ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯ: ಡಾ.ಸತೀಶ ಡಿ

KannadaprabhaNewsNetwork | Published : Jun 21, 2025 12:49 AM

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೌದ್ದಿಕ ಆಸ್ತಿ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ರಕ್ಷಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ತೋಟಗಾರಿಗಾಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಸುಧಾರಣೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೌದ್ದಿಕ ಆಸ್ತಿ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ರಕ್ಷಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ತೋಟಗಾರಿಗಾಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಸುಧಾರಣೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ ಡಿ ಹೇಳಿದರು.

ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಕುರಿತು ಒಂದು ದಿನದ ರಾಜ್ಯದ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬೌದ್ಧಿಕ ಆಸ್ತಿಗಳ ಹಕ್ಕುಗಳ ಅವಲೋಕನ ಕುರಿತು ಮಾತನಾಡಿದ ಅವರು, ಬೌದ್ಧಿಕ ಆಸ್ತಿಗಳು ಎಂದರೆ ಮಾನವನ ಬುದ್ಧಿಶಕ್ತಿಯಿಂದ ರಚಿಸಲ್ಪಟ್ಟ ವಸ್ತುಗಳ ಮೇಲೆ ಸೃಷ್ಟಿಕರ್ತರಿಗೆ ನೀಡಲಾದ ಹಕ್ಕುಗಳು. ಈ ಹಕ್ಕುಗಳು ಸೃಷ್ಟಿಕರ್ತರಿಗೆ ಅವರ ಸೃಷ್ಟಿಸಿದ ವಸ್ತುಗಳನ್ನು ನಿರ್ದಿಷ್ಟ ಸಮಯದವರೆಗೆ ಬಳಸಲು, ಮಾರಾಟ ಮಾಡಲು ಮತ್ತು ಲಾಭ ಪಡೆಯಲು ಹಕ್ಕು ನೀಡಲಾಗಿರುತ್ತದೆ. ಪೇಟೆಂಟ್ ಎನ್ನುವುದು ಹೊಸ ಸಂಶೋಧನೆ ಅಥವಾ ಅವಿಷ್ಕಾರಕ್ಕಾಗಿ ನೀಡಲಾದ ವಿಶೇಷ ಹಕ್ಕು. ಉತ್ಪನ್ನ ತಯಾರಿಸಲು ಹೊಸ ಮಾರ್ಗ ತೋರುವ ಮತ್ತು ವ್ಶೆಜ್ಞಾನಿಕ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕ್ರಿಯೆಯಾಗಿದೆ. ಲೇಖಕರು, ಕಲಾವಿದರು ಮತ್ತು ಇತರ ಸೃಷ್ಟಿಕರ್ತರಿಗೆ ಅವರ ಸಾಹಿತ್ಯಿಕ ಮತ್ತು ಕಲಾತ್ಮಕ ಸೃಷ್ಟಿಗಳಿಗೆ ರಕ್ಷಣೆ ನೀಡುತ್ತದೆ. ದೇಶಗಳು ಬೌದ್ಧಿಕ ಆಸ್ತಿ ರಕ್ಷಿಸಲು ಕಾನೂನು ಜಾರಿಗೆ ತರಲಾಗಿದೆ. ಈ ಕಾನೂನುಗಳು ಬೌದ್ಧಿಕ ಸರಕುಗಳು ಮತ್ತು ಸೇವೆಗಳ ಸೃಷ್ಟಿಕರ್ತರನ್ನು ರಕ್ಷಿಸುತ್ತಿದ್ದರೂ, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಸಂಪನ್ಮೂಲಗಳಿಗೆ ಪ್ರವೇಶದ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಅಂತರ ಸಹ ಅವು ವ್ಯಕ್ತಪಡಿಸುತ್ತವೆ. ಬೌದ್ಧಿಕ ಆಸ್ತಿ ಹಕ್ಕುಗಳು ಕಂಪನಿಯ ಮೌಲ್ಯಗಳು ಹೆಚ್ಚುತ್ತಿರುವ ಪ್ರಮುಖ ಭಾಗವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಜ್ಞಾನ ಆಧಾರಿತ ಆರ್ಥಿಕತೆಗಳಿಗೆ ಚಲಿಸುತ್ತಿದ್ದಂತೆ, ರಕ್ಷಣೆ ಹೆಚ್ಚು ಕಷ್ಟಕರ ಮತ್ತು ಹೆಚ್ಚು ಮುಖ್ಯವಾಗಿದೆ. ವಿಶೇಷವಾಗಿ ಹೆಚ್ಚು ಸ್ಫರ್ಧಾತ್ಮಕ ಮಾರುಕಟ್ಟೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ, ಅಂತಾರಾಷ್ಟ್ರೀಯ ರಕ್ಷಣೆ ಸಂಕೀರ್ಣವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ವಿಭಾಗದ ಮುಖ್ಯಸ್ಥೆ ಡಾ. ಬಸವರಾಜೇಶ್ವರಿ ಹೊಕ್ರಾಣಿ ಮಾತನಾಡಿ, ಜಗತ್ತಿನ ಲಕ್ಷಾಂತರ ಸಂಶೋಧಕರು ಜೀವನದಲ್ಲಿ ಸಂತೋಷ ಮತ್ತು ಗುಣಾತ್ಮಕ ಬದಲಾವಣೆ ಮಾಡಿರುವ ಬಹುಕೋಟಿ ಡಾಲರ್ ಚಿತ್ರೋದ್ಯಮದ ರೀಕಾರ್ವಿಂಗ್, ಪ್ರಕಾಶನ, ಸಾಫ್ಟವೇರ್, ಉದ್ಯಮಗಳಿಗೆ ಕೃತಿ ಸ್ವಾಮ್ಯದ ರಕ್ಷಣೆ ಇಲ್ಲದೆ ಇದ್ದರೆ ಅವುಗಳ ಬೆಳವಣಿಗೆ ಕಷ್ಟಸಾಧ್ಯ. ಗ್ರಾಹಕರು ಯಾವುದೇ ವಸ್ತುಗಳನ್ನು ವಿಶ್ವಾಸಾರ್ಹತೆಯಿಂದ ಕೊಳ್ಳಲು ಟ್ರೇಡ್‌ಮಾರ್ಕ್‌ ಸಹಾಯಕ್ಕೆ ಬರುತ್ತದೆ, ಬೌದ್ಧಿಕ ಆಸ್ತಿಯ ರಕ್ಷಣೆ ನಕಲಿ ಮತ್ತು ಇತರ ಕಳಪೆ ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಕಡಿವಾಣ ಹಾಕುತ್ತದೆ. ದೇಶದ ಪ್ರಗತಿ, ಹೊಸ ಕೈಗಾರಿಕೆ, ತಯಾರಿಕೆ ಸಂಸ್ಥೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿಗೆ ಕಾರಣವಾಗುವುದರ ಮೂಲಕ ಜನರ ಜೀವನ ಗುಣಮಟ್ಟ ಉತ್ತಮಪಡಿಸಲು ಐಪಿಆರ್ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್. ಆರ್. ಸಬರದ ಮಾತನಾಡಿ, ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯ ಅಗತ್ಯತೆಯ ನಾವೀನ್ಯತೆ ಮುಖ್ಯವಾಗಿದ್ದು, ಇತರರ ಹಕ್ಕುಗಳನ್ನು ಗೌರವಿಸುವಾಗ ಒಬ್ಬರ ಸ್ವಂತ ಹಕ್ಕುಗಳ ಬಗ್ಗೆ ತಿಳಿದಿರುವ ಪ್ರಾಮುಖ್ಯತೆ ಇರುವುದರಿಂದ ಕಾಲೇಜಿನಿಂದ ಈ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದರು.

ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್.ಲಮಾನಿ ಪ್ರಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಡಾ.ಎಸ್.ಆರ್. ಕಲಾದಗಿ ಸ್ವಾಗತಿಸಿದರು. ಸಹನಾ ಪ್ರಾರ್ಥಿಸಿದರು. ಡಾ.ಡಿ.ಎಸ್ ಲಮಾಣಿ ಪ್ರಸ್ತಾವಿಕ ಮಾತನಾಡಿದರು. ಡಾ.ಪ್ರತಿಭಾ ಕಣವಿ ನಿರೂಪಿಸಿದರು. ಡಾ.ಜಯಶ್ರೀ ಉಪ್ಪಿನ ವಂದಿಸಿದರು. ಹಳೇ ವಿದ್ಯಾರ್ಥಿ ಸಂಘದ ಡಾ. ಗಿರೀಶ ಹಾಗೂ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ದೇಸಾಯಿ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳಿಂದ ನೂರಾರು ಶಿಬಿರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.