ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಕೈಗಾರಿಕೆ ಮತ್ತು ಮೂಸೌಕರ್ಯ ನಿಗಮದಿಂದ ರಾಜ್ಯದ ವಿಮಾನ ನಿಲ್ದಾಣಗಳ ಮೇಲ್ದರ್ಜೆಗೇರಿಸುವುದರ ಜೊತೆಗೆ ಬಾಗಲಕೋಟೆಯಲ್ಲಿ ಬಿಟಿಡಿಎದಿಂದ 6 ಎಕರೆ ಜಾಗ ಪಡೆದುಕೊಂಡು ಅತ್ಯುತ್ತಮ ರೆಸ್ಟೋರೆಂಟ್ ನಿರ್ಮಿಸಲಾಗುವುದು ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿಯೂ ವಿಮಾನಗಳು ಹಾರಾಟ ಮಾಡುವ ರೀತಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. ಅಧ್ಯಕ್ಷನಾದ ನಂತರ ವಿಜಯಪುರ ವಿಮಾನ ನಿಲ್ದಾಣ ಪರಿಶೀಲಿಸಿದ್ದೇನೆ. ಶೇ.95 ಕಾಮಗಾರಿ ಪೂರ್ಣಗೊಂಡಿದೆ. ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ದೀಪಾವಳಿ ನಂತರ ಪರಿಶೀಲನೆಗೆ ತೆರಳುವುದಾಗಿ ಹೇಳಿದರು.
ಈಗಾಗಲೇ ಐಹೊಳೆ, ಬಾದಾಮಿಯಲ್ಲಿ ಹೊಟೇಲ್ ನಿರ್ಮಾಣವಾಗುತ್ತಿವೆ. ಬಾಗಲಕೋಟೆಯಲ್ಲೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವ ರೀತಿಯಲ್ಲಿ ಅತ್ಯುತ್ತಮವಾದ ಹೊಟೇಲ್ ನಿರ್ಮಿಸಲಾಗುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಏರ್ಸ್ಟ್ರಿಪ್, ಹೆಲಿಪ್ಯಾಡ್ ಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ. ಸದದಲ್ಲೇ ನಿಗಮದ ಸಭೆಯನ್ನೂ ನಡೆಸಲಾಗುತ್ತದೆ ಎಂದು ಹೇಳಿದರು..ಯುಕೆಪಿ ವಿಚಾರದಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದಲ್ಲದೆ ಮೂರು ವರ್ಷದಲ್ಲಿ ಮೂರನೇ ಹಂತದ ಭೂಸ್ವಾಧೀನ ಪೂರ್ಣಗೊಳಿಸಲು ಬದ್ಧತೆ ಪ್ರಕಟಿಸಿದೆ. ಸಚಿವ ಸಂಪುಟದ ತೀರ್ಮಾನಗಳನ್ನು ಆದೇಶ ರೂಪದಲ್ಲೂ ಹೊರಡಿಸಿದೆ ಎಂದರು.
ಪಡಿತರ ವಿತರಣೆಯಲ್ಲಿ ಅಕ್ರಮ ತಡೆಯಲು ರಾಜ್ಯ ಸರ್ಕಾರ ಹಲವು ಬದಲಾವಣೆ ತಂದಿದ್ದು, ಹೆಚ್ಚಿನ ಪಾರದರ್ಶಕತೆಯನ್ನು ಕಾಣಬಹುದಾಗಿದೆ. ಇದರಿಂದ ರಾಜ್ಯದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರು ಮಾತನಾಡಿ, ರಾಜ್ಯ ಸರ್ಕಾರ ಯುಕೆಪಿ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಈಗ ಸರ್ಕಾರ ತನ್ನ ಆದೇಶದಲ್ಲೇ ಬದ್ಧತೆಯನ್ನೂ ಪ್ರಕಟಿಸಿದೆ. ಪುನರ್ವಸತಿ ವಿಷಯದಲ್ಲಿ ಪರ್ಯಾಯ ಚಿಂತನೆ ಬಗ್ಗೆ ಸರ್ಕಾರದ ಪ್ರಸ್ತಾಪವಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಳುಗಡೆ ಭೂಸ್ವಾಧೀನಕ್ಕೆ ಪರಿಹಾರ ಸಿಕ್ಕಂತೆ ಆಗಿದೆ. ಪುನರ್ವಸತಿ ವಿಷಯದಲ್ಲಿ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದರು.
ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ ದಡ್ಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಸೈಫುದ್ಧಿನ್ ಕಲಾದಗಿ(ನಕಾಶ) ಇದ್ದರು.