ಪ್ರಕಾಶಕರು ಸರ್ಕಾರದ ಮೊರೆ ಹೋಗಿದ್ದಾರೆ, ಸಾಂಬ್ರಾಣಿ ಮಾರುವವರಲ್ಲ

KannadaprabhaNewsNetwork |  
Published : Jan 23, 2026, 01:15 AM IST
27 | Kannada Prabha

ಸಾರಾಂಶ

ಈ ನಾಡಿನಲ್ಲಿ ಕರ್ಪೂರ, ಗಂಧದಕಡ್ಡಿ, ಕುಂಕುಮ, ಅರಿಶಿನ, ಸಾಂಬ್ರಾಣಿ ಮಾರುವವನು ಎಂದೂ ತನಗೆ ನಷ್ಟವಾಯಿತೆಂದು ಸರ್ಕಾರದ ಮೊರೆ ಹೋಗಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ನಾಡಿನಲ್ಲಿ ಕರ್ಪೂರ, ಗಂಧದಕಡ್ಡಿ, ಕುಂಕುಮ, ಅರಿಶಿನ, ಸಾಂಬ್ರಾಣಿ ಮಾರುವವನು ಎಂದೂ ತನಗೆ ನಷ್ಟವಾಯಿತೆಂದು ಸರ್ಕಾರದ ಮೊರೆ ಹೋಗಿಲ್ಲ. ಆದರೆ ಪುಸ್ತಕ ಪ್ರಕಾಶಕರು ಸರ್ಕಾರದ ಮೊರೆ ಹೋಗಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಕುವೆಂಪುನಗರದ ಪ್ರೊ.ಎಂ. ನಟರಾಜ್ ಅವರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜರುಗಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ನಾಡಿನಲ್ಲಿ ಕರ್ಪೂರ, ಗಂಧದಕಡ್ಡಿ, ಕುಂಕುಮ, ಅರಿಶಿನ, ಸಾಂಬ್ರಾಣಿ ಮಾರುವವನು ಎಂದೂ ತನಗೆ ನಷ್ಟವಾಯಿತೆಂದು ಸರ್ಕಾರದ ಮೊರೆ ಹೋಗಿಲ್ಲ. ಕಾರಣವಿಷ್ಟೇ, ಜನ ಅದಕ್ಕಾಗಿ ಮುಗಿ ಬೀಳುತ್ತಾರೆ. ಆದರೆ ಪುಸ್ತಕ ಪ್ರಕಾಶಕರು ಬೀದಿಗೆ ಬಿದ್ದಿದ್ದಾರೆ. ಕೊಂಡು ಓದುವವರಿಲ್ಲ. ಸರ್ಕಾರದ ಮೊರೆ ಹೋಗಿದ್ದಾರೆ. ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಿ ಎಂದು ಭಕ್ತಿ ಮತ್ತು ಪೂಜೆಗಿಂತ ಓದುವುದು ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಸಂಸ್ಕೃತಿ ಎಂಬ ವಿಷಯ ಕುರಿತು ಮಾತನಾಡಿದ ಡಾ.ಎಚ್.ವಿ. ನಾಗರಾಜರಾವ್ ಸಂವಹನಕ್ಕಾಗಿ ಮೂಡಿದ ಭಾಷೆಯ ಮುಂದುವರಿದ ಭಾಗವೇ ಲಿಪಿ. ತಾಳೆ ಗರಿಯಿಂದ ಇಂದು ಪುಸ್ತಕದವರೆಗೆ ನಡೆದು ಬಂದ ಲಿಪಿ ಡಿಜಿಟಲೈಸ್ ಕೂಡಾ ಆಗಿದೆ. ಎಂದರು.

ಅಧ್ಯಕ್ಷತೆವಹಿಸಿದ್ದ ಎಂ. ಚಂದ್ರಶೇಖರ್ ಮಾತನಾಡಿ, ಮನೆಗೊಂದು ಗ್ರಂಥಾಲಯ ಬದಲು ಮನೆಯೊಂದು ಗ್ರಂಥಾಲಯ ಆಗಬೇಕು. ಬಸ್ ನಿಲ್ದಾಣದಲ್ಲಿ, ಕಟಿಂಗ್ ಷಾಪ್ ನಲ್ಲಿ ಬಂದವರು ಓದಲೆಂದು ಪುಸ್ತಕ ಇಟ್ಟುಕೊಂಡವರು ಆದರ್ಶವಾಗಬೇಕು. ಇಂದಿನ ಆಧುನಿಕತೆಯ ಚಮತ್ಕಾರವೆಂಬಂತೆ ಗೂಗಲ್ ನಲ್ಲಿ ಏನೆಲ್ಲವೂ ಸಿಗಬಹುದು. ಆದರೆ ಪುಸ್ತಕದಷ್ಟು ಒಳ್ಳೆಯ ಸ್ನೇಹಿತ ಅದಾಗಲಾರದು, ಪುಸ್ತಕ ಗುರುವಾಗಬಲ್ಲುದು. ಆದರೆ ಗೂಗಲ್ ಗುರುವಾಗಲಾರದು ಎಂದರು.

ಪ್ರೊ.ಎಂ. ನಟರಾಜ್ ಮಾತನಾಡಿ, ತಮ್ಮ ಮನೆಯ ಗ್ರಂಥಾಲಯದಲ್ಲಿ ಆರಂಭವಾದಗಿನಿಂದ ಕೊನೆಯವರೆಗೂ ಕಸ್ತೂರಿ ಮ್ಯಾಗಜೀನ್ ನ ಸಂಗ್ರಹ ತಮ್ಮ ಮನೆಯಲ್ಲಿ ಇದೆ. ಈ ಪುಸ್ತಕ ಸಂಸ್ಕಾರ ನಮಗೆ ನಮ್ಮ ತಾಯಿಯಿಂದ ಬಂತು ಎನ್ನುತ್ತಾ ಅನೇಕ ಪ್ರಮುಖ ಹಾಗೂ ಅಪರೂಪದ ಕೃತಿಗಳ ಮೊದಲ ಮುದ್ರಣ ಕಂಡ ಪ್ರತಿಗಳನ್ನು ಲೇಖಕರ ಸಹಿಯೊಡನೆ ಸಂಗ್ರಹಿಸಿರುವುದಾಗಿ ಪ್ರದರ್ಶಿಸಿದರು.

ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ಬೆಟ್ಟದ ಹೂ ಎಂಬ ಪುನೀತ್ ರಾಜ್‌ ಕುಮಾರ್ ಅಭಿನಯದ ಕನ್ನಡದ ಚಲನಚಿತ್ರದಲ್ಲಿ ಒಂದು ವಾಲ್ಮೀಕಿ ರಾಮಾಯಣ ಎಂಬ ಪುಸ್ತಕವನ್ನು ಕೊಂಡುಕೊಳ್ಳಲು ಬಾಲಕನೊಬ್ಬ ಬದುಕಿನಲ್ಲಿ ನಡೆಸುವ ಹೋರಾಟದ ಕಥೆ ರಾಷ್ಟ್ರ ಪ್ರಶಸ್ತಿ ಗಳಿಸಿತು. ಹೋಟೆಲ್ ನಲ್ಲಿ ಐವತ್ತು, ನೂರು ರೂ.ಗಳನ್ನು ಟಿಪ್ಸ್ ಕೊಡುವ ಜನರಿಗೆ ಪುಸ್ತಕ ಕೊಂಡು ಮನೆಯಲ್ಲಿ ಇಡಲು ಮಾತ್ರ ಬಡತನ ಬಂದುಬಿಡುತ್ತದೆ. ಒಂದು ಮನೆಯಲ್ಲಿ ಕನಿಷ್ಠ ಕೈ ಮುಗಿಯಲಿಕ್ಕಾದರೂ ಒಂದಷ್ಟು ಪುಸ್ತಕಗಳಿರಬೇಕು ಎಂದರು.

ಡಾ.ಸಿ.ಡಿ. ಪರಶುರಾಮ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ
ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ