ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಶೋಷಿತ ಸಮುದಾಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಶೋಷಿತರ ಏಳಿಗಾಗಿ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಸಂಘಟನೆಯ ಮೂಲಕ ಜಾಗೃತರಾಗಿ ಶೋಷಣೆಯ ವಿರುದ್ಧ ಹೋರಾಟ ನಡೆಸಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಆದರೆ, ಕೆಲವರು ಜನಗಣತಿ ಅವೈಜ್ಞಾನಿಕ ಎಂದು ತಮ್ಮ ವಾದ ಮಂಡಿಸುತ್ತಾರೆ. ಶೋಷಿತ ಸಮುದಾಯದ ಅಭಿವೃದ್ಧಿ ಆಗಲೇಬೇಕು ಎಂಬುವುದು ಕಾಂಗ್ರೆಸ್ ಸರ್ಕಾರದ ನಿಲುವು. ಆದ್ದರಿಂದ ರಾಜ್ಯಮಟ್ಟದ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸಿ ಹಿರಿಯರು ನೀಡುವ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದರು.
ಪಕ್ಷದ ಹಿರಿಯ ಮುಖಂಡ ಟಿ.ಪ್ರಭುದೇವ್ ಮಾತನಾಡಿ, ಜನಗಣತಿ ಬಗ್ಗೆ ಪರ-ವಿರೋಧಗಳು ಸಾಕಷ್ಟು ಕೇಳಿ ಬಂದಿದೆ. ಆದರೆ, ಕಾಂಗ್ರೆಸ್ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರ ಶೋಷಿತ ಸಮುದಾಯದ ಅಭಿವೃದ್ಧಿಗೆ ಮಾರಕವಾಗುವ ಯಾವುದೇ ಕಾನೂನನ್ನು ಜಾರಿಗೆ ತರಬಾರದು. ಜನಗಣತಿ ವರದಿ ಸಲ್ಲಿಕೆಯಾದಮೇಲೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ, ಸಿ.ಟಿ.ಶ್ರೀನಿವಾಸ್, ಆರ್.ಪ್ರಸನ್ನ ಕುಮಾರ್, ನಗರಂಗೆರೆ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಎಸ್.ಎಚ್.ಸೈಯದ್, ಅನ್ವರ್ ಮಾಸ್ಟರ್, ಗೀತಾಬಾಯಿ, ಲಕ್ಷ್ಮಿದೇವಿ ಬಿ.ಎಂ.ಭಾಗ್ಯಮ್ಮ, ಭಾಗ್ಯಲಕ್ಷ್ಮಿ, ಮಾರಣ್ಣ, ಪರಸಪ್ಪ, ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ಮುಜೀಬುಲ್ಲಾ, ಆರ್.ಮಲ್ಲೇಶಪ್ಪ, ಅತಿಕೂರ್ರೆಹಮಾನ್, ಮಂಜಮ್ಮ, ರಶೀದ್, ಕಿರಣ್ ಶಂಕರ್, ಸಣ್ಣಕ್ಕ, ಸೈಪುಲ್ಲಾ, ಬಷೀರ್ ಮುಂತಾದವರು ಉಪಸ್ಥಿತರಿದ್ದರು.