ಕವಿವಿ ಪ್ರಾಧ್ಯಾಪಕ ಡಾ. ಸುಭಾಷಚಂದ್ರ ನಾಟೀಕರ ಮನೆ ಮೇಲೆ ಲೋಕಾ ದಾಳಿ

KannadaprabhaNewsNetwork |  
Published : Nov 26, 2025, 02:15 AM IST
25ಡಿಡಬ್ಲೂಡಿ1,2ಕವಿವಿ ಪ್ರಾಧ್ಯಾಪಕ ಪ್ರೊ.ಸುಭಾಷಚಂದ್ರ ನಾಟೀಕರ ಅವರ ಯಾಲಕ್ಕಿ ಶೆಟ್ಟರ್‌ ಮನೆ ಹಾಗೂ ಕಾರು ಪರಿಶೀಲಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ತಂಡ  | Kannada Prabha

ಸಾರಾಂಶ

ಸಹೋದರನ ಪುತ್ರ ಮದುವೆ ಕಾರ್ಯಕ್ಕೆ ಹೊರಟಿದ್ದ ಪ್ರೊ. ನಾಟೀಕರ ಅವರಿಗೆ ಬೆಳ್ಳಂಬೆಳಗ್ಗೆ ಶಾಕ್‌ ರೀತಿಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದ ತಂಡವು ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.

ಧಾರವಾಡ:

ಇನ್ನೇನು ಸಹೋದರನ ಪುತ್ರನ ಮದುವೆಗೆ ಹೋಗಲು ಸಂಬಂಧಿಕರೊಂದಿಗೆ ಸಿದ್ಧತೆ ನಡೆಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸುಭಾಸಚಂದ್ರ ನಾಟೀಕರ ಅವರ ಯಾಲಕ್ಕಿ ಶೆಟ್ಟರ್‌ ಕಾಲನಿ ಮನೆ ಸೇರಿದಂತೆ ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಚ್ಚರಿ ಮೂಡಿಸಿದ್ದಾರೆ.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಹೋದರನ ಪುತ್ರ ಮದುವೆ ಕಾರ್ಯಕ್ಕೆ ಹೊರಟಿದ್ದ ಪ್ರೊ. ನಾಟೀಕರ ಅವರಿಗೆ ಬೆಳ್ಳಂಬೆಳಗ್ಗೆ ಶಾಕ್‌ ರೀತಿಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದ ತಂಡವು ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.

ಮದುವೆ ಹಿನ್ನೆಲೆಯಲ್ಲಿ ಅತಿಥಿಗಳು ಮನೆಗೆ ಬಂದಿದ್ದು, ಅವರನ್ನು ಸಹ ಪರಿಶೀಲನೆ ನಡೆಸಿ ಹೊರಗೆ ಕಳುಹಿಸಲಾಯಿತು. ಸಂಜೆ ವರೆಗೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಐದು ಕಡೆ ಪರಿಶೀಲನೆ:

ಬರೀ ಯಾಲಕ್ಕಿ ಶೆಟ್ಟರ್‌ ಕಾಲನಿ ಮಾತ್ರವಲ್ಲದೇ ಕರ್ನಾಟಕ ವಿವಿ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಮಾಜಶಾಸ್ತ್ರ ವಿಭಾಗದ ಕಚೇರಿ, ಕೊಪ್ಪಳ ಜಿಲ್ಲೆಯ ಬೆಟಗೇರಿಯ ಮನೆ ಹಾಗೂ ವಿಜಯಪುರ ಜಿಲ್ಲೆಯ ತಾಳಿಕೋಟೆಯ ಸ್ವಂತ ಮನೆಯನ್ನು ಸಹ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗಿದೆ.

ಜಮೀನು, ಸೈಟು ದಾಖಲೆ ಪತ್ತೆ..ಪ್ರಾಧ್ಯಾಪಕ ಪ್ರೊ.ಸುಭಾಸಚಂದ್ರ ನಾಟೀಕರ ಅವರ ಮನೆಯಲ್ಲಿ ಜಮೀನು, ಚಿನ್ನ ಹಾಗೂ ಸೈಟುಗಳಿರುವ ಮಾಹಿತಿ ತಿಳಿದು ಬಂದಿದೆ. ಕೊಪ್ಪಳ ಜಿಲ್ಲೆಯ ಬೆಟಗೇರಿಯಲ್ಲಿ 18 ಎಕರೆ ಜಮೀನು, ಧಾರವಾಡ ಜಿಲ್ಲೆಯ ವಿವಿಧೆಡೆ ಐದು ನಿವೇಶನಗಳ ದಾಖಲೆ ದೊರೆತಿದೆ. ಮನೆಯಲ್ಲಿ ಪರಿಶೀಲನೆ ವೇಳೆ ₹ 1 ಲಕ್ಷ ನಗದು ದೊರೆತಿದೆ. ಜತೆಗೆ 30 ಗ್ರಾಂ ಚಿನ್ನದ ಒಡೆವುಗಳು ಸಿಕ್ಕಿದ್ದು, ಒಂದು ಇನ್ನೋವಾ, ಹೊಂಡಾಸಿಟಿ ಕಾರುಗಳಿರುವುದು ಸಹ ಗೊತ್ತಾಗಿದೆ. ಇನ್ನು, ವಿವಿಧೆಡೆ ಅಕೌಂಟ್‌ ಹೊಂದಿರುವ ಬ್ಯಾಂಕ್‌ನ ಲಾಕರ್ ಇನ್ನೂ ತೆರೆದಿಲ್ಲ ಎಂಬ ಮಾಹಿತಿ ಇದೆ.

ಕುಲಸಚಿವ ಸ್ಥಾನಕ್ಕೆ ನೇಮಕ

ಪ್ರೊ. ಸುಭಾಷಚಂದ್ರ ನಾಟೀಕರ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಡಾ. ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಕೇಂದ್ರದ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿನ ಕಟ್ಟಡ ಅರೆಬರೆಯಾದ ಹಗರಣವೂ ಇವರ ವಿರುದ್ಧ ಕೇಳಿ ಬಂದಿತ್ತು. ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ಕವಿವಿ ಮೌಲ್ಯಮಾಪನ ಕುಲಸಚಿವ ಹುದ್ದೆಗೆ ಇವರ ಹೆಸರು ಅಂತಿಮಗೊಂಡಿದ್ದು, ಇನ್ನೇನು ಅಧಿಕಾರ ಸ್ವೀಕರಿಸಬೇಕಿತ್ತಷ್ಟೇ. ಅಷ್ಟರಲ್ಲಿ ಲೋಕಾ ದಾಳಿ ನಡೆದಿದೆ.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ