ಆಸ್ತಿ ಕಲಹ: ಗಾಳಿಯಲ್ಲಿ ಗುಂಡು ಹಾರಿಸಿದ ನಿವೃತ್ತ ಅರಣ್ಯಾಧಿಕಾರಿ

KannadaprabhaNewsNetwork | Published : Jun 6, 2025 12:14 AM
ಪಟ್ಟಣದ ಜಮೀನೊಂದರ ವಿಷಯವಾಗಿ ಸಂಬಂಧಿಕರ ನಡುವೆ ಗುರುವಾರ ಜಗಳ ಆಗಿದ್ದು, ಈ ವೇಳೆ ನಿವೃತ್ತ ಅರಣ್ಯಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಕುಕನೂರು:

ಪಟ್ಟಣದ ಜಮೀನೊಂದರ ವಿಷಯವಾಗಿ ಸಂಬಂಧಿಕರ ನಡುವೆ ಗುರುವಾರ ಜಗಳ ಆಗಿದ್ದು, ಈ ವೇಳೆ ನಿವೃತ್ತ ಅರಣ್ಯಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಪಟ್ಟಣದ ಸೀಮಾದಲ್ಲಿರುವ 12 ಎಕರೆ 29 ಗುಂಟೆ ಜಮೀನನ್ನು 2008ರಲ್ಲಿ ಪಟ್ಟಣದ ನಿವೃತ್ತ ಅರಣ್ಯಾಧಿಕಾರಿ ಅಂದಾನಪ್ಪ ಕುರಿ ತಮ್ಮ ತಾಯಿಯ ಅಣ್ಣ ಬಸಪ್ಪ ಮಳಗಿ ಅವರಿಂದ ಖರೀದಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಮಾರಾಟಗಾರ ಬಸಪ್ಪ ಮಳಗಿ ಅವರ ಸಂಬಂಧಿಕರು ಆ ಜಮೀನು ತಮ್ಮದೆಂದು ಸಾಗುವಳಿ ಮಾಡಿದ್ದಾರೆ. ಆಗ ವಿಚಾರಣೆಗೆ ಹೋದ ಅಂದಾನಪ್ಪ ಕುರಿ ಹಾಗೂ ಆತನ ಮಕ್ಕಳಾದ ಮಂಜುನಾಥ, ಕಾಶಿನಾಥ ಮೇಲೆ ಸಂಬಂಧಿಕರಾದ ಸಂತೋಷಕುಮಾರ ಗುದ್ನೇಪ್ಪ ಮಳಗಿ, ಭರತಪ್ಪ ಗುದ್ನೇಪ್ಪ ಮಳಗಿ, ನಿಂಗಪ್ಪ ಶಿವಪ್ಪ ಮಳಗಿ, ಮಲ್ಲಪ್ಪ ಶಿವಪ್ಪ ಮಳಗಿ, ಶರಣಪ್ಪ ರಾಮಣ್ಣ ಮಳಗಿ, ಬಸಪ್ಪ ಫಕೀರಪ್ಪ ಮಳಗಿ, ಸಿದ್ಲಿಂಗಪ್ಪ ಫಕೀರಪ್ಪ ಮಳಗಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗೆಂದು ಪರವಾನಗಿ ಪಡೆದಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ಅಂದಾನಪ್ಪ ದೂರು ನೀಡಿದ್ದಾರೆ. ತಮ್ಮ ಜಮೀನಿನಲ್ಲಿ ಸಾಗುವಳಿ ಮಾಡಲು ಬಿಡದೆ ದೌರ್ಜನ್ಯ ಎಸಗಿ ಕೊಲೆ ಮಾಡಲು ಯತ್ನಿಸಿದ ಏಳು ಜನರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕುಕನೂರು ಪೊಲೀಸ್ ಠಾಣೆಯಲ್ಲಿ ಅಂದಾನಪ್ಪ ಕುರಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರತಿದೂರು:

ಬಿತ್ತನೆ ಮಾಡುವಾಗ ಅಂದಾನಪ್ಪ ಕುರಿ, ಮಂಜುನಾಥ, ಕಾಶಿನಾಥ ಹಾಗೂ ರವಿಕುಮಾರ ಮಳಗಿ ಏಕಾಏಕಿ ಬಂದು ಬಿತ್ತನೆ ಕಾರ್ಯಕ್ಕೆ ಅಡ್ಡಿಪಡಿಸಿ ನನ್ನ ಹಾಗೂ ನನ್ನ ಸಹೋದರನ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪಟ್ಟಣದ ಭರತಕುಮಾರ ಗುದ್ನೇಪ್ಪ ಮಳಗಿ ದೂರು ದಾಖಲಿಸಿದ್ದಾರೆ. ನನ್ನ ಹಾಗೂ ಸಹೋದರರ ಮೇಲೆ ದೈಹಿಕವಾಗಿ ದೌರ್ಜನ್ಯ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿ ಗುಂಡು ಹಾರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.