್ತೆ ಕೋಲಾರಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಸೂಚನೆ ನೀಡಿದರು. ನಗರದ ತಾಲ್ಲೂಕು ಕಚೇರಿಯಲ್ಲಿ ಕೋಲಾರ ವಿಧಾನಸಭಾ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿ, ಎರಡು ತಿಂಗಳು ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಏನೇ ಸಮಸ್ಯೆಗಳಿದ್ದರೂ ಕೂಡಲೇ ತಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ನೀರು, ಮೇವು ಪೂರೈಕೆಗೆ ಆದ್ಯತೆ
ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಜೊತೆಗೆ ರಾಸುಗಳಿಗೆ ಮೇವಿನ ಸಮಸ್ಯೆಯು ಬಿಗಡಾಯಿಸುವ ಸನ್ನಿವೇಶ ಎದುರಾಗಬಹುದು ಅದಕ್ಕೆ ಅವಕಾಶ ನೀಡದಂತೆ ಕ್ರಮ ವಹಿಸಿ ಎಂದು ಸೂಚನೆ ನೀಡಿದರಲ್ಲದೆ ನೀರಿನ ಸಮಸ್ಯೆ ಉಂಟಾದರೆ ಅದಕ್ಕೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗುತ್ತೀರಿ. ಎರಡು ತಿಂಗಳು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ತೇರಹಳ್ಳಿ ಬೆಟ್ಟದಲ್ಲಿರುವ ಗ್ರಾಮಗಳಿಗೆ ಕೂಡಲೇ ಪೈಪ್ ಅಳವಡಿಸಿ ತುರ್ತಾಗಿ ನೀರು ಸರಬರಾಜು ಮಾಡುವಂತೆ ಕೊಂಡರಾಜಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಸೂಚನೆ ನೀಡಿದರು. ಬೆಸ್ಕಾಂ ಕಂಪನಿಯ ಅಧಿಕಾರಿಗಳು ಸಹ ಪಿಡಿಓಗಳ ಜೊತೆಗೆ ಸ್ಪಂದಿಸಬೇಕು. ಟ್ರಾಸ್ಫಾರಂಗಳ ಸಮಸ್ಯೆ ಎದುರಾದರೆ ಕೂಡಲೇ ಅದನ್ನು ಸರಿಪಡಿಸಲು ಕ್ರಮ ವಹಿಸಬೇಕು ಎಂದರು.ಹೊಸ ಬೋರ್ವೆಲ್ ಕೊರೆಸಿ
ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಅಭಾವ ಉಂಟಾಗದಂತೆ ಪಿಡಿಓಗಳು ಕ್ರಮ ವಹಿಸಬೇಕು. ಜೊತೆಗೆ ಬೋರ್ವೆಲ್ಗಳಿಗೆ ಪಂಪು ಮೋಟಾರ್ ಸಮಸ್ಯೆ ಉಂಟಾದರೆ ಕೂಡಲೇ ತಿಳಿಸಿ ಹೊಸ ಪಂಪು ಮೋಟಾರ್ ಅಳವಡಿಸಿ ಕ್ರಮ ವಹಿಸುತ್ತೇನೆ. ನಗರಸಭೆ ವ್ಯಾಪ್ತಿಯಲ್ಲಿಯೂ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಕೂಡಲೇ ಆಯಾ ವಾರ್ಡಿನ ನಗರಸಭೆ ಸದಸ್ಯರು ಅಧಿಕಾರಿಗಳು ಹಾಗೂ ಸ್ಥಳಿಯ ಪ್ರಮುಖರದ್ದು ಸೇರಿಸಿ ಏನೇ ಸಮಸ್ಯೆ ಇದ್ದರೂ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬಹುದು ಎಂದರು.ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಕೋಡಿಕಣ್ಣೂರು ಕೆರೆ ಸ್ವಚ್ಚತೆಯಿಲ್ಲದೆ ಕೂಡಿದೆ ಅಲ್ಲದೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸಿದ್ದರೆ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ತುಂಬಿಸಬಹುದಾಗಿದ್ದು ಕೆರೆಯಲ್ಲಿ ನೀರು ತುಂಬಿದ್ದರೆ ನಗರದಲ್ಲಿ ನೀರಿನ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ತಿಳಿಸಿದರು. ರಾಜಸ್ವ ನಿರೀಕ್ಷಗೆ ತರಾಟೆಮುಖ್ಯವಾಗಿ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷರು ಗ್ರಾಮಗಳಲ್ಲಿ ರೈತರು ಬೆಳೆಯುವ ಬೆಳೆಗಳು ಪ್ರಕೃತಿ ವಿಕೋಪದಿಂದ ನಷ್ಟ ಉಂಟಾಗಿದ್ದರೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿ ರೈತರಿಗೆ ಸರ್ಕಾರದಿಂದ ಸಿಗುವ ನಷ್ಟ ಪರಿಹಾರವನ್ನು ಕೊಡಿಸಬೇಕು. ವೇಮಗಲ್ ಪಟ್ಟಣ ಪಂಚಾಯಿತಿಯ ರಾಜಸ್ವ ನಿರೀಕ್ಷಕರು ಸಂಜೆ ಯಾಗುತ್ತಿದ್ದಂತೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬಿಡಬೇಕು. ನಾನು ಇದನ್ನು ಸೀರಿಯಸ್ ಹಾಗಿ ತೆಗೆದುಕೊಂಡರೆ ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.
ತಹಸೀಲ್ದಾರ್ ನಯನ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಾ ಅಧಿಕಾರಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಏನೇ ಸಮಸ್ಯೆ ಇದ್ದರೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಾಗಿರುವ ನಮ್ಮ ಗಮನಕ್ಕೆ ತರಬೇಕು. ಯಾವುದೇ ಅಧಿಕಾರಿಗಳು ಸ್ಪಂದಿಸದೇ ಇದ್ದರೆ ಕೂಡಲೇ ಅಂತವರ ಬಗ್ಗೆ ಮಾಹಿತಿ ನೀಡಿ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು. ಸಭೆಯಲ್ಲಿ ತಾಪಂ ಇಒ ಬಿಎ ಮಂಜುನಾಥ್, ನಗರಸಭೆಯ ಪೌರಾಯುಕ್ತ ಪ್ರಸಾದ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಇದ್ದರು