ಸಾಮರ್ಥ್ಯವಿಲ್ಲದ ಬಯಕೆಗಳಿಂದ ಸಮಸ್ಯೆ ಜಾಸ್ತಿ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork | Published : Apr 23, 2025 12:31 AM

ಸಾರಾಂಶ

ಸಾಧಿಸಲು ಸಾಧ್ಯವಾಗದ ನಿರೀಕ್ಷೆ, ಅಪೇಕ್ಷೆಗಳನ್ನು ಹೊಂದಿರುವುದರಿಂದ ಹಲವಾರು ಯುವಕರು ಅವಕಾಶ ವಂಚಿತರಾಗುತ್ತಿದ್ದಾರೆ

ಶಿರಸಿ: ಸಾಧಿಸಲು ಸಾಧ್ಯವಾಗದ ನಿರೀಕ್ಷೆ, ಅಪೇಕ್ಷೆಗಳನ್ನು ಹೊಂದಿರುವುದರಿಂದ ಹಲವಾರು ಯುವಕರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಳವಳ ವ್ಯಕ್ತಪಡಿಸಿದರು.

ಇಂದು ಸ್ಕೊಡ್‌ವೆಸ್ ಸಂಸ್ಥೆಯ ‘20ನೇ ಶಕ್ತಿ ದಿವಸ್ ಹಾಗೂ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಉದ್ಘಾಟಿಸಿ, ಸ್ಕೊಡ್‌ವೆಸ್ ಸಮಾಚಾರ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸಿದರೂ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ಉದ್ದೇಶಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸ್ಕೊಡ್‌ವೆಸ್‌ನಂತಹ ಸಂಸ್ಥೆಗಳು ಕೈ ಜೋಡಿಸುವ ಅವಶ್ಯಕತೆಯಿದೆ. ಹಲವಾರು ವರ್ಷಗಳಿಂದ ಸ್ಕೊಡ್‌ವೆಸ್ ಸಂಸ್ಥೆ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಸಲ್ಲಿಸುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಸ್ಕೊಡ್‌ವೆಸ್ ಸಂಸ್ಥೆಯ ಅಧ್ಯಕ್ಷರೂ ಆದ ಪ್ರೊ. ಹಿ.ಚಿ. ಬೋರಲಿಂಗಯ್ಯರವರು ಸಮಸ್ಯೆಗಳ ಆಳವನ್ನು ಅರ್ಥೈಸಿಕೊಂಡು ಪರಿಹಾರ ಕ್ರಮಗಳನ್ನು ಒದಗಿಸುವ ಕಾರ್ಯ ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿಯಾಗಬೇಕು ಎಂದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಿ ಮಾತನಾಡಿದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡರವರು ಶಕ್ತಿ ದಿವಸ್ ನಂತಹ ಕಾರ್ಯಕ್ರಮಗಳು ಸಮಾಜದ ಕಣ್ತೆರೆಸುವಲ್ಲಿ ಸಫಲವಾಗುತ್ತವೆ ಎಂದವು.

ಇದೇ ಸಂದರ್ಭದಲ್ಲಿ ಪ್ರತೀ ವರ್ಷ ನೀಡಲಾಗುವ ಸ್ಕೊಡ್‌ವೆಸ್ ಕರ್ನಾಟಕ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ಎಸ್.ಎಸ್. ಭಟ್ ಲೋಕೇಶ್ವರರವರಿಗೆ, ಡಾ.ಶರಣ್ ಬಿರಾದಾರ್ ಮೆಮೋರಿಯಲ್ ಪ್ರಶಸ್ತಿಯನ್ನು ‘ಹತ್ತು ರೂಪಾಯಿ ಡಾಕ್ಟರ್’ ಎಂದೇ ಪ್ರಸಿದ್ಧರಾದ ಡಾ. ಎನ್.ಎಮ್. ಶ್ಯಾಮಸುಂದರರವರಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಗೌರವಿಸಲಾಯಿತು.

ವೇದಿಕೆಯಲ್ಲಿ ಶಿರಸಿ ನಗರಸಭಾ ಅಧ್ಯಕ್ಷರಾದ ಶರ್ಮಿಳಾ ಮಾದನಗೇರಿ ಸಂದರ್ಭೋಚಿತವಾಗಿ ಮಾತನಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಕುಮಾರ ವಿ. ಕೂರ್ಸೆ, ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಸಹ-ಕಾರ್ಯದರ್ಶಿ ವಸಂತ ಹಾದಿಮನೆ, ಖಜಾಂಚಿ ಎಚ್.ಜಿ. ಲತಾ, ಕಾರ್ಯಕಾರಿ ಸದಸ್ಯ ಪ್ರೊ. ಕೆ.ಎನ್. ಹೊಸಮನಿ, ದಯಾನಂದ ಅಗಾಸೆ, ಸಲಹಾ ಮಂಡಳಿ ಸದಸ್ಯರಾದ ಶ್ರೀನಿವಾಸ ಮೂರ್ತಿ, ಸದಸ್ಯರಾದ ಪ್ರತಿಭಾ ಭಟ್ ಉಪಸ್ಥಿತರಿದ್ದರು.

ಆರಂಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Share this article