ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಐ.ಆರ್.ಡಿ) ಪರಿಸರ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಿರಂತರ ಸೇವೆಗೈಯುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲಿ 7 ಲಕ್ಷ ಜನರಿಗೆ ವ್ಯಾಕ್ಸಿನೆಷನ್ ಮಾಡಿಸಿದ್ದು, 4 ಲಕ್ಷ ಜನರಿಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳನ್ನು ತಲುಪಿಸಿದೆ. ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಅಪರೇಷನ್ ಸ್ಮೈಲ್ ಸಂಸ್ಥೆ ಸಹಯೋಗದೊಂದಿಗೆ ಬೆಳಗಾವಿಯ ಕೆಎಲ್ಇ ಸೆಂಟೆನರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ಮೇ.17 ರಿಂದ ಮೇ.25ರವರೆಗೂ ಉಚಿತವಾಗಿ ಸೀಳು ತುಟಿ ಮತ್ತು ಅಂಗುಳ ಶಸ್ತ್ರ ಚಿಕಿತ್ಸೆ ನೀಡುವ ಉದ್ದೇಶದಿಂದ ಮೇ.5 ರಂದು ವಿಜಯಪುರ ನಗರದಲ್ಲಿ ಪೂರ್ವ ಸ್ಕ್ರೀನಿಂಗ್ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಆಪರೇಷನ್ ಸ್ಮೈಲ್ ಸಂಸ್ಥೆ ಜಗತ್ತಿನ 30 ದೇಶಗಳಲ್ಲಿ ಸೀಳು ತುಟಿ ಹಾಗೂ ಅಂಗುಳ ಸಮಸ್ಯೆ ಇರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದೆ. ಸೀಳು ತುಟಿ ಮತ್ತು ಅಂಗುಳ ಶಸ್ತ್ರ ಚಿಕಿತ್ಸೆಗೆ ಕನಿಷ್ಠ 75 ಸಾವಿರದಿಂದ 1 ಲಕ್ಷದ ವರೆಗೂ ಖರ್ಚಾಗುತ್ತದೆ. ಸೀಳು ತುಟಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವುದರಿಂದ ಮಕ್ಕಳಲ್ಲಿ ಅವರ ಶೈಕ್ಷಣಿಕ ಮತ್ತು ಆರೋಗ್ಯ ಬೆಳವಣಿಗೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ನಾವು ಅದರ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಆಪರೇಷನ್ ಸ್ಮೈಲ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ದುರ್ಗೇಶ್ವರಿ ಮಾತನಾಡಿ, ಉಚಿತ ಸೀಳು ತುಟಿ ಹಾಗೂ ಅಂಗುಳ ಶಸ್ತ್ರ ಚಿಕಿತ್ಸೆ ಕುರಿತು ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆಗಳ ಸಹಕಾರ ನೀಡುತ್ತಿವೆ. ರಷ್ಯಾ ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದ ಖ್ಯಾತ ತಜ್ಞ ವೈದ್ಯರು ಬರಲಿದ್ದಾರೆ ಎಂದು ತಿಳಿಸಿದರು.ಶಿಬಿರದ ಕುರಿತು ಸಿದ್ಧಪಡಿಸಲಾಗಿದ್ದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯಿತು.
ಗೋಷ್ಠಿಯಲ್ಲಿ ಐ.ಆರ್.ಡಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯಕದರ್ಶಿ ಬಸವರಾಜ ಸಜ್ಜನ, ಕಾನೂನು ಸಲಹೆಗಾರ್ತಿ ಸವಿತಾ ಸಜ್ಜನ, ವ್ಯವಸ್ಥಾಪಕಿ ರಶ್ಮಿ ಕುಲಕರ್ಣಿ, ಕಾರ್ಯಕ್ರಮ ಸಹ ಸಂಯೋಜಕಿ ಅಕ್ಷತಾ ಮೋರೆ ಉಪಸ್ಥಿತರಿದ್ದರು.----
ಕೋಟ್...ಮೇ.5ರಂದು ಪೂರ್ವ ಸ್ಕ್ರೀನಿಂಗ್ ಶಿಬಿರದಲ್ಲಿ ಪರೀಕ್ಷೆಗೊಳಪಟ್ಟವರಿಗೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ. ಉಚಿತ ಊಟ, ವಸತಿ ಮತ್ತು ಪ್ರಯಾಣದ ವ್ಯವಸ್ಥೆ ಸಹ ಮಾಡಲಾಗುವುದು. ಸೀಳು ತುಟಿ, ಅಂಗುಳ ಶಸ್ತ್ರ ಚಿಕಿತ್ಸೆ ಪೂರ್ವ ಸ್ಕ್ರೀನಿಂಗ್ ಶಿಬಿರದಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಮೊ.7001922096, 8002241816, 8618317514 ಹಾಗೂ 9480120391 ಸಂಖ್ಯೆಗಳಿಗೆ ಸಂಪರ್ಕಿಸಿ.
-ಡಾ.ಬಾಬು ಸಜ್ಜನ, ಐ.ಆರ್.ಡಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಒ.