ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಮತ್ತು ದಲಿತರ ಸ್ವಾವಲಂಬಿ ಬದುಕು ಎಂಬ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕಕ್ಕೆ ಅಂಬೇಡ್ಕರ್ ಮತ್ತು ದಲಿತ ಚಳುವಳಿಯನ್ನು ಪರಿಚಯಿಸಿದ ಪ್ರೊ.ಬಿ.ಕೃಷ್ಣಪ್ಪ ಚಿತ್ರದುರ್ಗ ಜಿಲ್ಲೆಯವರು ಎಂಬುದೇ ಹೆಮ್ಮೆಯ ವಿಷಯ. ಪ್ರಸ್ತುತ ಪದವಿ ಗಳಿಸಿದ ವಿದ್ಯಾವಂತರಿಗಿಂತ ವೈಚಾರಿಕ ಅಧ್ಯಯನ ಮಾಡಿದವರಿಂದ ದಲಿತರ ಒಗ್ಗಟ್ಟಿನ ಕಾರ್ಯ ನಡೆಯಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಇಂದು ಸಾಮಾಜಿಕ ಚಳುವಳಿಗಿಂತ ಆರ್ಥಿಕ ಮತ್ತು ಶೈಕ್ಷಣಿಕ ಚಳವಳಿಗಳ ಅಗತ್ಯವಿದೆ. ಇಂದಿನ ತಲೆಮಾರಿನ ಯುವಕರು ಅಂಬೇಡ್ಕರ್ ಅವರ ಅಧ್ಯಯನದಿಂದ ದೂರ ಉಳಿಯುತ್ತಿದ್ದಾರೆ. ಭಾವನಾತ್ಮಕ ವಿಚಾರಗಳಿಗೆ ಆಕರ್ಷಿತ ರಾಗುತ್ತಿದ್ದಾರೆ. ನಾಡನ್ನು ಆಳುವ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡುವ ಬದ್ಧತೆ ಹೊಂದಿಲ್ಲ ಎಂದರು. ಬಹುತೇಕ ವಿದ್ಯಾವಂತ ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳುವ ಬದಲು, ಸಂಘ ಸಂಸ್ಥೆಗಳನ್ನು ಕಟ್ಟುತ್ತಿದ್ದಾರೆ. ಸಂಘ ಸಂಸ್ಥೆಗಳು ಏಕೆ ಬೇಕೆಂಬ ಪೂರ್ವಪರ ಯೋಚನೆಯಿಲ್ಲದೇ ಸಂಘಟನೆಗಳಲ್ಲಿ ತೊಡಗುತ್ತಿದ್ದಾರೆ. ತಾವು ಕಟ್ಟಿದ ಸಂಘಟನೆಗಳ ಶ್ರೇಷ್ಠತೆ ಕಾಪಾಡುವ ಭರದಲ್ಲಿ ಯುವಕರು ತಮ್ಮ ವಯಸ್ಸನ್ನೇ ಕಳೆದುಕೊಳ್ಳುವುದಲ್ಲದೆ ಪೋಷಕರು ಮತ್ತು ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ. ಈ ಸಂಘ ಸಂಸ್ಥೆಗಳ ಮುಖೇನ ತಮ್ಮ ಆರ್ಥಿಕ ಅಭಿವೃದ್ಧಿ ಸಾಧ್ಯವೆಂಬ ಭ್ರಮೆಯಲ್ಲಿದ್ದಾರೆ.
ದುಡಿಮೆಯಲ್ಲಿ ದೊಡ್ಡ ಕೆಲಸ, ಸಣ್ಣ ಕೆಲಸ ಎಂಬುದಿಲ್ಲ. ಆರ್ಥಿಕ ಭದ್ರತೆ ಮುಖ್ಯ. ಆದ್ದರಿಂದ ಯುವಕರಿಗೆ ಆರಂಭದಲ್ಲಿಯೇ ಆರ್ಥಿಕ ಸ್ವಾವಲಂಬನೆ ಹೊಂದಲೇ ಬೇಕಾದ ಅವಶ್ಯಕತೆಯ ಬಗ್ಗೆ ಹಿರಿಯರು ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಈ.ನಾಗೇಂದ್ರಪ್ಪ, ಬಿಎಸ್ಐ ಜಿಲ್ಲಾ ಕಾರ್ಯದರ್ಶಿ ಶಕುಂತಲಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಚಿನ್ ಗೌತಮ್, ತಿಪಟೂರು ಮಂಜು, ಬನ್ನಿಕೋಡ್ ರಮೇಶ್, ಶಿಕ್ಷಕಿ ಗಿರಿಜಾ, ಶಾಂತಮ್ಮ, ಉಷಾನಾಗೇಂದ್ರಪ್ಪ ಇತರರಿದ್ದರು.