ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಕಸಬಾ ಹೋಬಳಿಯ ಅಡಗೂರು ಗ್ರಾಮದಲ್ಲಿ ಸುಮಾರು ೩೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ನೂತನ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಸಮುದಾಯ ಭವನಕ್ಕೆ ಮುಂಬರುವ ಆರ್ಥಿಕ ವರ್ಷದಲ್ಲಿ ಸಮುದಾಯ ಭವನದ ಸುತ್ತಲೂ ಶೆಲ್ಟರ್ ನಿರ್ಮಾಣಕ್ಕೆ ಸುಮಾರು ೧೦ ಲಕ್ಷ ರು. ಅನುದಾನ ಒದಗಿಸುವುದಾಗಿ ತಿಳಿಸಿದರು.
ಡಿ.ಕಾಳೇನಹಳ್ಳಿ ಗ್ರಾಮದ ಮಂಚಿ ಕಟ್ಟೆಯಿಂದ ಅಡಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೫೦೦ ಮೀಟರ್ನಷ್ಟು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗುವುದು, ಇದರೊಂದಿಗೆ ಗ್ರಾಮದ ಕೇಂದ್ರ ಭಾಗದಿಂದ ಶನೇಶ್ವರ ಸ್ವಾಮಿ ದೇವಾಲಯದವರೆಗೆ ಸುಮಾರು ೨೦೦ ಮೀಟರ್ನಷ್ಟು ಉದ್ದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶೀಘ್ರದಲ್ಲೇ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.ನನ್ನ ೩೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಅಡಗೂರು ಗ್ರಾಮ ರಾಜಕೀಯವಾಗಿ ಹೆಚ್ಚು ಶಕ್ತಿ ತುಂಬಿದ್ದು, ನನ್ನ ಅನೇಕ ಚುನಾವಣೆಗಳಲ್ಲಿ ನನಗೆ ಹೆಚ್ಚು ಮತ ನೀಡುವ ಮೂಲಕ ಕೈ ಬಲಪಡಿಸಿದೆ. ಗ್ರಾಮದ ಜನರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದು, ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹಂತ ಹಂತವಾಗಿ ಅನುದಾನ ನೀಡುವುದಾಗಿ ತಿಳಿಸಿದ ಅವರು, ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡದ ಸರ್ಕಾರದಲ್ಲಿ ಶ್ರಮ ಮೀರಿ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೋಲಾಕ್ಷಿ ಕುಮಾರ್, ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಪ್ರತಾಪ್, ಎ.ಚೋಳೇನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷೆ ಲಲಿತಾ ನಾರಾಯಣ್, ನಿರ್ದೇಶಕ ಮಧು, ಧರ್ಮೇಗೌಡ, ಹಾಲು ಉತ್ಪಾದಕರ ಸಹಕಾರದ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಧರ್ಮರಾಜ್, ಗ್ರಾಮದ ಮುಖಂಡರಾದ ಎ.ಎಚ್.ನಾಗರಾಜ್, ಎಚ್ಎಸ್ಎಸ್ಕೆ ನಾರಾಯಣ್, ಎ.ಟಿ.ಚಂದ್ರಶೇಖರ, ಎ.ಪಿ.ಚಂದ್ರೇಗೌಡ, ಕಿಟ್ಟಿ, ರಂಗಸ್ವಾಮಿ, ಕೆಂಪೆಗೌಡ, ಹರೀಶ್, ಆನಂದ ಸೇರಿ ಡೈರಿ ಹಾಲಿ ನಿರ್ದೇಶಕರು, ಮಾಜಿ ನಿರ್ದೇಶಕರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿ ಇತರರು ಇದ್ದರು.