ಬಿತ್ತನೆ ಬೀಜ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Jun 4, 2024 12:32 AM

ಸಾರಾಂಶ

ರಾಜ್ಯ ಸರ್ಕಾರ ಮುಂಗಾರು ಬಿತ್ತನೆ ಬೀಜ ದರ ಏರಿಕೆ ಹಾಗೂ ಬರ ಪರಿಹಾರ ವಿತರಣೆ ವಿಳಂಬ ಧೋರಣೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಜ್ಯ ಸರ್ಕಾರ ಮುಂಗಾರು ಬಿತ್ತನೆ ಬೀಜ ದರವನ್ನು ಶೇ.60 ರಿಂದ 70 ಏರಿಕೆ ಮಾಡಿರುವ ಹಾಗೂ ಬರ ಪರಿಹಾರ ವಿತರಣೆ ವಿಳಂಬ ಧೋರಣೆ ಖಂಡಿಸಿ ಚಿಕ್ಕೋಡಿ ಉಪ ಕೃಷಿ ನಿರ್ದೇಶಕರಿಗೆ ಭಾರತೀಯ ಜನತಾ ಪಕ್ಷದ ಚಿಕ್ಕೋಡಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜು ಹರಗನ್ನವರ ನೇತೃತ್ವದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ ಮಳೆ ಕೊರತೆ, ಅಸಮರ್ಪಕ ಬೆಳೆ ಪರಿಹಾರ, ಪರಿಹಾರದ ಹಣ ಸಾಲದ ಮೊತ್ತಕ್ಕೆ ಜಮಾ, ಸೇರಿ ನಾನಾ ಕಾರಣದಿಂದ ಬಳಲುತ್ತಿರುವ ರೈತರಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಕೆಲ ಬಿತ್ತನೆ ಬೀಜಗಳ ದರಗಳನ್ನು, ಏಕಾಏಕಿ ಹೆಚ್ಚಿಸಿರುವುದು ಗಾಯಕ್ಕೆ ಉಪ್ಪು ಸವರಿದ ಅನುಭವ ನೀಡತೊಡಗಿದೆ. ಸರ್ಕಾರದ ಅನಿರೀಕ್ಷಿತ ಕ್ರಮದಿಂದ ಮುಂಗಾರು ಬಿತ್ತನೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಬೀಜ ಖರೀದಿಗೆ ರೈತ ಸಂಪರ್ಕ ಕೇಂದ್ರಕ್ಕೆ ದೌಡಾಯಿಸುತ್ತಿರುವ ರೈತರು ಬದಲಾದ ದರ ಕೇಳಿ ಕಂಗಾಲಾಗಿದ್ದಾರೆ. ಕೆಲವರು ಗೊಂದಲಕ್ಕಿಡಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಮುಂದಾಗುತ್ತಿದ್ದಾರೆ. ರಾಜ್ಯದ ಬಹುತೇಕ ತಾಲೂಕುಗಳನ್ನು ಸರ್ಕಾರವೇ ಬರ ಪೀಡಿತವೆಂದು ಘೋಷಿಸಿದೆ. ಹೀಗಿದ್ದರೂ ವಾಸ್ತವ ಅರಿಯದೇ ಬಿತ್ತನೆ ಬೀಜದ ದರ ಏರಿಕೆ ಮಾಡಿದ್ದರಿಂದ ಬೀಜ ಖರೀದಿಗೂ ರೈತರು ಸಾಲ ಮಾಡುವ ಪರಿಸ್ಥಿತಿ ನಿರ್ಮಾನವಾಗಿದೆ ಎಂದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ರೈತ ಮೋರ್ಚಾ ಅಧ್ಯಕ್ಷ ರಾಜು ಹರಗನ್ನವರ ಮಾತನಾಡಿ, ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು ಮತ್ತು ಜೋಳ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಹೆಸರು (5ಕೆಜಿ) ಕಳೆದ ವರ್ಷ 501 ಈ ಬಾರಿ 785. ತೋಗರಿ (5ಕೆಜಿ) ಕಳೆದ ವರ್ಷ 525 ಈ ಬಾರಿ 770 ಜೋಳ 5ಕೆಜಿ) ಕಳೆದ ವರ್ಷ 202 ಈ ಬಾರಿ 285 ಈ ರೀತಿಯಾಗಿ ಬಿತ್ತನೆ ಬೀಜದ ಬೆಲೆಯನ್ನು ಹೆಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ರಾಜ್ಯ ಸರ್ಕಾರ ರೈತರ ಮೇಲೆ ನಾನಾ ವಿಧದ ಹೊರೆಯನ್ನು ಹೇರಿದೆ ಎಂದು ದೂರಿದರು.

ಬರ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಸಮರ್ಪಕ ರೀತಿಯಲ್ಲಿ ಬೆಳೆ ಪರಿಹಾರ ನೀಡಿಲ್ಲ. ಕೇವಲ ಶೇ.40 ರೈತರಿಗೆ ದೊರಕಿದ್ದು, ಬಾಕಿ ಉಳಿದಿರುವ ಶೇ.60 ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.

ಚಿಕ್ಕೋಡಿ ಬಿಜೆಪಿ ಜಿಲ್ಲಾ ಅಧ್ಯಕ್ಷರ ಸತೀಶ ಅಪ್ಪಾಜಿಗೋಳ, ಮಾಜಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರೇಶ ಗಜಬಾರ, ಸಂಜು ಪಾಟೀಲ, ಜಿಲ್ಲಾ ಖಜಾಂಚಿ ಶಿವಗೌಂಡ ಪಾಟೀಲ, ರಾಯಬಾಗ ರೈತ ಮೋರ್ಚಾ ಅಧ್ಯಕ್ಷ ರಾಜು ಚೌಗುಲೆ, ದೇವರಾಜ ಪಾಚ್ಚಾಪುರೆ, ಪ್ರವೀಣ ಹಿರೇಮಠ, ಮುತ್ತುರಾಜ ಮಧ್ಯಾಳಿ, ಸಿದ್ದು ಖಿಚಿಡಿ, ರಾಯಪ್ಪ ಶಿರಟ್ಟಿ, ರಮೇಶ ಕರಗಾಂವಿ, ಪ್ರಕಾಶ ನಾಗರಾಳೆ ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು.

Share this article