ತುಂಗಭದ್ರೆ ರಕ್ಷಣೆ ನಮ್ಮೆಲ್ಲರ ಹೊಣೆ

KannadaprabhaNewsNetwork |  
Published : Dec 29, 2025, 02:45 AM IST
28ಕೆಎಂಎನ್ ಡಿ12.13 | Kannada Prabha

ಸಾರಾಂಶ

ತುಂಗಾ ಪಾನ-ಗಂಗಾ ಸ್ನಾನ ಎಂಬ ಮಾತು ಎಲ್ಲೆಡೆ ಪ್ರಖ್ಯಾತಿ ಹೊಂದಿದೆ. ಆದರೆ, ಇಂದು ತುಂಗಭದ್ರಾ ಮಲೀನವಾಗುತ್ತಿದೆ.

ಕಾರಟಗಿ: ಕೋಟ್ಯಂತರ ಜನರ ಜೀವನಾಡಿ ತುಂಗಭದ್ರೆ ಜಲ ಇಂದು ಕುಡಿಯಲು ಯೋಗ್ಯ ಇಲ್ಲ ಎನ್ನುವ ಆತಂಕಕಾರಿ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಯೋಜಕಿ ರಾಜಶ್ರೀ ಚೌಧರಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಹಾಗೂ ಸ್ಥಳೀಯ ಜಾಗೃತ ಯುವಕ ಸಂಘ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯ ಸಭೆ ಉದ್ಘಾಟಿಸಿ ಮಾತನಾಡಿದರು.

ತುಂಗಾ ಪಾನ-ಗಂಗಾ ಸ್ನಾನ ಎಂಬ ಮಾತು ಎಲ್ಲೆಡೆ ಪ್ರಖ್ಯಾತಿ ಹೊಂದಿದೆ. ಆದರೆ, ಇಂದು ತುಂಗಭದ್ರಾ ಮಲೀನವಾಗುತ್ತಿದೆ. ಅದರ ನೀರು ಇಂದು ಕುಡಿಯಲು ಯೋಗ್ಯವಿಲ್ಲ. ಸಾರ್ವಜನಿಕರು ಬಿಡುವ ತ್ಯಾಜ್ಯ ಇಂದು ನದಿ ಮಾಲಿನ್ಯಕ್ಕೆ ಕಾರಣವಾಗಿವೆ. ಇದರಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದ ಜನರು ಗೊಬ್ಬರ, ಕ್ರಿಮಿನಾಶಕ ಬಳಸುತ್ತಾರೆ‌. ಇವರು ಬಿಡುವ ತ್ಯಾಜ್ಯವೆಲ್ಲ ನದಿ ಸೇರಿ ಇಂದು ಕುಡಿಯಲು ನೀರು ಯೋಗ್ಯವಿಲ್ಲ ಎನ್ನುವ ದುಸ್ಥಿತಿ ಬಂದಿದೆ. ಮುಂದೆ ಬಳಕೆಗೂ ದುರ್ಲಭವಾಗುವ ಎಲ್ಲ ಲಕ್ಷಣಗಳು ಇಂದೇ ಗೋಚರಿಸುತ್ತಿವೆ. ಕಲುಷಿತ ನೀರು ಕುಡಿದರೆ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ, ಕಿಡ್ನಿ ಸಮಸ್ಯೆ ಸೇರಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಭೀತಿಯಿದೆ. ಸರ್ಕಾರ ಈಗಲಾದರೂ ನದಿ ನೀರಿನ ವಿಚಾರದಲ್ಲಿ, ಶುದ್ಧ ಗಾಳಿ ಒದಗಿಸುವ ನಿಟ್ಟಿನಲ್ಲಿ ನೀತಿ ರೂಪಿಸಿ ಜಾರಿಗೆ ತರಬೇಕು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಟೇಲ್ ಮಾತನಾಡಿ, ನದಿ ನೀರು ರಕ್ಷಣೆಗೆ ಭೇದ-ಭಾವವಿಲ್ಲದೆ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು. ಆಗಾದಾಗ ಮಾತ್ರ ಜೀವಸಂಕುಲದ ಉಳಿಯಲಿದೆ. ನದಿಗಳ ರಕ್ಷಣೆಗೆ ಇಂಥ ಅಭಿಯಾನದ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಾಜಿ ಶಾಸಕ ಬಸವರಾಜ ದಢೇಸೂಗೂರು, ಪ್ರಚಾರ ರಾಯಭಾರಿ ಲಲಿತಾರಾಣಿ ಶ್ರೀರಂಗದೇವರಾಯುಲು, ಆಂದೋಲನದ ಸಂಘಟನಾ ಮಂತ್ರಿ ಗಿರಿರಾಜ್ ಗುಪ್ತಾ, ಸಂಚಾಲಕ ಲೋಕೇಶ್ವರಪ್ಪ, ಆಂದೋಲನದ ದಕ್ಷಿಣ ಭಾರತ ಸಂಚಾಲಕ ಸಿ.ಪಿ. ಮಾಧವನ್ ಮಾತನಾಡಿದರು.

ಈ ವೇಳೆ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮರುಳಸಿದ್ದಯ್ಯಸ್ವಾಮಿ ಹಿರೇಮಠ, ವೀರಭದ್ರ ಶರಣರು ತಲೇಖಾನ್ ಮಠ ಸಾನ್ನಿಧ್ಯ ವಹಿಸಿದ್ದರು.

ಶರಣಪ್ಪ ಕಾಯಿಗಡ್ಡಿ, ಶರಣಪ್ಪ ಕೋಟ್ಯಾಳ ಕಾರ್ಯಕ್ರಮ ನಿರೂಪಿಸಿದರು‌. ರಾಮು ನಾಯಕ ಸ್ವಾಗತಿಸಿ, ವಂದಿಸಿದರು. ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಹಿರಿಯ ಸದಸ್ಯ ಪ್ರಹ್ಲಾದ ಜೋಷಿ, ಅಭಿಯಾನದ ಸಂಚಾಲಕ ಡಾ. ಶಿವಕುಮಾರ್ ಮಾಲಿ ಪಾಟೀಲ್, ಪ್ರಭು ಉಪನಾಳ, ಮಹಮ್ಮದ ರಫಿ ಶ್ರೀರಾಮನಗರ, ಸಂತೋಷ ಕೆಲೋಜಿ, ಬಸವರಾಜ ಪಗಡದಿನ್ನಿ, ಉದ್ಯಮಿ ಕಳಕನಗೌಡ ಮಾ.ಪಾ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಚನ್ನಬಸಪ್ಪ ಸುಂಕದ, ಕೆ.ಸಿದ್ದನಗೌಡ, ಜಿ. ಯಂಕನಗೌಡ, ರುದ್ರಗೌಡ ನಂದಿಹಳ್ಳಿ, ಯಲ್ಲಪ್ಪ ಕಟ್ಟಿಮನಿ, ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ್, ವೀರನಗೌಡ ಮಾ.ಪಾ ಇನ್ನಿತರರು ಇದ್ದರು.

ಅದ್ಧೂರಿ ನಡೆದ ಪಾದಯಾತ್ರೆ: ಪಟ್ಟಣದಲ್ಲಿ ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡ ನಾಗರಾಜ್ ತಂಗಡಗಿ ರಾಷ್ಟ್ರಧ್ವಜ ಬೀಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆ ಕನಕದಾಸ ವೃತ್ತದ ಮೂಲಕ ರಾಜ್ಯ ಹೆದ್ದಾರಿ ಮೂಲಕ ಹಳೇ ಬಸ್ ನಿಲ್ದಾಣ, ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಎಪಿಎಂಸಿ ತಲುಪಿ ಸಮಾರೋಪಗೊಂಡಿತು. ಪರಿಸರ ಪ್ರೇಮಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ನಾನಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ನೂರಾರು ಜನ ಶಿವಮೊಗ್ಗದಿಂದ ಆಗಮಿಸಿದ್ದ ಪಾದಯಾತ್ರಿಗಳ ಮೂಲಕ ಹೆಜ್ಜೆ ಹಾಕಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!