ಪರಿಸರ ರಕ್ಷಿಸಿದರೆ ಉತ್ತಮ ಆರೋಗ್ಯ- ಶಾಸಕ ಡಾ. ಚಂದ್ರು ಲಮಾಣಿ

KannadaprabhaNewsNetwork | Published : Jun 22, 2025 1:18 AM

ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಗಿಡ, ಮರಗಳನ್ನು ನೆಟ್ಟು ಸಂರಕ್ಷಿಸಬೇಕು. ಪರಿಸರ ರಕ್ಷಿಸಿದರೆ ಉತ್ತಮ ಆರೋಗ್ಯ ಸಾಧ್ಯವಾಗುತ್ತದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಗಿಡ, ಮರಗಳನ್ನು ನೆಟ್ಟು ಸಂರಕ್ಷಿಸಬೇಕು. ಪರಿಸರ ರಕ್ಷಿಸಿದರೆ ಉತ್ತಮ ಆರೋಗ್ಯ ಸಾಧ್ಯವಾಗುತ್ತದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು. ತಾಲೂಕು ವಲಯ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಪಟ್ಟಣದ ಸಿ.ಸಿ. ನೂರಶೆಟ್ಟರ ಲೇಔಟ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನವ ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು. ನಮಗೆ ಅಗತ್ಯವಿರುವ ಆಮ್ಲಜನಕ, ಆಹಾರ ಮತ್ತು ಆರೋಗ್ಯಕ್ಕಾಗಿ ಸಸಿ ನೆಡಬೇಕು. ದೇಶಾದ್ಯಂತ ಅರಣ್ಯ ಸಂಪತ್ತು ನಾಶವಾಗುತ್ತಿದ್ದು, ಉಳಿಸುವ ಕಾರ್ಯವಾಗಬೇಕು. ಪರಿಸರ ಸಂರಕ್ಷಣೆಯಾದರೆ ಮಾತ್ರ ಮನುಕುಲಕ್ಕೆ ಉಳಿವು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.ಪರಿಸರ ರಕ್ಷಣೆಯಲ್ಲಿ ನಾವು ತಾತ್ಸಾರ ಮಾಡಿದರೆ ಬರುವ ದಿನಗಳಲ್ಲಿ ಉಸಿರಾಡುವ ಗಾಳಿ ಕಲುಷಿತಗೊಂಡು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಪರಿಸರ ಸಂರಕ್ಷಣೆ ನಿರಂತರ ಪ್ರಕ್ರಿಯೆ. ಪರಿಸರ ಬೆಳೆಸಿದಷ್ಟು ಮಾನವನಿಗೆ ಹೆಚ್ಚಿನ ಸಹಾಯ ಮಾಡುತ್ತದೆ. ಆದರೆ ಪರಿಸರ ನಾಶವಾದಂತೆ ಮನುಷ್ಯನ ಬದುಕು ಕೂಡ ದುರ್ಬಲಗೊಳ್ಳುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ಉತ್ತಮ ಪರಿಸರದ ಅನಿವಾರ್ಯವಿದೆ. ಕೊರೋನಾ ಸೋಂಕು ಬಂದು ಹೋದ ಮೇಲೆ ಪರಿಸರ ಉಳಿಸಲು ಹೊಸ ಯತ್ನಗಳು ಆರಂಭವಾಗಿದೆ. ಬದಲಾವಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪ್ರಕೃತಿಯ ಮೇಲೆ ಮಾನವನ ಅಕ್ರಮಣ ಹೆಚ್ಚಾಗುತ್ತಿದೆ. ಜೀವಪರಿಸರ ಬಿಕ್ಕಟ್ಟು ಉಂಟಾಗಲಿದೆ. ಪ್ರಕೃತಿಯಲ್ಲಿನ ನೈಸರ್ಗಿಕ ಸಂಪತ್ತು ನಾಶವಾಗುತ್ತಿದ್ದು, ಅನೇಕ ಜೀವರಾಶಿಗಳು ಕಣ್ಮರೆಯಾಗುತ್ತಿವೆ ಎಂದರು.

ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯವಂತ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಉತ್ತಮ ಪರಿಸರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಹಸಿರು ಉಸಿರಾಗಬೇಕಿದೆ. ಉತ್ತಮ ಪರಿಸರ ಉತ್ತಮ ಆರೋಗ್ಯವನ್ನು ನೀಡುತ್ತದೆ ಎಂದರು. ಇಂದು ಹಲವಾರು ಕಾರಣಗಳಿಂದ ಪರಿಸರ ನಾಶವಾಗುತ್ತಿದೆ. ಆದ್ದರಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾದಾಗ ಪರಿಸರ ಸುರಕ್ಷಿತವಾಗಿರುತ್ತದೆ. ಮನೆಯಂಗಳ, ಬೀದಿಯಲ್ಲಿ, ಶಾಲಾ ಆವರಣ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಡ್ಡಾಯವಾಗಿ ಸಸಿ ನೆಡಬೇಕು ಎಂದು ಕರೆ ನೀಡಿದರು. ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಪರಿಸರವು ಮಾನವನ ಏಳ್ಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದೆ. ಸಮಾಜದಲ್ಲಿ ಬದುಕುವ ವ್ಯಕ್ತಿ ತಮ್ಮ ತಮ್ಮ ಮನೆಗಳ ಮುಂದೆ ಸಸಿಯನ್ನು ನೆಟ್ಟು ಪೋಷಣೆ ಮಾಡಬೇಕು. ತನ್ನ ಉದ್ದಾರಕ್ಕಾಗಿ ಸಮತೋಲನವಾದ ಪರಿಸರ ಹುಡುಕುವತ್ತ ಮಾನವ ದಾಪುಗಲು ಹಾಕುತ್ತಿದ್ದಾನೆ. ಈಗಲಾದರೂ ಪರಿಸರ ಕಾಳಜಿ ನಮ್ಮೆಲ್ಲರ ಹೊಣೆಯಾಗಬೇಕು ಎಂದರು. ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ದಿ ಮತ್ತು ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಿಸರ ಪ್ರಜ್ಞೆ ಬೆಳೆಯಬೇಕಾಗಿದೆ. ಅರಣ್ಯ ನಾಶದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕಾದ ಅಗತ್ಯವಿದೆ ಎಂದರು. ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ, ಮುಖಂಡ ಜಾನು ಲಮಾಣಿ, ಚಂದ್ರಕಾಂತ ನೂರಶೆಟ್ಟರ, ಎಚ್.ಎಂ. ದೇವಗೀರಿ, ಫಕ್ಕೀರೇಶ ರಟ್ಟಿಹಳ್ಳಿ, ನಂದಾ ಪಲ್ಲೇದ, ಆಶೋಕ ವರವಿ ಸೇರಿ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.