ಮೂಡುಬಿದಿರೆ: ಬನ್ನಡ್ಕ ಅಪಘಾತ ವಲಯಕ್ಕೆ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಉಮಾನಾಥ್ ಕೋಟ್ಯಾನ್ ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಾರ್ವಜನಿಕರ ಬೇಡಿಕೆಯಂತೆ ಸರ್ವಿಸ್ ರಸ್ತೆ ಹಾಗೂ ಕ್ರಾಸ್ಸಿಂಗ್ ಲೈನ್ ಅಳವಡಿಸುವ ಭರವಸೆ ನೀಡಿದ ಅವರು, ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸ್ಥಳೀಯರು ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಬನ್ನಡ್ಕ ಭಾಗದ 600 ಮೀಟರ್ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬ್ರಿಜೇಶ್ ಚೌಟ, 600 ಮೀಟರ್ ಗ್ಯಾಪ್ನಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಎಲ್ಲರ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಚಿವರು ಹಾಗೂ ಬೆಂಗಳೂರಿನ ಪ್ರಾದೇಶಿಕ ಕಚೇರಿ ಅಧಿಕಾರಿಯೊಂದಿಗೆ ಮಾತನಾಡಿದ್ದು, ಅವರು ಸಮ್ಮತಿ ನೀಡಿದ್ದಾರೆ. ಸದ್ಯ ಇದರ ಅಂದಾಜು ಪಟ್ಟಿ ಸಿದ್ಧಪಡಿಸುವ ಕೆಲಸ ಪ್ರಾರಂಭವಾಗಲಿದ್ದು, ಪ್ರೊಸೀಜರಲ್ ಅನುಮೋದನೆ ಸಿಕ್ಕ ತಕ್ಷಣ ಸರ್ವಿಸ್ ರಸ್ತೆ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.
ಹಿಂದೆ ಇದ್ದ ಹೆದ್ದಾರಿ ಚಿಕ್ಕದಾಗಿತ್ತು. ಈಗ ಅದು ನಾಲ್ಕು ಪಥಗಳ ದೊಡ್ಡ ಹೆದ್ದಾರಿಯಾಗಿ ಬದಲಾಗುತ್ತಿದೆ. ಆದ್ದರಿಂದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ರಸ್ತೆಗಳಲ್ಲಿ ಸಂಚರಿಸಬೇಕು. ಅಪಘಾತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಡೆಗಳಲ್ಲಿ ಸೈನ್ ಬೋರ್ಡ್ಗಳನ್ನು ಅಳವಡಿಸುವಂತೆ ಹೆದ್ದಾರಿ ಇಲಾಖೆ ಮತ್ತು ಕಾಂಟ್ರಾಕ್ಟರ್ಗಳಿಗೆ ಸೂಚಿಸಲಾಗಿದೆ. ಸರ್ವಿಸ್ ರಸ್ತೆ ಕೆಲಸವನ್ನು ಆದಷ್ಟು ಶೀಘ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.