ಗ್ರಾಮ ಸಡಕ್‌ ಯೋಜನೆಯಡಿ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ

KannadaprabhaNewsNetwork |  
Published : Oct 26, 2023, 01:00 AM ISTUpdated : Oct 26, 2023, 01:01 AM IST
ಫೋಟೋ 25 ಟಿಟಿಎಚ್ 01: ಹೆದ್ದೂರಿನ ಸಮೀಪ ಮುಂಡವಳ್ಳಿ-ಮೃಗವಧೆ ಸಂಪರ್ಕದ 3.96 ಕೋಟಿ ಅನುದಾನದ ನೇರಲಮನೆ ಹಳ್ಳದ ಸೇತುವೆ ನಿರ್ಮಾಣಕ್ಕೆ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

₹3.96 ಕೋಟಿ ಅನುದಾನ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಕೋಟ್ಯಂತರ ಅನುದಾನ ಹರಿದು ಬರುತ್ತಿದೆ. ಈ ಅನುದಾನದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಿಸುವ ಮೂಲಕ ಸಂಪರ್ಕ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು. ತಾಲೂಕಿನ ಹೆದ್ದೂರಿನ ಸಮೀಪ ಬುಧವಾರ ಮುಂಡವಳ್ಳಿ- ಮೃಗವಧೆ ಸಂಪರ್ಕದ ನೇರಲಮನೆ ಹಳ್ಳದ ಸೇತುವೆ ನಿರ್ಮಾಣಕ್ಕೆ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ ₹3.96 ಕೋಟಿ ಅನುದಾನದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಯೋಜನೆಯಲ್ಲಿ ಶಿವಮೊಗ್ಗ ವಿಭಾಗಕ್ಕೆ ಮಂಜೂರಾಗಿರುವ ₹12.21 ಕೋಟಿ ಅನುದಾನದಲ್ಲಿ ಈ ದಿನ ಗ್ರಾಮೀಣ ಪ್ರದೇಶದ 4 ಸೇತುವೆಗಳಿಗೆ ಚಾಲನೆ ನೀಡುತ್ತಿದ್ದೇವೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೇ, ಗ್ರಾಮೀಣ ರಸ್ತೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ. ಮಲೆನಾಡು ಭಾಗದ ಜನತೆಗೆ ಶಿವಮೊಗ್ಗದ ವಿಮಾನ ನಿಲ್ದಾಣದ ಮೂಲಕ ವಿಮಾನಯಾನ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ ಎಂದರು. ಈ ಮೊದಲು ಕೇಂದ್ರದಿಂದ ಲಕ್ಷ ರು. ತರೋದು ಸುಲಭವಾಗಿರಲಿಲ್ಲ. ನಮ್ಮ ಸರ್ಕಾರ ತೆರಿಗೆ ಸೋರಿಕೆ ತಡೆದು ಅಭಿವೃದ್ದಿಗೆ ಆದ್ಯತೆ ನೀಡುತ್ತಿದ್ದು, ಕೋಟಿ ಕೋಟಿ ಹಣ ಮಂಜೂರಾಗುತ್ತಿದೆ. ಈ ತಾಲೂಕಿನ 49 ಸಮುದಾಯ ಭವನಗಳಿಗೆ ₹19 ಕೋಟಿ ಮಂಜೂರಾಗಿದೆ. ದೂರವಾಣಿ ಸಂಪರ್ಕ ಅಭಿವೃದ್ಧಿಪಡಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ 262 ಬಿಎಸ್‍ಎನ್‍ಎಲ್ ಟವರ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನೇರಲಮನೆ ಹಳ್ಳದ ಸೇತುವೆಗೆ ಮಳೆಗಾಲದ ಹೊರ ಜಗತ್ತಿನ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದ ಈ ಭಾಗದ ಜನತೆಯ ದಶಕಗಳ ಬೇಡಿಕೆಯಾಗಿದೆ. ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದಲ್ಲಿ ಅನುದಾನ ಮಂಜೂರಾಗಿದೆ. ಮುಂಬರುವ ಮಳೆಗಾಲಕ್ಕೆ ಮುನ್ನ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಿಸಿ ಜನರಿಗೆ ಈಗ ತಾಗುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳು ಕಳೆದಿದ್ದರೂ ಈವರೆಗೆ ಗುತ್ತಿಗೆದಾರರ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಹಿಂದಿನ ಸರ್ಕಾರ ಬಜೆಟ್ಟಿನಲ್ಲಿ ಎಲೆಚುಕ್ಕಿ ರೋಗದ ಸಲುವಾಗಿ ಇಟ್ಟಿದ್ದ ₹10 ಕೋಟಿ ಅನುದಾನವನ್ನು ಈ ಸರ್ಕಾರ ರದ್ದು ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು. ಹೆದ್ದೂರು ಗ್ರಾಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಸುಚಲಾ, ಚಂದ್ರಶೇಕರ್, ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್, ಆರ್.ಮದನ್, ಬೇಗುವಳ್ಳಿ ಕವಿರಾಜ್ ಇದ್ದರು. - - - -25ಟಿಟಿಎಚ್01: ಹೆದ್ದೂರಿನ ಸಮೀಪ ಮುಂಡವಳ್ಳಿ- ಮೃಗವಧೆ ಸಂಪರ್ಕದ ₹3.96 ಕೋಟಿ ಅನುದಾನದ ನೇರಲಮನೆ ಹಳ್ಳದ ಸೇತುವೆ ನಿರ್ಮಾಣಕ್ಕೆ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌