ಕ್ಯಾನ್ಸರ್ ಆಸ್ಪತ್ರೆಗೆ ವೈದ್ಯರು-ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ

KannadaprabhaNewsNetwork |  
Published : Feb 07, 2026, 01:45 AM IST
೬ಕೆಎಂಎನ್‌ಡಿ-೧ಮಿಮ್ಸ್ ಕ್ಯಾನ್ಸರ್ ಕೇಂದ್ರದ ಬಂಕರ್ ಒಳಗೆ ಸಂಪರ್ಕಕ್ಕೆ ಸಿದ್ಧಪಡಿಸಿರುವ ರೇಡಿಯೇಷನ್ ಯಂತ್ರದ ದೃಶ್ಯ. | Kannada Prabha

ಸಾರಾಂಶ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ₹೧೬ ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಅಳವಡಿಕೆ ಕಾಮಗಾರಿಗಳು ಚುರುಕಿನಿಂದ ಸಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ ನೀಡುವ ಸಲುವಾಗಿ ವೈದ್ಯರು ಮತ್ತು ಸಿಬ್ಬಂದಿ ನೇಮಕ ಸಂಬಂಧ ಮಂಡ್ಯ ವೈದ್ಯಕೀಯ ವಿಜ್ಞಾನ ಮತ್ತು ಬೋಧಕ ಆಸ್ಪತ್ರೆ ನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆ ಹಣಕಾಸು ಇಲಾಖೆ ಎದುರು ಅಂಕಿತಕ್ಕೆ ಬಾಕಿ ಇದೆ.

ಕ್ಯಾನ್ಸರ್ ಆಸ್ಪತ್ರೆಗೆ ಅಗತ್ಯವಿದ್ದ ೨೧೯ ಹುದ್ದೆಗಳ ಪ್ರಸ್ತಾವನೆಯನ್ನು ಪುನರ್‌ಪರಿಶೀಲನೆಗೆ ವಾಪಸ್ ಕಳುಹಿಸಿರುವ ಹಣಕಾಸು ಇಲಾಖೆ ಉದ್ದೇಶಿತ ವೈದ್ಯ ಸಿಬ್ಬಂದಿಯನ್ನು ಕಡಿತಗೊಳಿಸಿ ಮತ್ತೊಮ್ಮೆ ಪ್ರಸ್ತಾವ ಕಳಿಸುವಂತೆ ಸೂಚಿಸಿತ್ತು. ಅದರಂತೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಅವರು ೨೧೯ ಹುದ್ದೆಗಳಿಗೆ ಬದಲಾಗಿ ೧೮೦ ಹುದ್ದೆಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದಾರೆ. ಇದಕ್ಕೆ ಹಣಕಾಸು ಇಲಾಖೆ ಅಂಕಿತ ಬಿದ್ದರೆ ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲೇ ರೋಗಿಗಳ ಚಿಕಿತ್ಸೆಗೆ ತೆರೆದುಕೊಳ್ಳಲಿದೆ.

ಹಣಕಾಸು ಇಲಾಖೆ ವೈದ್ಯ-ಸಿಬ್ಬಂದಿ ನೇಮಕಕ್ಕೆ ಅನುಮತಿಸಿದರೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗಲಿದೆ. ಮಿಮ್ಸ್ ಆಸ್ಪತ್ರೆಯಲ್ಲಿರುವ ಕೆಲವೊಂದು ಸಿಬ್ಬಂದಿಯನ್ನು ಹೊಂದಾಣಿಕೆ ಮಾಡಿಕೊಂಡು ಕ್ಯಾನ್ಸರ್ ಆಸ್ಪತ್ರೆಯನ್ನು ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಮುನ್ನಡೆಸಬಹುದು ಎಂಬುದು ಅಧಿಕಾರಿಗಳು ಹೇಳುವ ಮಾತು.

ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೇಡಿಯೇಷನ್ ಹೊರಹೋಗದಂತೆ ತಡೆಯುವ ಬಂಕರ್ ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಬಂಕರ್ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳ್ಳಲಿದೆ. ರೇಡಿಯೇಷನ್ ಯಂತ್ರವನ್ನು ಬಂಕರ್‌ನೊಳಗೆ ಇಡಲಾಗಿದ್ದು, ಸಿವಿಲ್ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಉಳಿದಂತೆ ಎಲೆಕ್ಟ್ರಿಕ್ ಕಾಮಗಾರಿ, ಫ್ಲೋರಿಂಗ್ ಕೆಲಸ ಬಾಕಿ ಇದ್ದು, ಎರಡು ತಿಂಗಳೊಳಗೆ ಪೂರ್ಣಗೊಳ್ಳಲಿರುವುದಾಗಿ ವಿಕಿರಣ ಸುರಕ್ಷತಾ ಅಧಿಕಾರಿ ಅರುಣ್ ಅವರು ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.

ಕ್ಯಾನ್ಸರ್ ಆಸ್ಪತ್ರೆಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ಬಂಕರ್ ಕಾಮಗಾರಿ ವಿಳಂಬವಾಗುವುದಕ್ಕೆ ಅದಕ್ಕೆ ಸಂಬಂಧಿಸಿದ ತಂತ್ರಜ್ಞರು ನಮ್ಮಲ್ಲಿ ಇರಲಿಲ್ಲ. ಅದಕ್ಕಾಗಿ ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಕಿರಣ ಸುರಕ್ಷತಾ ತಂತ್ರಜ್ಞ ಅಶ್ವಿನ್ ಅವರನ್ನು ಇಲ್ಲಿಗೆ ಕರೆತಂದು ಮುಂಬೈನಲ್ಲಿರುವ ಅಟಾನಾಮಿಕ್ ಎನರ್ಜಿ ರೀಸರ್ಚ್ ಸೆಂಟರ್ (ಎಇಆರ್‌ಸಿ)ನಿಂದ ಅನುಮತಿ ಪಡೆದು ಬಂಕರ್ ಕಾಮಗಾರಿ ಆರಂಭಿಸಲಾಯಿತು. ಅಶ್ವಿನ್ ನೇತೃತ್ವದಲ್ಲಿ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದೆ ಎಂದು ನಿರ್ದೇಶಕ ಡಾ.ಪಿ.ನರಸಿಂಹಮೂರ್ತಿ ಹೇಳಿದರು.

ಕ್ಯಾನ್ಸರ್ ಆಸ್ಪತ್ರೆಯಲ್ಲಿರುವ ಸಿವಿಲ್ ಕಾಮಗಾರಿಗಳೆಲ್ಲವೂ ಮುಕ್ತಾಯಗೊಂಡಿದ್ದು, ಕೆಲವೊಂದು ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯ- ಸಿಬ್ಬಂದಿಗೆ ಅವಕಾಶ ನೀಡಿದರೆ ಹೊರರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಯಾವುದೇ ಅನಾನುಕೂಲವಾಗುವುದಿಲ್ಲ. ಹಣಕಾಸು ಇಲಾಖೆ ಅನುಮೋದನೆ ನೀಡುವುದನ್ನೇ ಎದುರುನೋಡಲಾಗುತ್ತಿದ್ದು. ಅಂತಿಮ ಅಂಕಿತ ಬಿದ್ದರೆ ಕ್ಯಾನ್ಸರ್ ಆಸ್ಪತ್ರೆ ಆರಂಭವಾಗುವ ಕನಸು ನನಸಾಗಲಿದೆ.

------

೧೬ ಕೋಟಿ ರು. ವೆಚ್ಚದಲ್ಲಿ ಆಧುನೀಕರಣ, ಉಪಕರಣಗಳ ಅಳವಡಿಕೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ₹೧೬ ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಅಳವಡಿಕೆ ಕಾಮಗಾರಿಗಳು ಚುರುಕಿನಿಂದ ಸಾಗಿವೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಸಿಎಸ್‌ಆರ್ ಅನುದಾನದಲ್ಲಿ ರೇಡಿಯಾಲಜಿ ವಿಭಾಗಕ್ಕೆ ಡಿಜಿಟಲ್ ಎಕ್ಸ್-ರೇ, ಸ್ತನಸುರುಳಿ ಎಂಆರ್‌ಐ ಯಂತ್ರ, ಮ್ಯಾಮೋಗ್ರಫಿ ಯಂತ್ರ, ಬೋಧಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದ ಪಕ್ಕದಲ್ಲಿರುವ ಹೊಸ ಮಹಡಿಗೆ ತೆರಳಲು ರೋಗಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಲಿಫ್ಟ್ ಯಂತ್ರ, ಬೋಧಕ ಆಸ್ಪತ್ರೆ ಆವರಣದ ಸುತ್ತಮುತ್ತ ಇರುವ ರಸ್ತೆಯ ಡಾಂಬರೀಕರಣ ಮಾಡಲಾಗುತ್ತಿದೆ.

ಅರವಳಿಕೆ ವಿಭಾಗಕ್ಕೆ ತುರ್ತು ಅವಶ್ಯಕತೆ ಇರುವ ಆಪರೇಟಿಂಗ್ ಮೈಕ್ರೋಸ್ಕೋಪ್ ಯಂತ್ರ, ಎಂಆರ್‌ಯು ಯೂನಿಟ್ ಉನ್ನತೀಕರಣ, ಅಂಗರಚನಾ ಶಾಸ್ತ್ರ ವಿಭಾಗಕ್ಕೆ ತುರ್ತು ಅವಶ್ಯವಿದ್ದ ಸ್ಕಿಲ್ ಲ್ಯಾಬ್ ಆರಂಭ, ಬೋಧಕ ಆಸ್ಪತ್ರೆ, ವೈದ್ಯ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಪೂರೈಕೆ, ರೋಗಿಗಳ ಆರೈಕೆಗಾಗಿ ಬಯೋಗ್ಯಾಸ್ ಪ್ಲಾಂಟ್ ಅಳವಡಿಕೆ, ವೈದ್ಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣ, ಮಿಮ್ಸ್ ಹೊಸ ಕಟ್ಟಡದ ಐಸಿಯು ಉನ್ನತೀಕರಣ, ವೈದ್ಯ ವಿದ್ಯಾರ್ಥಿಗಳ ವಸತಿಗೃಹಗಳ ಉನ್ನತೀಕರಣ, ಒಳರೋಗಿಗಳಿಗೆ, ವೈದ್ಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಗುಣಮಟ್ಟದ ಆಹಾರ ನೀಡುವುದು, ಕೇಂದ್ರ ಸರ್ಕಾರದ ಅನುದಾನದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ.

-

‘ಕ್ಯಾನ್ಸರ್ ಆಸ್ಪತ್ರೆಯ ರೇಡಿಯೇಷನ್ ಬಂಕರ್ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ವೈದ್ಯ-ಸಿಬ್ಬಂದಿ ನೇಮಕ ವಿಚಾರ ಹಣಕಾಸು ಇಲಾಖೆ ಮುಂದಿದೆ. ಶೀಘ್ರ ಅನುಮೋದನೆ ನೀಡಿದರೆ ಹೊರರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ. ₹೧೬ ಕೋಟಿ ವೆಚ್ಚದಲ್ಲಿ ಆಸ್ಪತ್ರೆಯೊಳಗೆ ಆಧುನೀಕರಣ ಕಾಮಗಾರಿ ಹಾಗೂ ವಿವಿಧ ವಿಭಾಗಗಳಿಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುತ್ತಿದ್ದೇವೆ.’

- ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ