ಸಖರಾಯಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಉದ್ಘಾಟನೆ
ಕಾಂಗ್ರೆಸ್ ನೇತೃತ್ವದ ಸರ್ಕಾರಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಆದ ನಂತರ ರಾಜ್ಯಮಟ್ಟದಲ್ಲಿ ಜನಸಂಪರ್ಕ ಸಭೆ ಮೂಲಕ ಆಯಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಈ ಸಭೆಗಳನ್ನು ಆಯೋಜಿಸಿ ಸ್ಥಳದಲ್ಲೇ ಸರ್ಕಾರದ ಸವಲತ್ತು ಸಿಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ಮಂಗಳವಾರ ಕಡೂರು ತಾಲೂಕಿನ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಹಾಗು ಜಿಲ್ಲಾಡಳಿತದಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಆಡಳಿತ ಯಂತ್ರ ನೇರವಾಗಿ ಜನರ ಬಳಿ ತೆರಳಿ ಸಮಸ್ಯೆ ಪರಿಹರಿಸಿ ಸರ್ಕಾರದ ಸವಲತ್ತು ಸಿಗುವಂತೆ ಮಾಡುವ ಮಹತ್ವಾಕಾಂಕ್ಷೆ ಕಾರ್ಯಕ್ರಮ ಇದಾಗಿದೆ. ಬಡವರಿಗೆ ಮಾತಿನ ಮೂಲಕ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಸವಲತ್ತುಗಳಿಂದ ಬಡವರ ಜೀವನ ಸುಧಾರಣೆಯಾಗಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಸೇರಿದಂತೆ ಕಳೆದ 12ರಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ ಯುವನಿಧಿ ಯೋಜನೆಯಲ್ಲಿ ಇಡೀ ರಾಜ್ಯದಲ್ಲಿ ಕಡೂರು ತಾಲೂಕಿನ ಯುವಕ ಪ್ರತಾಪ್ ಖಾತೆಗೆ 3 ಸಾವಿರ ಬರುವ ಮೂಲಕ ಯೋಜನೆ ಜಾರಿಗೊಳಿಸಲಾಯಿತು ಎಂದರು.
ನಮ್ಮ ಕ್ಷೇತ್ರದ ಸಖರಾಯಪಟ್ಟಣ ಹೋಬಳಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 3 ಸಾವಿರ ರೇಶನ್ ಕಾರ್ಡುದಾರರಿದ್ದಾರೆ.ಗೃಹಲಕ್ಷ್ಮಿ ಯೋಜನೆ 11,7023 ಫಲಾನುಭವಿಗಳಿಗೆ 11, 23,33,100 ರೂ ಕ್ಷೇತ್ರದ ಜನರಿಗೆ ತಲುಪುತ್ತಿದೆ. 67 ಸಾವಿರ ಜನರಲ್ಲಿ 64 ಸಾವಿರ ಜನ ಫಲಾನುಭವಿಗಳಾಗಿದ್ದು, ಉಳಿದ 3 ಸಾವಿರ ಜನರಿಗೂ ದಾಖಲೆ ಸರಿಪಡಿಸಿ ಅರ್ಹ ಫಲಾನುಭವಿ ಗಳಾಗಿ ಮಾಡಿಸಲಾಗುವುದು. ಇದುವರೆಗೆ ಶಕ್ತಿ ಯೋಜನೆಯಲ್ಲಿ ಹೆಣ್ಣು ಮಕ್ಕಳು 40 ಕೋಟಿ ರು. ವೆಚ್ಚವಾಗುವಂತೆ ಬಸ್ಸು ಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದರು.ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ಜನಸಂಪರ್ಕ ಸಭೆ ಕಾಟಾಚಾರದ ಸಭೆ ಆಗಬಾರದು. ನೇರವಾಗಿ ಫಲಾನುಭ ವಿಗೆ ಸರ್ಕಾರದ ಸವಲತ್ತು ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಪ್ರವೀಣ್, ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ರಾಜಮ್ಮ , ಸಖರಾಯಪಟ್ಟಣ ಹೋಬಳಿ 11 ಗ್ರಾಪಂಗಳ ಅಧ್ಯಕ್ಷರಾದ ರಮೇಶ್, ಮಧು,ರತ್ನಮ್ಮ, ಲಕ್ಷ್ಮಿ ದೇವಿ, ಚಂದ್ರಮ್ಮ, ಶಿವಮೂರ್ತಿ, ಗೀತಾಂಜಲಿ, ಸುಮಿತ್ರ , ಶಶಿಧರ್, ಪಿಡಿಒ ಲತಾ, ಜಿಲ್ಲಾ ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರು ಮತ್ತಿತರರು ಇದ್ದರು.