ಮೂರು ಹಂತಗಳಲ್ಲಿ ಪ.ಜಾತಿ ಕುಟುಂಬಗಳ ಸಮೀಕ್ಷೆ: ಎಸ್. ಯುಕೇಶ್ ಕುಮಾರ್

KannadaprabhaNewsNetwork | Published : Apr 25, 2025 11:53 PM

ಸಾರಾಂಶ

ಪ.ಜಾತಿಯಲ್ಲಿ 101 ಉಪ ಜಾತಿಗಳನ್ನು ಗುರುತಿಸಲಾಗಿದೆ. ಮೂರು ಹಂತಗಳಲ್ಲಿ ಆಗಬೇಕಿರುವ ಸಮೀಕ್ಷೆ. ಜಿಲ್ಲೆಯಿಂದ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಆಯ್ಕೆ ಮಾಡಿ ತರಬೇತಿಗೆ ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿದೆ. ಮೇ 5 ರಿಂದ 17 ವರೆಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯನ್ನು ಮನೆ ಮನೆ ಸಮೀಕ್ಷೆ, ವಿಶೇಷ ಶಿಬಿರಗಳ ಮೂಲಕ ಹಾಗೂ ಅನ್ ಲೈನ್‌ನಲ್ಲಿ ಸ್ವಯಂ ಘೋಷಣೆ ಮೂಲಕ 3 ಹಂತಳಲ್ಲಿ ನಡೆಸಲಾಗುತ್ತದೆ ಎಂದು ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಹೇಳಿದರು.

ಜಿಪಂನ ಅಬ್ದುಲ್ ನಜೀರ್ ಸಾಬ್‌ ಸಭಾಂಗಣದಲ್ಲಿ ಶುಕ್ರವಾರ ಪ.ಜಾತಿಯ ಒಳಮೀಸಲಾತಿ ಸಂಬಂಧ ರಚಿಸಲಾದ ಎಚ್.ಎನ್. ನಾಗಮೋಹನ್ ದಾಸ್ ಕಮಿಟಿಯ ಸಮೀಕ್ಷೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ.ಜಾತಿಯಲ್ಲಿ 101 ಉಪ ಜಾತಿಗಳನ್ನು ಗುರುತಿಸಲಾಗಿದೆ. ಮೂರು ಹಂತಗಳಲ್ಲಿ ಆಗಬೇಕಿರುವ ಸಮೀಕ್ಷೆ. ಜಿಲ್ಲೆಯಿಂದ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಆಯ್ಕೆ ಮಾಡಿ ತರಬೇತಿಗೆ ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿದೆ. ಮೇ 5 ರಿಂದ 17 ವರೆಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಮಾಡಲಾಗುತ್ತಿದೆ. ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಮೇ 19 ರಿಂದ ಮೇ 21 ರವರೆಗೆ ಹಾಗೂ ಅನ್ ಲೈನ್ ಮೂಲಕ ಸ್ವಯಂ ಘೋಷಣೆಯನ್ನು ಮೇ 19 ರಿಂದ ಮೇ 23 ರವರೆಗೆ ನಡೆಸಲಾಗುತ್ತಿದೆ.

ಇಲ್ಲಿ ಪ.ಜಾತಿಯ ಜನರ ಸಮೀಕ್ಷೆಯನ್ನು ಮಾತ್ರ ನಡೆಸಲಾಗುತ್ತದೆ. ಶಿಕ್ಷಕರು ಸಮೀಕ್ಷೆಗೆ ಮನೆ ಮನೆಗೆ ಬಂದಾಗ ಪ.ಜಾತಿಯ ಸದಸ್ಯರು ಸಹಕರಿಸಿ ಅಗತ್ಯ ಮಾಹಿತಿ ನೀಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಒಳ ಜಾತಿಗಳಲ್ಲಿ ವಿವಿಧತೆ ಇದೆ. ಆದ್ದರಿಂದ ಪ.ಜಾತಿಯ ಒಳಮೀಸಲಾತಿ ವರ್ಗೀಕರಣಕ್ಕೆ ಪ.ಜಾತಿಯ ಕುಟುಂಬಗಳ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಪ.ಜಾತಿ ಜನಾಂಗ ದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು, ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿ, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿಯ ಒಡೆತನ, ಮನೆ ಆದಾಯ ಮುಂತಾದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದರು.

ಸಮೀಕ್ಷೆ 3 ಹಂತಗಳಲ್ಲಿ ನಡೆಯುತ್ತದೆ. ಮೊದಲನೇ ಹಂತ ಮನೆ ಮನೆ ಸಮೀಕ್ಷೆ, ಕ್ಯಾಂಪ್ ರೀತಿ ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆ ಹಾಗೂ ಅನ್ ಲೈನ್ ರಿಜಿಸ್ಟ್ರೇಷನ್ ನಡೆಯುತ್ತದೆ. ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು. ಸಮೀಕ್ಷೆ ಮೊಬೈಲ್ ಅಪ್ ಮೂಲಕ ಅನ್ ಲೈನ್ ನಲ್ಲಿ ಸಮೀಕ್ಷೆ ಮಾಡಲಾಗುವುದು. ಸಮೀಕ್ಷೆಯಲ್ಲಿ ಆಧಾರ್ ಸಂಖ್ಯೆ, ಜಾತಿ ಸಂಖ್ಯೆ, ಮೊಬೈಲ್ ಸಂಖ್ಯೆ ಅಗತ್ಯ. ಸಮೀಕ್ಷೆಯಲ್ಲಿ ಆದಿ ಕರ್ನಾಟಕ ಆದಿ ದ್ರಾವಿಡ ಹೀಗೆ ಉಪ ಜಾತಿಗಳನ್ನು ನಮೂದಿಸಬೇಕು ಎಂದು ಮಾಹಿತಿ ನೀಡಿದರು.

ಅಧಿಕಾರಿಗಳು ಸಮೀಕ್ಷೆ ನಡಯುವ ಸಂದರ್ಭದಲ್ಲಿ ಜಿಲ್ಲೆಯ‌ ಯಾವುದೇ ಪ.ಜಾತಿಯ ಕುಟುಂಬ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಮೀಕ್ಷೆಯ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿದ ಗಣತಿದಾರರಿಗೆ ಕರ್ನಾಟಕ ಪ.ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಉಪ ಜಾತಿಗಳ ಮಾಹಿತಿಯನ್ನು ಮುಜುಗರ ಒಳಗಾಗದೇ ನೀಡಬೇಕು ಎಂದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ನಮೂದಿಸಿದರೆ ಅಂಥವರು ಅದರ ಜೊತೆ ಉಪ ಜಾತಿಯನ್ನು ನಮೂದಿಸಬೇಕು ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article