ಶಿಕ್ಷಣದ ಜತೆಗೆ ಕ್ರೀಡಾ ತರಬೇತಿಗೆ ನೀಡಲು ಬದ್ಧ

KannadaprabhaNewsNetwork | Published : Jun 22, 2025 1:18 AM

ಪಟ್ಟಣವು ಮೆಣಸಿನಕಾಯಿಗೆ ಪ್ರಸಿದ್ಧಿ ಪಡೆದಂತೆ ಕಬಡ್ಡಿ ಕ್ರೀಡೆಯಲ್ಲಿಯೂ ಉತ್ತಮ ಹೆಸರು ಪಡೆದಿದೆ, ಇಲ್ಲಿನ ನವರಂಗ, ನ್ಯಾಷನಲ್ ಯುಥ ಕ್ಲಬ್, ನವಚೇತನ, ಶಿವಶಕ್ತಿ, ಸಂಗಮೇಶ್ವರ ಕಬಡ್ಡಿ ತಂಡಗಳು ರಾಜ್ಯದಲ್ಲೇ ಉತ್ತಮ ಹೆಸರನ್ನು ಪಡೆದುಕೊಂಡಿದ್ದವು

ಬ್ಯಾಡಗಿ: ಪ್ರತಿಭಾನ್ವಿತ ಕ್ರೀಡಾ ಸಾಧಕರನ್ನು ಗುರ್ತಿಸಲು ಮುಂದಾಗಿರುವ ನಮ್ಮ ಮಹಾವಿದ್ಯಾಲಯವು ಉಚಿತ ಶಿಕ್ಷಣದ ಜತೆಗೆ ಕ್ರೀಡಾ ತರಬೇತಿಗೆ ಅವಶ್ಯವಿರುವ ಸೌಲಭ್ಯ ನೀಡಲು ಬದ್ಧವಾಗಿದೆ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ನಮ್ಮ ಸಂಸ್ಥೆ ಈಗಾಗಲೇ ಸುಸಜ್ಜಿತ ಮಹಿಳಾ ಕಬಡ್ಡಿ ತಂಡ ಅಣಿಗೊಳಿಸಿರುವುದಾಗಿ ಬಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.

ಪಟ್ಟಣದ ಬಿಇಎಸ್ ಶಿಕ್ಷಣ ಸಂಸ್ಥೆಯ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಾಧನೆ ತೋರಿದ ಕಬಡ್ಡಿ ಕ್ರೀಡಾಪಟುಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಬಡ್ಡಿ ತವರೂರು ಬ್ಯಾಡಗಿ:

ಪಟ್ಟಣವು ಮೆಣಸಿನಕಾಯಿಗೆ ಪ್ರಸಿದ್ಧಿ ಪಡೆದಂತೆ ಕಬಡ್ಡಿ ಕ್ರೀಡೆಯಲ್ಲಿಯೂ ಉತ್ತಮ ಹೆಸರು ಪಡೆದಿದೆ, ಇಲ್ಲಿನ ನವರಂಗ, ನ್ಯಾಷನಲ್ ಯುಥ ಕ್ಲಬ್, ನವಚೇತನ, ಶಿವಶಕ್ತಿ, ಸಂಗಮೇಶ್ವರ ಕಬಡ್ಡಿ ತಂಡಗಳು ರಾಜ್ಯದಲ್ಲೇ ಉತ್ತಮ ಹೆಸರನ್ನು ಪಡೆದುಕೊಂಡಿದ್ದವು, 1999 ರಲ್ಲಿ ಆರಂಭವಾದ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಜಿಲ್ಲೆಯಲ್ಲಿ ಕಬಡ್ಡಿ ಬೆಳವಣಿಗೆ ಹಗಲಿರುಳು ಶ್ರಮಿಸುತ್ತಿದ್ದು, ನೂರಾರು ಕ್ರೀಡಾಪಟುಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಲ್ಲದೇ ಸರ್ಕಾರಿ ಸೇವೆಯಲ್ಲಿ ಕೆಲಸ ಪಡೆದುಕೊಳ್ಳಲು ಶಕ್ತವಾಯಿತು ಎಂದರು.

ಹಾವೇರಿ ವಿವಿ ಕುಲಸಚಿವ ಎಸ್.ಡಿ. ಬಾಗಲಕೋಟೆ ಮಾತನಾಡಿ, ಯಾವುದೇ ಹಣ ಪಡೆದುಕೊಳ್ಳದೇ ಹಾವೇರಿ ವಿಶ್ವವಿದ್ಯಾಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ ಸುಸಜ್ಜಿತವಾಗಿ ಅದ್ಧೂರಿಯಾಗಿ ಆಯೋಜಿಸಿದ್ದಲ್ಲದೇ ಅತ್ಯಂತ ಅಚ್ಚುಕಟ್ಟಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟಿರುವ ಕೀರ್ತಿ ಬಿಇಎಸ್ ಕಾಲೇಜಿಗೆ ಸಲ್ಲುತ್ತದೆ, ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣದ ಘೋಷಣೆಯಿಂದ ಬಹುಶಃ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ತಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಆಸಕ್ತಿ ತೋರಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅಂತರ ವಿವಿ ಸ್ಪರ್ಧೆಯಲ್ಲಿ ಕಾಲೇಜಿನಿಂದ ಪ್ರತಿನಿಧಿಸಿದ್ದ ರಕ್ಷಿತಾ ಮಡಿವಾಳರ, ಅನಿತ ಗೊರವರ, ಅರ್ಪಿತಾ ಮಡಿವಾಳರ, ಮನು ಮೈಲಾರ, ಮಾಲತೇಶ ಮಲಗುಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಅಧ್ಯಕ್ಷತೆ ವಹಿಸಿದ್ದರು, ಉಪನ್ಯಾಸಕ ಡಾ. ಎನ್.ಎಸ್. ಪ್ರಶಾಂತ, ಡಾ. ಪ್ರಭು ದೊಡ್ಮನಿ, ಡಾ. ಸುರೇಶಕುಮಾರ ಪಾಂಗಿ, ಡಾ. ಎ.ಎಸ್. ರಶ್ಮಿ, ಶಿವನಗೌಡ ಪಾಟೀಲ, ಶಶಿಧರ ಮಾಗೋಡ, ಜ್ಯೋತಿ ಹಿರೇಮಠ, ನಿವೇದಿತ ವಾಲಿಶೆಟ್ಟರ, ವಾಣಿಶ್ರೀ ಬಂಕೊಳ್ಳಿ, ಕಿರಣ ಡಂಬರಮತ್ತೂರ, ನಿಂಗಪ್ಪ ಕುಡುಪಲಿ, ಪ್ರವೀಣ ಬಿದರಿ, ಅಂಬಿಕಾ ನವಲೆ, ಸಿ.ಬಿ. ಗೂರಣ್ಣವನರ, ಕುಮಾರ ಮಾಳಗಿ, ಮಲ್ಲೇಶ ಮುಧೋಳಕರ, ಸಿಬ್ಬಂದಿ ಸಂತೋಷ ಉದ್ಯೋಗಣ್ಣನವರ, ಮಲ್ಲಿಕಾರ್ಜುನ ಕೋಡಿಹಳ್ಳೀ, ಬಸಮ್ಮ ಸೇರಿದಂತೆ ಇನ್ನಿತರರಿದ್ದರು.