ಕನ್ನಡಪ್ರಭ ವಾರ್ತೆ ಮಡಿಕೇರಿ
ಅರಣ್ಯ ಇಲಾಖೆ ಕೊಡಗು ವೃತ್ತ ಮಡಿಕೇರಿ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಪ್ರಯುಕ್ತ ನಗರದ ಅರಣ್ಯ ಭವನದಲ್ಲಿರುವ ಅರಣ್ಯ ಹುತಾತ್ಮಕರ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಗುರುವಾರ ಗೌರವ ನಮನ ಸಲ್ಲಿಸಿದರು.ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಅಭಿಷೇಕ್, ಎನ್.ಎಚ್.ಜಗನ್ನಾಥ, ಕೆ.ಎ.ನೆಹರು, ಸಂದೀಪ್ ಪಿ.ಅಭಯಂಕರ್, ಸೈಯದ್ ಅಹಮದ್ ಷಾ ಹುಸೈನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಸೆಂದಿಲ್ ಕುಮಾರ್, ತಹಶೀನ್ ಬಾನು ದವಡಿ, ವಿ.ಪಿ.ಕಾರ್ಯಪ್ಪ, ವಲಯ ಅರಣ್ಯ ಸಂರಕ್ಷಣಾಧಿಕಾರಿ ತ್ಯಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ.ಸಿ.ಅರುಣ್ ಕುಮಾರ್, ಕೊಡಗು ವೃತ್ತ ಪತ್ರಾಂಕಿತ ವ್ಯವಸ್ಥಾಪಕರಾದ ಪಿ.ಪಿ.ಸರೋಜ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ, ಗಸ್ತು ಅರಣ್ಯ ಪಾಲಕರಾದ ನಾಗರಾಜ ರಡಾರಟ್ಟಿ, ಅರಣ್ಯ ವೀಕ್ಷಕರಾದ ಸಚಿನ್ ತಳವಾರ, ಕಚೇರಿ ಜಮೆದಾರರಾದ ಎಚ್.ಎಸ್.ಕಣ್ಣಯ್ಯ, ಆನೆ ಮಾವುತ ಅಣ್ಣಯ್ಯ ದೊರೆಯಪ್ಪ, ಆರ್ಆರ್ಟಿ ಸಿಬ್ಬಂದಿ ಕೆ.ಯು.ಕುಮಾರೇಶ್, ಅರಣ್ಯ ಕ್ಷೇಮಾಭಿವೃದ್ಧಿ ನೌಕರರ ಪರವಾಗಿ ಪಿ.ಪಿ.ಅಮ್ಮಣ್ಣಿ, ವಾಹನ ಚಾಲಕರ ಪರವಾಗಿ ಜಗದೀಶ್, ಪಿ.ಸಿ.ಇ ನೌಕರರ ಪರವಾಗಿ ಪುನೀತ್ ಕುಮಾರ್, ಪೊಲೀಸ್ ಇಲಾಖೆ ಪರವಾಗಿ ಎಎಸ್ಐ ಚೆನ್ನಕೇಶವ ಅವರು ಅರಣ್ಯ ಹುತಾತ್ಮಕರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದರು.
ಬಳಿಕ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಅರಣ್ಯ ಸಂರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.ಅರಣ್ಯ ಸಂರಕ್ಷಣೆ ಜವಾಬ್ದಾರಿ:
ಅರಣ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಉಳಿದಲ್ಲಿ ಜೀವ ವೈವಿಧ್ಯ ಉಳಿಯಲು ಸಾಧ್ಯ ಎಂದು ಆನಂದ್ ಪ್ರಕಾಶ್ ಮೀನಾ ಅವರು ಹೇಳಿದರು.ರಾಷ್ಟ್ರದ ಗಡಿ ಪ್ರದೇಶದಲ್ಲಿ ಸೈನಿಕರು, ರಾಷ್ಟ್ರದ ಒಳಗಡೆ ಆಂತರಿಕವಾಗಿ ಪೊಲೀಸರು ನಾಗರಿಕರ ರಕ್ಷಣೆ ಮಾಡುತ್ತಾರೆ. ಅದೇ ರೀತಿ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಅವರು ಮಾತನಾಡಿ ರಾಜಸ್ಥಾನದ ಜೋದ್ಪುರ್ನ ಮಹಾರಾಜರ ಅರಮನೆಗಾಗಿ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ವಿರೋಧಿಸಿದ್ದ ಬೀಷ್ಣೋಯಿ ಸಮುದಾಯದ ಸುಮಾರು 363 ಜನರನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಭೀಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಸೆಪ್ಟೆಂಬರ್, 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿ ಅರಣ್ಯ ಹುತಾತ್ಮರನ್ನು ಸ್ಮರಿಸಲಾಗುತ್ತದೆ ಎಂದರು.ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ:
ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಛ ತ್ಯಾಗವನ್ನು ಮಾಡಿ ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಮತ್ತು ಸರ್ವೋಚ್ಛ ತ್ಯಾಗಗಳು ಅಪಾಯಕ್ಕೊಳಗಾದ ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಲು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಅವರು ನುಡಿದರು.ಸ್ವಾಭಾವಿಕ ಹಾಗೂ ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದು, ಅವರಿಗೆ ಎಲ್ಲರೂ ಕೈಜೋಡಿಸಬೇಕು. ಮುಂದಿನ ಪೀಳಿಗೆಗೆ ಅರಣ್ಯ ಸಂಪತನ್ನು ಉಳಿಸಬೇಕು ಎಂದು ಹೇಳಿದರು.
ಅರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಸ್ಥಳೀಯರ ಸಹಕಾರ ಕೂಡ ಅಗತ್ಯ. ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಎಲ್ಲರ ಕುಟುಂಬಗಳ, ಸಮುದಾಯ, ರಾಷ್ಟ್ರದ ಅಭಿವೃದ್ಧಿಗೆ ಅರಣ್ಯ ಸಂಪತ್ತು ಉಳಿಯಬೇಕು ಎಂದರು.‘ಅರಣ್ಯ ಇಲಾಖೆ ವನ್ಯಜೀವಿಗಳ ಹಾವಳಿ ನಿಯಂತ್ರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಕೆಲವು ಸಂದರ್ಭಗಳಲ್ಲಿ ಯಶಸ್ಸು ಕಾಣುತ್ತೇವೆ. ಕೆಲವು ಸಂದರ್ಭದಲ್ಲಿ ವಿಫಲವೂ ಸಹ ಆಗಿದ್ದೇವೆ. ಅರಣ್ಯ ಸಂರಕ್ಷಣೆ ಜೊತೆಗೆ ಎಲ್ಲಾ ಜನರ ಜೀವ ರಕ್ಷಣೆ ಸಹ ಅತೀ ಮುಖ್ಯ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ವಿವರಿಸಿದರು.’
ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ಅರಣ್ಯ ಸಂರಕ್ಷಣೆ ಜೊತೆಗೆ ಕುಟುಂಬದ ಹಿತ ರಕ್ಷಣೆ ಕಡೆಗೂ ಗಮನ ಹರಿಸುವುದು ಮುಖ್ಯ ಎಂದರು.ಅರಣ್ಯ ಇಲಾಖೆ ಸಿಬ್ಬಂದಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ವಾರ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪ್ರತೀನಿತ್ಯದ ಜಂಜಾಟದಿಂದ ಹೊರಬರಲು ಸಹಕಾರಿಯಾಗಲಿದೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್ ಅವರು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಹುತಾತ್ಮರಾದ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಒಟ್ಟು 62 ಅರಣ್ಯ ಹುತಾತ್ಮರ ಹೆಸರು ಓದಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಅರಣ್ಯ ಸೇವೆ ಅಧಿಕಾರಿಯಾಗಿದ್ದ ಪಿ.ಶ್ರೀನಿವಾಸ್ ಅವರು ಆದರ್ಶ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಕಾಡಿಗಾಗಿ ಜನನ, ಕಾಡಿಗಾಗಿ ಜೀವನ, ಕಾಡಿಗಾಗಿ ಮರಣ ಎಂಬುದನ್ನೇ ತತ್ವವಾಗಿ ಇಟ್ಟುಕೊಂಡಿದ್ದ ಕನ್ನಡದ ಅರಣ್ಯ ಇಲಾಖೆಯ ವೀರ ಅಭಿಮನ್ಯು ಎಂದೇ ಕರೆಯುತ್ತಿದ್ದರು ಎಂದು ಸ್ಮರಿಸಿದರು.
ಪಿ.ಶ್ರೀನಿವಾಸ್ ಅವರ ಕಾರ್ಯದಕ್ಷತೆ ಮೆಚ್ಚಿ ಭಾರತ ಸರ್ಕಾರವು ಇವರಿಗೆ ‘ಕೀರ್ತಿಚಕ್ರ’ ಎಂಬ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ ಎಂದರು.ಕಾಡುಗಳ್ಳ, ದಂತಚೋರ, ವೀರಪ್ಪನ್ನ ನಯವಂಚನೆಗೆ ಸಿಲುಕಿ 1991 ರ ನವೆಂಬರ್, 10 ರಂದು ವಿಧಿವಶರಾದರು ಎಂದು ತಿಳಿಸಿದರು.
ವೀರಪ್ಪನ್ನ ವಂಚನೆಯಿಂದ ಹುತಾತ್ಮರಾದ ಕೊಳ್ಳೆಗಾಲದ ಅರಣ್ಯ ರಕ್ಷಕರಾದ ಬಿ.ಸಿ.ಮೋಹನಯ್ಯ ಇವರ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಶಿರಸಿ ಮರಗಳ್ಳರ ದೌರ್ಜನ್ಯಕ್ಕೆ ಬಲಿಯಾದ ವಲಯ ಅರಣ್ಯಾಧಿಕಾರಿ ಅರವಿಂದ ಹೆಗಡೆ ಇವರ ಶೌರ್ಯವು ಕೂಡ ಸ್ಮರಣೀಯವಾಗಿದೆ ಎಂದರು.ಕಳೆದ ಸುಮಾರು 49 ವರ್ಷಗಳಿಂದ ಅಮೂಲ್ಯ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮಗಳ ಬದುಕನ್ನೇ ಮುಡುಪಾಗಿಟ್ಟು, ಕಳ್ಳಸಾಗಾಣಿಕೆದಾರರ ಮರಗಳ್ಳರ ದಂತಚೋರರ ಜೊತೆಗೆ ಕೆಚ್ಚೆದೆಯಿಂದ ಹೋರಾಡಿ ನೈಸರ್ಗಿಕ ಸಂಪತನ್ನು ಉಳಿಸಲು ತಮ್ಮ ಜೀವನವನ್ನೇ ನಾಡಿಗಾಗಿ ತ್ಯಾಗ ಮಾಡಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ಸ್ಮರಣೆಗಾಗಿ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ಐಶ್ವರ್ಯ ಆರ್.ಗೌಡರ ಅವರು ನಿರೂಪಿಸಿದರು.