ಕನ್ನಡಪ್ರಭ ವಾರ್ತೆ ಚಾಮರಾಜನಗರಸಂವಿಧಾನ ಮತ್ತು ವಚನಗಳು ಬೆರೆತು ಕೆಲಸ ಮಾಡಿದರೆ ಸಮೃದ್ಧ ಪ್ರಜ್ಞಾವಂತ ರಾಷ್ಟ್ರ ನಿರ್ಮಿಸಬಹುದು. ಬಸವಣ್ಣನವರು ಸಕಲ ಜೀವರಾಶಿಗೆ ಲೇಸನೇ ಬಯಸುವ ಮನೋಧರ್ಮದ ವಿಶ್ವಮಾನವ. ಅಂಬೇಡ್ಕರ್, ಗಾಂಧೀಜಿ, ಕುವೆಂಪು, ಅಂಥವರ ಚಿಂತನೆ ನಮ್ಮ ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರ ವೇದಿಕೆ ವಚನ ಸಂವಿಧಾನದಲ್ಲಿ ಬದುಕೋಣ, ಸಂವಿಧಾನ ಉಳಿಸೋಣ, ಜಾಗೃತಿಯಿಂದ ಮತದಾನ ಮಾಡೋಣ ದ್ಯೇಯ ವಾಕ್ಯದೊಂದಿಗೆ ಜಾಗೃತಿ ಜಾಥಾ ನಡೆಸಲಿದೆ ಎಂದು ವೇದಿಕೆ ಸಂಚಾಲಕ ಸಿ.ಕೆ. ಜಗನ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಆಡಳಿತ ನಡೆಯತ್ತಿದೆ, ಸಂವಿಧಾನ ಉಳಿಸಬೇಕಾದ ಅಗತ್ಯತೆ ಇದ್ದು, ಜಾಗೃತಿಯಿಂದ ಮತದಾನ ಮಾಡಬೇಕಾಗಿದ್ದು, ವೇದಿಕೆ ವತಿಯಿಂದ ಏ.೫ ರಿಂದ ಮೇ ೫ ನಂಜನಗೂಡಿನ ತಗಡೂರಿನ ಗಾಂಧೀ ಕೇಂದ್ರದಿಂದ ಬೀದರ್ನ ಬಸವ ಕಲ್ಯಾಣದವರೆಗೆ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ವಚನ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳೇ ಸಂವಿಧಾನದಲ್ಲೂ ಇದೆ. ಇಂದು ಜನರಿಂದ ಆಯ್ಕೆಯಾಗುವ ರಾಜಕಾರಣಿಗಳು ತಾವು ಜನರ ಸೇವಕರೆಂಬುದನ್ನು ಮರೆತು ಅಧಿಕಾರದ ಅಮಲಿನಲ್ಲಿ ದುಡಿಯುವ ಮಧ್ಯಮ ವರ್ಗದ ಸಂಪತ್ತನ್ನು ಲೂಟಿ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದರು.ಜನಸಾಮಾನ್ಯ ಬದುಕಲು ಬಳಸುವ ಹಣಕ್ಕೆ ಲೆಕ್ಕ ಕೇಳುವ ಸರ್ಕಾರಗಳು, ಎಲೆಕ್ಟ್ರಾನಿಕ್ ಚುನಾವಣಾ ಬಾಂಡ್ ಹೆಸರಿನಲ್ಲಿ ಕೊಟ್ಯಾಂತರ ರು.ಗಳನ್ನು ಲೂಟಿ ಮಾಡುತ್ತಿರುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಮತದಾರರಿಗೆ ಮಾಡುತ್ತಿರುವ ಮಹಾ ಮೋಸ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು, ಕನಕದಾಸರು, ಸಂತ ಶಿಶುನಾಳ ಷರೀಫರು, ಯೋಗಿ ನಾರಾಯಣಗುರು ಮೊದಲಾದ ಮಹಾಚೇತನಗಳು ನೀಡಿದ ವಿಶ್ವಭ್ರಾತೃತ್ವವನ್ನು ಪೋಷಿಸುವ ಸರ್ಕಾರ ನಮ್ಮ ಆಯ್ಕೆಯಾಗಬೇಕಿದೆ ಅದಕ್ಕಾಗಿಯೇ ಈ ಜಾಗೃತಿ ಜಾಥಾ ಎಂದರು.
ಸಂವಿಧಾನದಲ್ಲಿ ಅನುಚ್ಛೇದ ೨೧ರಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನ ಮತದಾನದ ಹಕ್ಕು, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಾದ ಶಿಕ್ಷಣ, ಉದ್ಯೋಗ, ಸ್ಥಳೀಯ ಸಂಸ್ಥೆಗಳಲ್ಲಿ ಸಮಾನ ಅವಕಾಶ ನೀಡಲಾಗಿದೆ. ಅದರಂತೆ ವಚನ ಸಂವಿಧಾನವು ಎಲ್ಲಾ ತಳಸಮುದಾಯಗಳ ಮಹಿಳೆಯರಿಗೆ ಸಮಾನತೆಯನ್ನು ಸಾರುತ್ತದೆ ಎಂದರು.ವಚನ ಸಾಹಿತ್ಯ ಮತ್ತು ಅದರ ತತ್ವಗಳು ನಮ್ಮ ಭಾರತ ದೇಶದ ಸಂವಿಧಾನದ ಆಶಯಗಳು ಮತ್ತು ದ್ಯೇಯಗಳು ಒಂದೇ ಆಗಿದ್ದು ನಮ್ಮ ಸಂವಿಧಾನದ ಮೌಲ್ಯಗಳನ್ನು ಈಗ ಎತ್ತಿ ಹಿಡಿಯಬೇಕಾಗಿದೆ. ದ್ವೇಷ ರಾಜಕಾರಣವನ್ನು ತೊಲಗಿಸೋಣ, ಪ್ರೀತಿಯ ಬಂಧುತ್ವದ ಸೌಹಾರ್ದದ ಬಾಳನ್ನು ಬಾಳೋಣ. ಪ್ರಜಾಪ್ರಭುತ್ವ ಉಳಿಸೋಣ. ಸಂವಿಧಾನ ಮತ್ತು ವಚನಗಳು ಬೆರೆತು ಕೆಲಸ ಮಾಡಿದರೆ ಸಮೃದ್ಧ ಪ್ರಜ್ಞಾವಂತ ರಾಷ್ಟ್ರ ನಿರ್ಮಾಣ ಮಾಡಬಹುದು. ಆದ್ದರಿಂದ ಸಂವಿಧಾನವನ್ನು ಸಂರಕ್ಷಿಸೋಣ. ಜಾಗೃತರಾಗಿ ಮತದಾನ ಮಾಡೋಣ ಎಂದರು.
ಎಲ್ಲಾ ರೈತ, ಕಾರ್ಮಿಕ, ಕನ್ನಡಪರ, ಪ್ರಗತಿಪರ ಮತ್ತು ಸಮಾನ ಮನಸ್ಕರರ ಸಂಘಟನೆಗಳ ಸಹಯೋಗದೊಂದಿಗೆಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಂಗಕರ್ಮಿ ಕೆ. ವೆಂಕಟರಾಜು, ಲಿಂಗಾಯಿತ ಮಹಾಸಭಾದ ಶಿವಪ್ರಸಾದ್, ವೀರಭದ್ರನಾಯಕ ಇದ್ದರು.