ಕೂಡ್ಲಿಗಿ: ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪ್ರಗತಿಯಲ್ಲಿ ಸಾಗಲು ಮೂಲಸೌಕರ್ಯಗಳ ಅಗತ್ಯವಿದೆ. ಹೀಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.
ಇಲ್ಲಿನ ನಾಡಕಚೇರಿಗೆ ಸ್ವಂತ ಕಟ್ಟಡವಿರಲಿಲ್ಲ. ಈಗ ಕಾಮಗಾರಿ ಪೂರ್ಣವಾಗಿದ್ದು, ಮುಬರುವ ದಿನಗಳಲ್ಲಿ ಕಚೇರಿ ಉದ್ಘಾಟನೆ ಮಾಡಲಾಗುವುದು ಎಂದರು.
ಕಾರ್ಮಿಕ ಇಲಾಖೆಯಿಂದ ಹೊಸ ಮೊರಾರ್ಜಿ ಶಾಲೆಗೆ ಅನುಮೋದನೆ ಸಿಕ್ಕಿದೆ. ಈ ಸಂಬಂದ ಶಿವಪುರ ಬಳಿ 9 ಎಕರೆ ಜಮೀನು ಗುರುತಿಸಿದೆ. ಈ ಶಾಲೆಯಲ್ಲಿ 700 ವಿದ್ಯಾರ್ಥಿಗಳಿಗೆ ಇಲ್ಲಿ 6ನೇ ತರಗತಿಯಿಂದ 12ನೇ ತರಗತಿ ವರೆಗೆ ವ್ಯಾಸಂಗಕ್ಕೆ ಅವಕಾಶವಿದೆ ಎಂದರು.ತಾಲೂಕಿಗೆ ಎರಡು ಪಬ್ಲಿಕ್ ಶಾಲೆ ನೀಡುವಂತೆ ಕೋರಲಾಗಿದೆ. ವಸತಿ ನಿಲಯಗಳ ಅವಶ್ಯಕತೆ ಬಗ್ಗೆ ಸರ್ಕಾರ ಮುಂದೆ ಅಂಕಿ-ಸಂಖ್ಯೆಗಳೊಂದಿಗೆ ಬೇಡಿಕೆ ಇಟ್ಟಿರುವೆ. ಹಳೆಯ ವಸತಿ ನಿಲಯಗಳು ದುರಸ್ತಿಗೆ ಕ್ರಮವಹಿಸುವೆ ಎಂದು ಹೇಳಿದರು.
ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೂಡ್ಲಿಗಿ ತಾಪಂ ಇಒ ನರಸಪ್ಪ, ಬಿಸಿಎಂ ಜಿಲ್ಲಾ ಅಧಿಕಾರಿ ಶಶಿಕಲಾ, ಗ್ರಾಪಂ ಅಧ್ಯಕ್ಷ ಕೆ.ಜಿ. ಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮಿರಜನಿಕಾಂತ್, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಬಳೆಗಾರ ಜಗದೀಶ, ಕೆ.ಜಿ. ಕುಮಾರ್ಗೌಡ, ಹುಲಿಕೆರೆ ಮಾರಪ್ಪ, ಸೂರ್ಯಪ್ರಕಾಶ್, ಜಿ. ಓಬಣ್ಣ, ಹೊನ್ನೂರಸ್ವಾಮಿ, ಎಳೆನೀರು ಗಂಗಣ್ಣ, ಮಾಜಿ ಉಪಾಧ್ಯಕ್ಷ ಎಚ್. ದುರುಗೇಶ, ಡಾ. ಟಿ. ಓಂಕಾರಪ್ಪ ಮುಂತಾದವರು ಇದ್ದರು.